ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಮರು ಆಯ್ಕೆ
ಬೆಂಗಳೂರು, ನ.13: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಕ್ಷದ ಸಾರಥ್ಯವನ್ನು ಹಾಲಿ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹೆಗಲಿಗೆ ನೀಡಲು ಕೊನೆಗೂ ಸಮ್ಮತಿಸಿ, ಗುರುವಾರ ಮಧ್ಯಾಹ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಪ್ರತಿಕಾಗೋಷ್ಠಿಯಲ್ಲಿ ಕುಟುಂಬ ರಾಜಕೀಯವನ್ನು ಸಮರ್ಥಿಸಿಕೊಂಡರು. ಎ. ಕೃಷ್ಣಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಜೆಡಿಎಸ್ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಸಿಗಲಿದೆ. ಜ್ಯೋತಿಷಿಗಳ ಮಾತಿಗೆ ದೇವೇಗೌಡರು ಮಣಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಅದರೆ, ನಮ್ಮ ಕುಟುಂಬದಿಂದ ಮಹಿಳೆಯರು(ಅನಿತಾ ಅಥವಾ ಭವಾನಿ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸದ್ಯಕ್ಕೆ ಏರುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದರು. ಉಳಿದಿದ್ದ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಶಾಸಕಿ ಶಾರದಾಪೂರ್ಯ ನಾಯಕ್ ನಾನು ದೊಡ್ಡ ಹುದ್ದೆ ಹೊರಲು ಸಿದ್ಧಳಿಲ್ಲ ಎಂದು ಘೋಷಿಸಿಬಿಟ್ಟರು. [ಕೇರಳದ ಜ್ಯೋತಿಷಿ ನುಡಿದ ಭವಿಷ್ಯವೇನು?]
ಚುನಾವಣೆ ಹಿತದೃಷ್ಟಿಯಿಂದ ಆಯ್ಕೆ: ಪಕ್ಷದ ಶಾಸಕರು ಹಾಗೂ ಹಿರಿಯರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬರಲಾಗಿದೆ. ಕುಮಾರಸ್ವಾಮಿ ಅವರಿಗೆ ಪಕ್ಷದ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯವಿದೆ, ಅನುಭವವಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. [ಕೋರ್ ಕಮಿಟಿ ಸದಸ್ಯರ ಪಟ್ಟಿ]
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಭವಿಷ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡುಈ ತೀರ್ಮಾನಕ್ಕೆ ಬರಲಾಗಿದೆ ಎಂದು ದೇವೇಗೌಡರು ತಮ್ಮ ಮಗನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯ ಇನ್ನಷ್ಟು ವಿವರ ಮುಂದಿದೆ...

ಪಕ್ಷದ ಸಂಘಟನೆಗಾಗಿ ಎಚ್ಡಿಕೆ ಆಯ್ಕೆ ಏಕೆ?
* ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷವನ್ನು ಮತ್ತೆ ತಳಮಟ್ಟದಿಂದ ಸಂಘಟಿಸುವುದು ಹಾಗೂ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸರಿಸಮನಾಗಿ ಹೋರಾಟ ನಡೆಸಲು ಕುಮಾರಸ್ವಾಮಿ ಸೂಕ್ತ ಆಯ್ಕೆ
* ಬಹುತೇಕ ಶಾಸಕರು ಮತ್ತು ಕೋರ್ ಕಮಿಟಿ ಸದಸ್ಯರು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿ ಹೆಗಲಿಗೆ ನೀಡಬೇಕೆಂದು ಒತ್ತಾಯಿಸಿದ್ದರು.
* ಆಡಳಿತರೂಢ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಬಲವಾಗಿ ಬೇರೂರುತ್ತಿರುವ ಬಿಜೆಪಿ ವಿರುದ್ಧ ಸೆಣಸಾಡಲು ಕುಮಾರಸ್ವಾಮಿಯೇ ಪಕ್ಷದ ರಾಜ್ಯಾಧ್ಯಕ್ಷರಾಗಬೇಕು ಎಂಬ ಒತ್ತಡ ಕೇಳಿ ಬಂದಿತ್ತು.
* ಮೈಸೂರು-ಕರ್ನಾಟಕ, ಮುಂಬೈ-ಹೈದರಾಬಾದ್ ಕರ್ನಾಟಕದಲ್ಲಿ ಕುಮಾರಸ್ವಾಮಿಗೆ ಸಾಕಷ್ಟು ವರ್ಚಸ್ಸು ಇರುವುದರಿಂದ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಹೆಚ್ಚಿನ ಮತ ಸೆಳೆಯಬಹುದು.

ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಏಕೆ ನೀಡಿಲ್ಲ?
ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಉತ್ತಮ ಭವಿಷ್ಯವಿದೆ ಎಂಬ ಜ್ಯೋತಿಷಿಗಳ ಸಲಹೆಯಂತೆ ಗೌಡರು ಪ್ರಮುಖರೊಬ್ಬರಿಗೆ ಈ ಸ್ಥಾನ ನೀಡಲು ಮುಂದಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಎಚ್ಡಿಕೆ ಅವರ ಪರ ಕಾರ್ಯಕರ್ತರು ತೀವ್ರವಾಗಿ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹಿಳಾ ಅಧ್ಯಕ್ಷರ ನೇಮಕ ಪ್ರಕ್ರಿಯೆ ಅಲ್ಲಿಗೆ ನಿಲ್ಲಿಸಲಾಯಿತು.
ದೇವರನ್ನು ನಂಬುತ್ತೇವೆ ಅದರೆ, ಮೂಢನಂಬಿಕೆಯನ್ನಲ್ಲ, ಜನಪರ ಕೆಲಸ ಮಾಡುವವರ ಪರ ದೇವರಿರುತ್ತಾನೆ ಎಂದು ದೇವೇಗೌಡರು ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿದ್ದ ಮಹಿಳೆಯರು
ಶಾಸಕಿ ಶಾರದಾಪೂರ್ಯ ನಾಯಕ್, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಹೆಸರುಗಳು ಚಾಲ್ತಿಯಲ್ಲಿದ್ದವು. ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ದಿ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಬಹುತೇಕ ಪಕ್ಷದ ಪ್ರಮುಖರು ಮಹಿಳೆಯರಿಗೆ ಬದಲು ಕುಮಾರಸ್ವಾಮಿ ಹೆಗಲಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಗೌಡರ ಮೇಲೆ ನಿರಂತರವಾಗಿ ಒತ್ತಡ ಹಾಕಿದ್ದರು.

ಜೆಡಿಎಸ್ ಹೊಸ ಸಾರಥಿಗಳ ವಿವರ
ಅಧ್ಯಕ್ಷ: ಎಚ್ ಡಿ ಕುಮಾರಸ್ವಾಮಿ
ಉಪಾಧ್ಯಕ್ಷ: ಮಹಾಂತೇಶ್ ಕವಗಿ ಮಠ, ಅಮರನಾಥ್ ಶೆಟ್ಟಿ
ಕಾರ್ಯದರ್ಶಿ : ದಿನಕರ್ ಶೆಟ್ಟಿ, ಶಾರದಾಪೂರ್ಯ ನಾಯಕ್, ರಿಯಾಜ್ ,ಮೀನಾಕ್ಷಿ ನಂದೀಶ್,
ಕಾರ್ಯಾಧ್ಯಕ್ಷ: ನಾರಾಯಣ ರಾವ್












Click it and Unblock the Notifications