Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆ: ತಡರಾತ್ರಿ ಬಿಬಿಎಂಪಿ ವಾರ್ ರೂಂಗೆ ಡಿಕೆಶಿ ಭೇಟಿ
ಕರ್ನಾಟಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಈಶಾನ್ಯ ಮಾನ್ಸೂನ್ ತೀವ್ರಗೊಂಡಿದ್ದು ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ, ಸೋಮವಾರ ಮಧ್ಯಾಹ್ನದಿಂದ ತಡರಾತ್ರಿವರೆಗೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ಹಲವು ಕಡೆ ರಸ್ತೆಗಳು ಜಲಾವೃತವಾಗಿದೆ.
ಭಾರಿ ಮಳೆಯ ನಡುವೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ತಡರಾತ್ರಿ ಬಿಬಿಎಂಪಿ ವಾರ್ ರೂಮ್ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ನಗರದಲ್ಲಿ ಮಳೆಯಿಂದ ಎಲ್ಲೆಲ್ಲಿ ಸಮಸ್ಯೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದರು.

ಬುಧವಾರದವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ. ಮಂಗಳವಾರ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದ್ದು, ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ವಿವಿಧೆಡೆ ಹಲವು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಇಂದು ತಡರಾತ್ರಿ ಬಿಬಿಎಂಪಿಯ ವಾರ್ ರೂಂಗೆ ಭೇಟಿನೀಡಿ ಬೆಂಗಳೂರಿನ ವಿವಿಧೆಡೆ ಮಳೆಯಿಂದ ಆಗಿರುವ ಸಮಸ್ಯೆಗಳನ್ನು ಪರಿಶೀಲಿಸಿದೆ. ಹಾಗೆಯೇ ವಾರ್ ರೂಮ್ ಗೆ ಬಂದ ಕರೆ ಸ್ವೀಕರಿಸಿ ಮಾತನಾಡಿದೆ. pic.twitter.com/Bue1hjMrRh
— DK Shivakumar (@DKShivakumar) November 6, 2023
ಸೋಮವಾರ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತಗೊಂಡಿದ್ದು, ಸಂಜೆಯ ವೇಳೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ನಗರದ ಹಲವು ಭಾಗಗಳಲ್ಲಿ ಭಾರಿ ಮಳೆ
ಬೆಂಗಳೂರು ಉತ್ತರ ಭಾಗದಲ್ಲಿ ಬಳ್ಳಾರಿ ರಸ್ತೆ ಮೇಕ್ರಿ ವೃತ್ತದಿಂದ ಹೆಬ್ಬಾಳದವರೆಗೆ ಸಂಜೆ 5 ಗಂಟೆಯಿಂದ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಹೆಬ್ಬಾಳ ಮೇಲ್ಸೇತುವೆಯ ಮೇಲ್ಸೇತುವೆ ಮತ್ತು ಮಾನ್ಯತಾ ಟೆಕ್ ಪಾರ್ಕ್ಗೆ ತೆರಳುವ ಸರ್ವಿಸ್ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು.
ಸ್ಯಾಂಕಿ ರಸ್ತೆ, ಗುಟ್ಟಹಳ್ಳಿ ಮುಖ್ಯರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಸಿ.ವಿ.ರಾಮನ್ ರಸ್ತೆಯ ಕೆಲವೆಡೆ ಮಳೆಯಿಂದಾಗಿ ಸಂಚಾರ ದಟ್ಟಣೆ ಕಂಡುಬಂತು. ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯಿಂದ ಉತ್ತರದಿಂದ ಒಳಬರುವ ಸಂಚಾರ ನಿಧಾನಗತಿಯಲ್ಲಿತ್ತು ಎಂದು ಡಿಸಿಪಿ (ಸಂಚಾರ, ಉತ್ತರ) ಸಚಿನ್ ಘೋರ್ಪಡೆ ಹೇಳಿದ್ದಾರೆ.
ಸರ್ಜಾಪುರ ರಸ್ತೆ, ಸಿಲ್ಕ್ ಬೋರ್ಡ್ ಜೆಎನ್, ಮತ್ತು ಹೊಸೂರು ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ ಭಾಗದಲ್ಲಿ ಕೂಡ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಕಸ್ತೂರಿನಗರ ಬಳಿಯ ಹೊರವರ್ತುಲ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆಯ ಎರಡೂ ಕಡೆಗಳಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿತ್ತು, ಕೆಆರ್ ಪುರಂ ರೈಲು ನಿಲ್ದಾಣದ ಬಳಿಯ ಎಂಎಂಟಿ ಜಂಕ್ಷನ್ನಲ್ಲಿ, ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ ಕಡೆಗೆ ಆರ್ಎಂಜೆಡ್ ಇನ್ಫಿನಿಟಿ ಬಳಿ ಮತ್ತು ದಿ. ಟಿನ್ ಫ್ಯಾಕ್ಟರಿಯಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆ ಕೂಡ ಟ್ರಾಫಿಕ್ ಸಮಸ್ಯೆಯಾಗಿತ್ತು.
ಬಾಣಸವಾಡಿ ಮುಖ್ಯರಸ್ತೆ, ಅನಿಲ್ ಕುಂಬ್ಳೆ ವೃತ್ತ, ಕ್ವೀನ್ಸ್ ಸರ್ಕಲ್, ಕಲ್ಯಾಣ್ ನಗರ 80 ಅಡಿ ರಸ್ತೆ (ಕಲ್ಯಾಣ ನಗರ ಅಂಡರ್ಪಾಸ್ ಬಳಿ), ದಿನ್ನೂರು ಮುಖ್ಯರಸ್ತೆ, ಜಯಮಹಲ್ ಮುಖ್ಯರಸ್ತೆಯ ಸಿಕ್ಯೂಎಎಲ್ ಕ್ರಾಸ್, ವಿದ್ಯಾಶಿಲ್ಪ್ ಮೇಲ್ಸೇತುವೆ ಮತ್ತು ಅಂಡರ್ಪಾಸ್ ಸರ್ವಿಸ್ ರಸ್ತೆ, ಲಾಲ್ಬಾಗ್ ಮುಖ್ಯ ದ್ವಾರ, ಮತ್ತು ವೀರನಪಾಳ್ಯ ಡೌನ್ ರಾಂಪ್ ಸೇರಿದಂತೆ ಹಲವು ರಸ್ತೆಗಳು ಜಲಾವೃತವಾಗಿದ್ದವು.
ಸಿಕೆ ಗಾರ್ಡನ್, ಸೇಂಟ್ ಥಾಮಸ್ ಟೌನ್ನ ಬಾಣಸವಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿಗಳು ಮಳೆನೀರು ಚರಂಡಿಯಿಂದ ಮನೆಗಳಿಗೆ ನುಗ್ಗಿದ್ದರಿಂದ ಪರದಾಡಿದರು.












Click it and Unblock the Notifications