ಮತ್ತೆ ರಾತ್ರಿ ಮಳೆಯ ಸುದ್ದಿ, ಒದ್ದೆ ಒದ್ದೆಯಾದ ಬೆಂಗಳೂರು
ಬೆಂಗಳೂರು, ಸೆಪ್ಟೆಂಬರ್ 4: ಮಳೆ ನೀರಿಗೆ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲು ಆಗದ ಬೆಂಗಳೂರಿಗರು. ತಗ್ಗಿನ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು ಎಂಬುದೆಲ್ಲ ಸುದ್ದಿಯೇ ಅಲ್ಲವೇನೋ ಎಂಬಂತಾಗಿದೆ.
ಭಾನುವಾರ ರಾತ್ರಿಯೂ ಭಾರಿ ಮಳೆಯಾಗಿದ್ದು, ಗೊರಗುಂಟೆ ಪಾಳ್ಯ, ಕುರುಬರ ಪಾಳ್ಯ, ಬನಶಂಕರಿ, ಕೆಂಗೇರಿ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವೆಡೆ ಜನರು ಪರದಾಡಿದ್ದಾರೆ.
ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಮೇಯರ್ ಪದ್ಮಾವತಿ ಅವರ ಫೋಟೋ ಇಟ್ಟು, ಅಣಕು ತಿಥಿ ಮಾಡಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಆರಂಭಿಸಿದ್ದ ಬಿಬಿಎಂಪಿ ಅದನ್ನು ನೆಟ್ಟಗೆ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಒತ್ತುವರಿ ತೆರವು ಒಂದೇ ಅಲ್ಲ, ಮಳೆಗಾಲಕ್ಕೆ ಅಂತ ತಯಾರಿ ನಡೆಸಿದ್ದರೂ ಹೀಗಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನು ತಯಾರಿ ಅಂತೀರಾ? ಹಲವು ವಾರ್ಡ್ ಗಳಲ್ಲಿ ಈಗ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೋರಿಗಳಿಗೆ ಕಲ್ಲು-ಮಣ್ಣು ತುಂಬಿ ಕೆಲಸ ಆರಂಭಿಸಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.
ಇನ್ನು ಮೋರಿಗಳಲ್ಲಿ ಬೆಳೆದ ಗಿಡ-ಗಂಟಿಗಳನ್ನು ಸ್ವಚ್ಛಮಾಡಿ, ಪ್ಲಾಸ್ಟಿಕ್ ಅದರೊಳಗೆ ತುಂಬಿಕೊಳ್ಳದಂತೆ ನೋಡಿಕೊಳ್ಳಬೇಕಿತ್ತು. ಆದರೆ ಅದ್ಯಾವುದೂ ಆಗಿಲ್ಲ. ಆ ಕಾರಣಕ್ಕೆ ಈ ಬಾರಿಯ ದಾಖಲೆ ಮಳೆಯ ಪ್ರಮಾಣದಲ್ಲಿ ಬೆಂಗಳೂರಿಗರು ಪರದಾಡುತ್ತಿದ್ದಾರೆ.











Click it and Unblock the Notifications