ಎರಡನೇ ಆರು ಬೋಗಿಗಳ ಮೆಟ್ರೋ ಸೇವೆಗೆ ಎಚ್ಡಿಕೆ ಚಾಲನೆ
Recommended Video

ಬೆಂಗಳೂರು, ಅ.4: ಎರಡನೇ ಆರು ಬೋಗಿಯ ನಮ್ಮ ಮೆಟ್ರೋ ರೈಲು ಸೇವೆಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಹಸಿರು ನಿಶಾನೆ ತೋರಿದರು.
ಆರು ಬೋಗಿಗಳ ಮೆಟ್ರೋ ನೇರಳೆ ಮಾರ್ಗ( ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ) ದಲ್ಲಿ ಸಂಚರಿಸಲಿದೆ.ಈ ಹಿಂದೆ ನಾಯಂಡಹಳ್ಳಿ ನೇರಳೆ ಮಾರ್ಗಕ್ಕೆ ಮೊದಲ ಬಾರಿಗೆ ಆರು ಬೋಗಿಗಳ ರೈಲು ಸಂಚಾರ ಆರಂಭವಾಗಿತ್ತು. ಹೆಚ್ಚು ಜನದಟ್ಟಣೆ ಇರುವ ಕಾರಣ ಅದೇ ಮಾರ್ಗದಲ್ಲಿ ಮತ್ತೊಂದು ಆರು ಬೋಗಿಯ ಮೆಟ್ರೋ ಸೇರ್ಪಡೆಯಾಗಿದೆ.
ಇದೇ ಸಂದರ್ಭದಲ್ಲಿ ಮೆಟ್ರೋ ನಿಲ್ದಾಣ ಟರ್ಮಿನಲ್ ಗಳ ನಡುವಿನ ಪಾದಚಾರಿ ಮೇಲ್ಸೇತುವೆಯನ್ನು ಹಾಗೂ ಮೆಟ್ರೋ ಟಿಕೆಟ್ ನೀಡುವ ಪ್ರದೇಶದಲ್ಲಿ ಹೊಸ ಪ್ರವೇಶದ್ವಾರವನ್ನು ಉದ್ಘಾಟಿಸಲಾಯಿತು.
ಸಂದರ್ಭದಲ್ಲಿ ಗಂಗಾಂಬಿಕೆ ಮಲ್ಲಿಕಾರ್ಜುನ್, ಉಪ ಮೇಯರ್ ರಮೀಳಾ ಉಮಾಶಂಕರ್, ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಎಫ್ಕೆ ಸಿಸಿಐ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹಾಜರಿದ್ದರು.

ಆರು ಬೋಗಿ ರೈಲಿನ ಪ್ರಮುಖ ಲಕ್ಷಣಗಳು
-ಮೂರು ಬೋಗಿಗಳ ರೈಲಿಗೆ ಹೋಲಿಸಿದರೆ ಶೇ.15ರಷ್ಟು ಇಂಧನ ಉಳಿತಾಯ ಮಾಡಬಹುದಾಗಿದೆ.
-ಸ್ವಯಂ ಚಾಲಿತ ವೆಂಟ್ ವೈಶಿಷ್ಟ್ಯ, ಸುತ್ತುವರೆದ ತಾಪಮಾನ ಸರಿಹೊಂದಿಸಲು ಬಿಸಿ ಗಾಳಿ ಮತ್ತು ಏರ್ ಕಂಡೀಷನ್ ಸಿಸ್ಟಂಗಳನ್ನು ಹೊಂದಿದೆ.
- ವೇರಿಯಬಲ್ ವೋಲ್ಟೇಜ್ ಮತ್ತು ವೇರಿಯಬಲ್ ಫ್ರೀಕ್ವೆನ್ಸಿಗಾಗಿ ರಿಮೋಟ್ ಬೇರ್ಪಡಿಸುವ ವೈಶಿಷ್ಟ್ಯಗಳ ಮೂಲಕ ಟ್ರೈನ್ ಮ್ಯಾನೇಜ್ಮೆಂಟ್ ಸಿಸ್ಟಂ ಇರುತ್ತದೆ.
-ತುರ್ತು ಪರಿಸ್ಥಿತಿಯಲ್ಲಿ ಪೆಂಡೆಂಟ್ ಕಂಟ್ರೋಲ್ ಆಪರೇಷನ್ ಮೂಲಕ ಪ್ರತ್ಯೇಕ 6 ಕಾರ್ ರೈಲುಗಳಲ್ಲಿ 3 ಘಟಕಗಳನ್ನು ಚಲಿಸಲು ಸ್ವಯಂ ಶಕ್ತಿ ಹೊಂದಿರುತ್ತದೆ.

ಮೆಜೆಸ್ಟಿಕ್ ಪಾದಚಾರಿ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತ
ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕೇವಲ ನಾಲ್ಕು ನಿಮಿಷಗಳಲ್ಲಿ ತೆರಳಬಹುದಾದ ಪಾದಚಾರಿ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉದ್ಘಾಟಿಸಿದರು.
ಪಾದಚಾರಿ ಮೇಲ್ಸೇತುವೆ ಒಟ್ಟು 100 ಮೀಟರ್ ಉದ್ದವಾಗಿದ್ದು, ಒಟ್ಟು 1.40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಡಿಸಿಎಂಗೆ ಮಾಲೆ ಹಾಕಿ ಕಾಂಗ್ರೆಸ್ ಗೆ ಜೈಕಾರ
ಮೆಜೆಸ್ಟಿಕ್ ನಿಂದ ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಆರು ಬೋಗಿಯ ಮೆಟ್ರೋ ಮೂಲಕ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಮೇಯರ್ ಗಂಗಾಂಬಿಕೆ, ಉಪ ಮೇಯರ್ ರಮೀಳಾ, ಸಾರಿಗೆ ಸಚಿವ ಡಿಸಿ ತಮ್ಮಣ್ಣ ಪ್ರಯಾಣಿಸಿದರು. ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದಂತೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಂದು ಸಿಎಂ ಎದುರಿಗೆ ಡಿಸಿಎಂ ಪರಮೇಶ್ವರ ಗೆ ಹಾರ ಹಾಕಿ ಕಾಂಗ್ರೆಸ್ ಗೆ ಜೈಕಾರ ಕೂಗಿ ಕುಮಾರಸ್ವಾಮಿಯವರಿಗೆ ಮುಜುಗರ ಉಂಟು ಮಾಡಿದ ಘಟನೆಯೂ ನಡೆಯಿತು.

ಅಕ್ಟೋಬರ್ ಅಂತ್ಯದಲ್ಲಿ ಮತ್ತೊಂದು ಆರು ಬೋಗಿಯ ರೈಲು
ಅಕ್ಟೋಬರ್ ಅಂತ್ಯದಲ್ಲಿ ಮತ್ತೊಂದು ಆರು ಬೋಗಿಯ ರೈಲು ಸೇರ್ಪಡಯಾಗಲಿದೆ. ಈಗಾಗಲೇ ಬೆಮೆಲ್ ನಿಂದ ರೈಲನ್ನು ಪಡೆಯಲಾಗಿದೆ. ಅಧಿಕೃತವಾಗಿ ಸಂಚಾರ ಮಾತ್ರ ಬಾಕಿ ಇದೆ. ಆ ರೈಲು ಕೂಡ ನೇರಳೆ ಮಾರ್ಗದಲ್ಲಿಯೇ ಸಂಚರಿಸಲಿದೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.












Click it and Unblock the Notifications