ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಕುಮಾರಣ್ಣನಿಗೆ ಪತ್ರ ಬರೆಯಿರಿ
ಬೆಂಗಳೂರು, ಡಿಸೆಂಬರ್ 01 : 2018ರ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸಲು ಈಗಾಗಲೇ ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸಪ್ ಮೂಲಕವೂ ಜನರನ್ನು ತಲುಪುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರು ಇದೀಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಭಾವನೆಗಳನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ.
ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸಪ್ ಉಪಯೋಗಿಸದವರು ತಮ್ಮ ಕಷ್ಟ-ಕಾರ್ಪಣ್ಯಗಳು ಹಾಗೂ ಸಲಹೆ ಸೂಚನೆಗಳನ್ನು ಹಂಚಿಕೊಳ್ಳಲು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೊಸ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿದ್ದಾರೆ.
ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಬೇಕೆಂದು ಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇದನ್ನು ಅರಿತಿರುವ ಕುಮಾರಸ್ವಾಮಿ ಅವರು ಜನರ ವಿಚಾರಗಳನ್ನು ತಿಳಿದುಕೊಳ್ಳಲು ಹೊಸ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ.
ಇದು ಚುನಾವಣೆ ಹೊಸ್ತಿಲಲ್ಲಿ ಮತದಾರರನ್ನು ಸೆಳೆಯಲು ಗಿಮಿಕ್ ಅಂತ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಯಾವೊಬ್ಬ ನಾಯಕ ಜನರ ಭಾವನೆಗಳನ್ನು ಅರಿಯಲು ಮುಂದಾಗಿಲ್ಲ. ಆದರೆ, ಕುಮಾರಸ್ವಾಮಿ ಅವರು ಮುಂದಾಗುತ್ತಿರುವ ನಿಜಕ್ಕೂ ಸಂತೋಷದ ಸಂಗತಿ ಎನ್ನುವುದು ಕೆಲವರ ಅಭಿಪ್ರಾಯ.
ಹಾಗಿದ್ದರೇ ಜನರು ತಮ್ಮ ನೋವು-ನಲಿವುಗಳನ್ನು ಹಾಗೂ ಸಲಹೆ ಸೂಚನೆಗಳನ್ನು ಕುಮಾರಸ್ವಾಮಿ ಜತೆ ಹೇಗೆ ಹಂಚಿಕೊಳ್ಳಬೇಕು ಎನ್ನುವುದನ್ನು ಮುಂದೆ ಓದಿ.

ವಿಚಾರಗಳನ್ನು ಪತ್ರದ ಮೂಲಕ ಕಳುಹಿಸಬಹುದು
ರಾಜ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ವಿಚಾರಗಳನ್ನು ಪತ್ರದ ಮೂಲಕ ಬರೆದು ಕಳುಹಿಸಲು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ರಾಜ್ಯ ಪ್ರವಾಸ ಮಾಡುವಾಗ, ಸಾಕಷ್ಟು ಜನ ನನ್ನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದರು. ಅತಿಯಾದ ಜನ ದಟ್ಟಣೆಯಿಂದಾಗಿ ಸಾಕಷ್ಟು ಜನರು ತಮ್ಮ ನೋವು- ನಲಿವು ಹೇಳಿಕೊಳ್ಳಲು ಸಾಧ್ಯವಾಗದೆ ನಿರಾಶೆಯಿಂದ ಹಿಂದಕ್ಕೆ ಹೋಗಿದ್ದನ್ನು ನೋಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಪ್ರತಿ ವ್ಯಕ್ತಿಯ ಭಾವನೆಗಳಿಗೂ ಸ್ಪಂದಿಸಬೇಕೆಂಬ ಹಂಬಲ
'ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಭಾವನೆಗಳಿಗೂ ಸ್ಪಂದಿಸಬೇಕು ಎಂಬುದು ನನ್ನ ಹಂಬಲ. ನಿಮ್ಮ ನೋವು, ನಲಿವು, ಸಲಹೆ ಸೂಚನೆಗಳನ್ನು ಪತ್ರದ ಮೂಲಕ ಬರೆದು ಹಂಚಿಕೊಳ್ಳಬಹುದು' ಎಂದು ಅವರು ಮನವಿ ಮಾಡಿದ್ದಾರೆ.

ಅಭಿವೃದ್ಧಿಯ ವಿಚಾರದ ಸಲಹೆ ಸೂಚನೆಗಳು
'ಕೇವಲ ನೋವು-ನಲಿವುಗಳನ್ನು ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಯ ವಿಚಾರವಾಗಿ ನಿಮ್ಮ ಸಲಹೆ ಸೂಚನೆಗಳನ್ನು ನನಗೆ ತಿಳಿಸಬಹುದು' ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.

ಪತ್ರವನ್ನು ತಲುಪಿಸಬೇಕಾದ ವಿಳಾಸ
ಎಚ್ ಡಿ ಕುಮಾರಸ್ವಾಮಿ,
ರಂಕ ಎಂಕ್ಲೇವ್ ಅಪಾರ್ಟ್ ಮೆಂಟ್
#217, ಸರ್ ಸಿ.ವಿ ರಾಮನ್ ರಸ್ತೆ,
ಬೆಂಗಳೂರು - 560080












Click it and Unblock the Notifications