ಬಿಜೆಪಿ ಜೊತೆ ಸರ್ಕಾರ ಮಾಡಿದಾಗಿನಿಂದ ದೇವೇಗೌಡರ ಆರೋಗ್ಯ ಹದಗೆಟ್ಟಿದೆ: ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 3: ಜಾತ್ಯತೀತ ಜನತಾದಳ ಪಕ್ಷದ ರಾಜ್ಯ ಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ಣಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ 65 ಮಂದಿ ಆಯ್ಕೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಚುನಾವಣಾಧಿಕಾರಿ ಹೆಚ್.ಸಿ.ನೀರಾವರಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಹೆಚ್.ಸಿ.ನೀರಾವರಿ ಅವರನ್ನು ಹೆಚ್.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಷೆಂಪೂರ್, ಎನ್.ಎಂ.ನಬಿ, ರಾಜಾ ವೆಂಕಟಪ್ಪ ನಾಯಕ ಮುಂತಾದವರು ಸನ್ಮಾನಿಸಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ: ವಿಧಾನಸಭೆ ಅಧಿವೇಶನ ಕರೆಯುವಂತೆ ಎಚ್ಡಿಕೆ ಆಗ್ರಹ
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯದ ಸಾಂಸ್ಥಿಕ ಚುನಾವಣೆ ಪೂರ್ಣವಾಗಿ ಮತ್ತು ನಿಯಮಬದ್ಧವಾಗಿ ನಡೆಸಿದ ಹೆಚ್.ಸಿ. ನೀರಾವರಿ ಅವರನ್ನು ಅಭಿನಂದಿಸಿದರು. ಈವರೆಗೆ ಪಕ್ಷದ ಚುನಾವಣೆಗಳನ್ನು ನಾವು ನಿರ್ಲಕ್ಷ್ಯ ಮಾಡಿದ್ದೇವೆ ಎನ್ನುವ ನೋವು ಪಕ್ಷದ ವರಿಷ್ಠ ದೇವೇಗೌಡರಿಗೆ ಇತ್ತು, ಈಗ ಮತ್ತೆ ಚುನಾವಣೆ ನಡೆಸುವ ಮೂಲಕ ಆ ಕೊರತೆಯನ್ನು ನೀರಾವರಿ ಅವರು ನೀಗಿಸಿದ್ದಾರೆ ಎಂದು ಹೇಳಿದರು.
ವೇದಿಕೆ ಮೇಲೆ ಭಾವುಕರಾದ ಹೆಚ್.ಡಿ.ಕುಮಾರಸ್ವಾಮಿ
ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಬೇಕು, ಇನ್ನು ಮುಂದೆ ಹಗಲಿರುಳು ಪಕ್ಷ ಕಟ್ಟುವ ಕಾಯಕ ಮಾಡಬೇಕು. ಯಾರೂ ವಿಶ್ರಮಿಸಬಾರದು, ಈ ಸಭೆ ಅವರ ಸಮ್ಮುಖದಲ್ಲಿ ನಡೆಯಬೇಕಿತ್ತು ಎಂದು ಕುಮಾರಸ್ವಾಮಿ ತಮ್ಮ ಹೆಚ್.ಡಿ.ದೇವೇಗೌಡ ಅವರನ್ನು ನೆನೆದು ಭಾವುಕರಾದರು. ತಂದೆಯವರ ಆರೋಗ್ಯವನ್ನು ನೆನಪಿಸಿಕೊಂಡು ಸಭೆಯಲ್ಲಿ ಕಣ್ಣೀರಿಟ್ಟರು.
ಪ್ರತಿದಿನ ನನ್ನೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ತಂದೆಯವರಲ್ಲಿಗೆ ಓಡುತ್ತೇನೆ. ಅವರ ಆರೋಗ್ಯವೇ ಮುಖ್ಯವಾಗಿದೆ. ನನಗೆ ಅಧಿಕಾರಕ್ಕಿಂತ ನಮ್ಮ ತಂದೆಯವರ ಆರೋಗ್ಯ ಮುಖ್ಯ. ನನಗೆ ತಂದೆಗಿಂತ ಮುಖ್ಯಮಂತ್ರಿ ಪದವಿ ದೊಡ್ಡದಲ್ಲ ಎಂದು ಕಣ್ಣೀರಿಟ್ಟ ಕುಮಾರಸ್ವಾಮಿ ಅವರನ್ನು ಇಬ್ರಾಹಿಂ ಹಾಗೂ ವೇದಿಕೆ ಮೇಲಿದ್ದ ಎಲ್ಲ ನಾಯಕರು ಸಂತೈಸಿದರು
ಬಿಜೆಪಿ ಜೊತೆ ಸರ್ಕಾರ ರಚಿಸಿದ್ದು ತಪ್ಪಾಯಿತು
ಮುಂದುವರಿದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ಮಾಡಿದೆ. ನಮ್ಮ ತಂದೆ ಅವರ ಆರೋಗ್ಯ ಹದಗೆಟ್ಟಿದ್ದು ಆಗಲೇ. ಅದರ ನೋವು ಎಂಥದು ಎನ್ನುವುದು ನನಗೆ ಈಗ ಅರ್ಥವಾಗುತ್ತಿದೆ. ಸ್ವತಂತ್ರ ಸರಕಾರ ಬರಬೇಕು ಎನ್ನುವುದು ದೇವೇಗೌಡರ ಕನಸು. ಆ ಕನಸನ್ನು ನನಸು ಮಾಡಬೇಕು. ಇದೆಲ್ಲ ನಮ್ಮೆಲ್ಲರ ಹೊಣೆ ಎಂದು ಅವರು ಹೇಳಿದರು.
ಸಿ.ಎಂ.ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ 65 ಜನ ನಾಯಕರು ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ರಾಹಿಂ ಅವರು ಹಿಂದೆ ಅಧ್ಯಕ್ಷರಾಗಿದ್ದಾಗ ಪಕ್ಷ ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಈಗ ಅದೇ ಇತಿಹಾಸ ಮರುಕಳಿಸಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಜಲಧಾರೆ ಮುಂದೆ ಸಿದ್ದರಾಮೋತ್ಸವ ಸಪ್ಪೆ
ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಕಾರ್ಯಕ್ರಮದಲ್ಲಿ ಪಕ್ಷದ ಮೂಲ ನಾಯಕರು ಅಕ್ಕಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದರು. ಬೇರೆ ಪಕ್ಷಗಳಿಂದ ವಲಸೆ ಹೋಗಿರುವ ನಾಯಕರು ಮಿಂಚುತ್ತಿದ್ದಾರೆ ಎಂದರು.
ಜೆಡಿಎಸ್ನ ಜಲಧಾರೆ ಸಮಾವೇಶದ ಮುಂದೆ ಸಿದ್ದರಾಮೋತ್ಸವ ಸಪ್ಪೆಯಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಿಂಗಳುಗಟ್ಟಲೆ ಸಿದ್ಧತೆ ನಡೆಸಿದರೂ ಅದರ ಸಮಾವೇಶ ವಿಫಲವಾಗಿದೆ. ಅದರ ಶಕ್ತಿ ಪ್ರದರ್ಶನ ಏನೆಂಬುದು ಜನತೆಗೆ ಚೆನ್ನಾಗಿ ಗೊತ್ತಾಗಿದೆ. ಆದರೆ, ನಮ್ಮ ಜಲಧಾರೆ ಮುಂದೆ ಅದು ಏನೂ ಅಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ಗೆ ಶುಭ ಸೂಚನೆ ಎಂದ ಇಬ್ರಾಹಿಂ
ಜೆಡಿಎಸ್ ನೂತನ ಅಧ್ಯಕ್ಷ ಇಬ್ರಾಹಿಂ ಮಾತನಾಡಿ, ಪಕ್ಷದ ಸಾಂಸ್ಥಿಕ ಚುನಾವಣೆ ಮುಗಿದು ನಾನು ಸೇರಿ ಕಾರ್ಯಕಾರಿಣಿ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಶುಭ ಸೂಚನೆ ಎಂದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ನೂತನ ಅಧ್ಯಕ್ಷ ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಣಿ ಮಂಡಳಿ ನೂತನ ಸದಸ್ಯರು, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.