ಲಾರಿಗಳು ಹಗಲು ಬೆಂಗಳೂರು ಪ್ರವೇಶಿಸುವಂತಿಲ್ಲ
ಬೆಂಗಳೂರು, ಡಿ. 23 : ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮೂರು ಟನ್ಗಿಂತ ಹೆಚ್ಚು ಭಾರದ ಸರಕು ಸಾಗಿಸುವ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ರಾತ್ರಿ 10ರ ನಂತರ ಬೆಳಗ್ಗೆ 6 ಗಂಟೆಯೊಳಗೆ ನಗರದೊಳಗೆ ಈ ವಾಹನಗಳು ಸಂಚರಿಸಬಹುದಾಗಿದೆ.
ವಾಹನಗಳ ಸಂಚಾರ ನಿರ್ಬಂಧ ಕುರಿತು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. ಆದೇಶದಂತೆ ಮರಳು, ಕಲ್ಲು, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಸೇರಿದಂತೆ ಕಟ್ಟಡ ಕಾಮಗಾರಿ ಕಚ್ಚಾ ವಸ್ತುಗಳು, ಕೈಗಾರಿಕೆಗೆ ಉಪಯೋಗಿಸುವ ಬೃಹತ್ ಯಂತ್ರೋಪಕರಣಗಳು ಸೇರಿದಂತೆ ಮೂರು ಟನ್ಗೂ ಅಧಿಕ ಭಾರದ ವಸ್ತುಗಳನ್ನು ಹೊತ್ತು ವಾಹನಗಳು ನಗರ ಪ್ರವೇಶಿಸುವಂತಿಲ್ಲ.

ಇವುಗಳಿಗೆ ಅನ್ವಯವಾಗುವುದಿಲ್ಲ : ನೀರು, ಕಸ, ಪೊಲೀಸ್, ಸೇನೆ, ಶವ ಸಂಸ್ಕಾರ ವಾಹನಗಳಿಗೆ ಮೂರು ಟನ್ಗಳ ನಿಷೇಧದ ಮಿತಿ ಅನ್ವಯವಾಗುವುದಿಲ್ಲ. ತೀರಾ ಅನಿವಾರ್ಯ ಎಂಬ ಸ್ಥಿತಿ ಇದ್ದಾಗ ಏಕಗವಾಕ್ಷಿ ಸಮಿತಿಯ ಅನುಮತಿ ಪಡೆದು 3 ಟನ್ಗಿಂತ ಹೆಚ್ಚು ಭಾರದ ಸರಕು ಸಾಗಣೆ ವಾಹನಗಳು ನಗರವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. [ಬೆಂಗಳೂರಿನಲ್ಲಿ ಹೈಬೀಮ್ ಲೈಟ್ ಬಳಕೆ ನಿಷೇಧ]
ಈ ಸಮಯದಲ್ಲಿ ಸಂಚರಿಸಬೇಡಿ : ಹಾಲು, ಹಾಲಿನ ಉತ್ಪನ್ನಗಳು, ಔಷಧ, ಆಮ್ಲಜನಕ ಸಿಲಿಂಡರ್, ಜೈವಿಕ ವೈದ್ಯಕೀಯ ತ್ಯಾಜ್ಯ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಶಾಲೆಗಳಿಗೆ ಪೂರೈಕೆಯಾಗುವ ಬಿಸಿಯೂಟ, ಎಲ್ಪಿಜಿ ಸಿಲಿಂಡರ್, ಅಂಚೆ ಮತ್ತು ಟೆಲಿಗ್ರಾಫ್ ವಾಹನಗಳು ಪೀಕ್ ಅವರ್ ಅಂದರೆ ಬೆಳಗ್ಗೆ 8 ರಿಂದ 11, ಸಂಜೆ 4 ರಿಂದ 8ಗಂಟೆ ಹೊರತುಪಡಿಸಿ ಉಳಿದ ವೇಳೆಯಲ್ಲಿ ಸಂಚರಿಸಬಹುದಾಗಿದೆ.
24 ಗಂಟೆ ನಿಷೇಧ : ಇನ್ನು ಪೊಲೀಸ್ ಆಯುಕ್ತರ ಆದೇಶದ ಅನ್ವಯ ವಿಧಾನಸೌಧದ 2 ಕಿ.ಮೀ ವ್ಯಾಪ್ತಿಯಲ್ಲಿ ಮೂರು ಟನ್ಗಿಂತಲೂ ಅಧಿಕ ಸರಕು ಸಾಗಿಸುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು 24 ಗಂಟೆಯೂ ನಿಷೇಧಿಸಲಾಗಿದೆ.
ಹಿಂದಿನ ಬೇಡಿಕೆ : 3 ಟನ್ಗಿಂತಲೂ ಹೆಚ್ಚು ಸರಕು ಸಾಗಿಸುವ ವಾಹನಗಳು ನಗರದ ಒಳ ಭಾಗದಲ್ಲಿ ಸಂಚರಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಇವುಗಳ ಸಂಚಾರ ನಿಷೇಧಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೇ ಇತ್ತು, ಅದನ್ನು ಈಗ ಜಾರಿಗೆ ತರಲಾಗಿದೆ.












Click it and Unblock the Notifications