ಎಂಎಲ್ಎ ಜಗದೀಶ್ ಸಾವು: ಸಂತಾಪ ಸೂಚಿಸಿದ ಗಣ್ಯರು
ಬೆಂಗಳೂರು, ನವೆಂಬರ್ 23 : ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಬಿಜೆಪಿ ಶಾಸಕ ಆರ್.ಜಗದೀಶ್ ಕುಮಾರ್ (58) ವಿಧಿವಶರಾಗಿದ್ದಾರೆ. ಸೋಮವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.
ಜಗದೀಶ್ ಅವರ ಸಾವಿಗೆ ಸಿಎಂ ಸಿದ್ದರಾಮಯ್ಯ, ಸಂಸದ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ ಸುರೇಶ್ ಕುಮಾರ್, ಸಚಿವ ಜಾರ್ಜ್ ಸಂತಾಪ ಸೂಚಿಸಿದ್ದು ಜಗದೀಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.[ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ ಇನ್ನಿಲ್ಲ]
ಶಾಸಕ ಜಗದೀಶ್ ಸಾವಿನ ನಂತರ ಸಿಎಂ ಸಿದ್ದರಾಮಯ್ಯ, ರೋಶನ್ ಬೇಗ್, ಕೆ ಜೆ ಜಾರ್ಜ್, ಕೇಂದ್ರ ಸಚಿವ ಸದಾನಂದ ಗೌಡ, ಪ್ರಹ್ಲಾದ ಜೋಶಿ, ಸಿಟಿ ರವಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು. ಸದಾನಂದ ಗೌಡರು ಅಕ್ಷರಶಃ ಗದ್ಗದಿತರಾಗಿದ್ದರು.

ರಾಜ್ಯದ ವಿಧಾನಸಭೆಗೆ ನಷ್ಟ: ಸಿಎಂ
ಜಗದೀಶ್ ಅವರ ಸಾವು ರಾಜ್ಯದ ವಿಧಾನಸಭೆಗೆ, ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಒಬ್ಬ ಸಂಸದೀಯ ಪಟುವನ್ನು ವಿಧಾನಸಭೆ ಕಳೆದುಕೊಂಡಿದೆ. ಮಧ್ಯಾಹ್ನ ತಾನೇ ಅವರ ಹತ್ತಿರ ಮಾತನಾಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಜಗದೀಶ್ ಶೆಟ್ಟರ್
ಜಗದೀಶ್ ಪ್ರತಿಯೊಂದು ವಿಚಾರವನ್ನು ನನ್ನ ಜತೆ ಚರ್ಚೆ ಮಾಡಿಯೇ ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದರು. ಅಲ್ಲದೇ ಕೆಲವೊಂದು ವೇಳೆ ನನಗೆ ಅವರು ಅಮೂಲ್ಯವಾದ ಸಲಹೆ ನೀಡುತ್ತಿದ್ದರು. ಅವರ ಕುಟುಂಬಕ್ಕೆ ಶಕ್ತಿ ತುಂಬುತ್ತೇನೆ.

ಬಿಎಸ್ ಯಡಿಯೂರಪ್ಪ
ನಾವೆಲ್ಲ ಒಟ್ಟಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು. ಇಂಥ ಧೀಡಿರ್ ಸಾವು ಎಂಥವರನ್ನು ಗರ ಬಡಿದಂತೆ ಮಾಡಿಬಿಡುತ್ತದೆ. ಬಿಜೆಪಿ ಸಕ್ರೀಯ ಕಾರ್ಯಕರ್ತರೊಬ್ಬರನ್ನು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಏನೂ ಹೇಳಲು ಸಾಧ್ಯವಿಲ್ಲ.

ಸುರೇಶ್ ಕುಮಾರ್
ಎಂಎಲ್ ಎ, ಸ್ನೇಹಿತ ಜಗದೀಶ್ ಸಾವು ಆಘಾತ ತಂದಿದೆ. ಅವರ ಕುಟುಂಬಕ್ಕೆ ಧೈರ್ಯ ತುಂಬುತ್ತೇನೆ ಎಂದು ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ರವಿಕೃಷ್ಣ ರೆಡ್ಡಿ
ಸಾವು ಆಘಾತ ತಂದಿದೆ. ಜಗದೀಶ್ ಅವರೊಂದಿಗೆ ಎಷ್ಟೋ ಸಂದರ್ಭ ವಾದ ಮಾಡಿದ್ದೇನೆ. ವಾಹಿನಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅವರಿಗೆ ಶಾಸನಗಳ ಮೇಲೆ ಇದ್ದ ತಿಳಿವಳಿಕೆ, ವಾಕ್ ಚಾತುರ್ಯಕ್ಕೆ ತಲೆಬಾಗದವರೇ ಇಲ್ಲ.












Click it and Unblock the Notifications