ಬಿಜಿಎಸ್ ಶಿಕ್ಷಣ ಸಂಸ್ಥೆಗಳಿಗೆ ಶೀಘ್ರ ಡೀಮ್ಡ್ ವಿವಿ ಮಾನ್ಯತೆ: ಸಿಎಂ ಭರವಸೆ
ಬೆಂಗಳೂರು, ನವೆಂಬರ್ 23: ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಹೆಲ್ತ್ ಮತ್ತು ಎಜುಕೇಷನ್ ಕ್ಯಾಂಪಸ್ನಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ನಿರ್ಮಾಣ ಅಗತ್ಯವಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸ್ವಾಮೀಜಿಯವರು ನೀಡಿರುವ ಕೊಡುಗೆ ಸಂಸ್ಮರಣೀಯ ಹೀಗಾಗಿ ಅವರ ಹೆಸರಿನಲ್ಲಿ ಡೀಮ್ಡ್ ವಿವಿ ಮಾನ್ಯತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಬಾಲ ಗಂಗಾಧರ ನಾಥ ಸ್ವಾಮೀಜಿಗಳ ಅವಿರತ ಶ್ರಮದಿಂದ ರಾಜ್ಯದ ಅನೇಕ ಕಡೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ, ಬಿಜೆಎಸ್ ನಲ್ಲಿ ಶಿಕ್ಷಣದ ಜೊತೆಗೆ ದಾರ್ಮಿಕ ಬೋದನೆಯು ಇದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಂತೆ ಕಾರ್ಯನಿರ್ವಹಿಸಲು ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿ ತಂದಿದೆ.
ಕೆಲವೆ ದಿನಗಳಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಎಚ್ಡಿ ಕುಮಾರಸ್ವಾಮಿ ಹೇಳಿದರು.
ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮಾತನಾಡಿ, ಇಡೀ ಸಮಾಜಿಕ ಬದಲಾವಣೆ, ಒಕ್ಕಲಿಗರ ಹಿತರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರು ಬಾಲ ಗಂಗಾಧರ ನಾಥ ಸ್ವಾಮಿಯವರು, ಭವಿಷ್ಯದ ಯುವ ಪೀಳಿಗೆಗೆ ಅವರ ಸೇವಾ ಕಾರ್ಯವನ್ನು ತಿಳಿಸಬೇಕಿದೆ, ಒಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನಾನು ಈ ಮಟ್ಟಕ್ಜೆ ಬೆಳೆದು ನಿಂತಿದ್ದರೆ ಅದಕ್ಕೆ ಬಾಲಗಂಗಾಧರ ನಾಥ ಸ್ವಾಮಿಗಳು ಕಾರಣ, ಈ ಕ್ಯಾಂಪಸ್ ಅನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಾರ್ಯನಿರ್ವಹಿಸಲಾಗುವುದು ಎಂದರು.












Click it and Unblock the Notifications