ಅರ್ಚಕರ ಕೈ ಜಾರಿದ 'ಸರ್ಕಲ್ ಮಾರಮ್ಮ' ಒಡವೆ
ಬೆಂಗಳೂರು, ಮಾ.2: ನಗರದ ಮಲ್ಲೇಶ್ವರಂನ ಶಕ್ತಿ ದೇವತೆ ಸರ್ಕಲ್ ಮಾರಮ್ಮ ದೇವಸ್ಥಾನದ ಸುಪರ್ದಿ ಕುರಿತಂತೆ ರಾಜ್ಯದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವರ ಒಡವೆ, ವಸ್ತ್ರ ಹಾಗೂ ದೇಗುಲದ ಅಸ್ತಿಯನ್ನು ಆಡಳಿತ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ದೇಗುಲದ ಪ್ರಧಾನ ಅರ್ಚಕರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಸರ್ಕಲ್ ಮಾರಮ್ಮ ದೇಗುಲದ ಟ್ರಸ್ಟ್ ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮುಜುರಾಯಿ ಇಲಾಖೆ ಇತ್ತೀಚೆಗೆ ದೇಗುಲವನ್ನು ಜಪ್ತಿ ಮಾಡಿ ಇಲಾಖೆ ವ್ಯಾಪ್ತಿಗೆ ಸೇರಿಸಿಕೊಂಡಿತ್ತು. ಸರ್ಕಾರಿ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಮುಜರಾಯಿ ಇಲಾಖೆ ಕ್ರಮವನ್ನು ಪ್ರಶ್ನಿಸಿ ಪ್ರಧಾನ ಅರ್ಚಕ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಮೇಲ್ಕಂಡ ಆದೇಶ ನೀಡಿದೆ. ಆದರೆ, ದೇಗುಲದ ಪೂಜೆ ಪುನಸ್ಕಾರಗಳು ಎಂದಿನಂತೆಯೇ ನಡೆಯಲಿದೆ. ಪೂಜೆ-ಪುನಸ್ಕಾರ ವಿಷಯದಲ್ಲಿ ಆಡಳಿತಾಧಿಕಾರಿ ಮಧ್ಯ ಪ್ರವೇಶಿಸುವಂತಿಲ್ಲ. ಆದರೆ, ದೇಗುಲದ ಸಂಪತನ್ನು ಆಡಳಿತಾಧಿಕಾರಿಯ ಸುಪರ್ದಿಗೆ ಒಪ್ಪಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಮುಜರಾಯಿ ವಶಕ್ಕೆ ಮಾರಮ್ಮ: ಕರ್ನಾಟಕ ಸರ್ಕಾರ ಫೆ.4ರಂದು ಆದೇಶ ಹೊರಡಿಸಿ ಮಾರಮ್ಮ ದೇವಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ವಿಶೇಷ ಜಿಲ್ಲಾಧಿಕಾರಿ ಶೈಲಜಾ ಅವರನ್ನು ನೇಮಕ ಮಾಡಿತ್ತು. ನಂತರ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಜಯಪ್ರಕಾಶ್, ಸರ್ಕಾರಿ ಮೌಲ್ಯಮಾಪಕ ವೇದಮೂರ್ತಿ ಆಚಾರ್ ಮುಂತಾದ ಅಧಿಕಾರಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಸರ್ಕಲ್ ಮಾರಮ್ಮ ದೇಗುಲವನ್ನು ಮುಜರಾಯಿ ಇಲಾಖೆ ವಶಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕಾಂಪೌಂಡ್ಗೆ ಹೊಂದಿಕೊಂಡಂತೆ ಇರುವ 50 ವರ್ಷಗಳಿಂದ ಬೆಂಗಳೂರಿಗರ ನೆಚ್ಚಿನ ದೇವತೆ ಸರ್ಕಲ್ ಮಾರಮ್ಮ ಕೊನೆಗೂ ಟ್ರಸ್ಟ್ ನಿಂದ ಸರ್ಕಾರದ ಅಧಿಕಾರಕ್ಕೆ ಒಳಪಟ್ಟಿದೆ.ಸುಮಾರು ಎರಡು ಗುಂಟೆ ವಿಸ್ತೀರ್ಣದಲ್ಲಿರುವ ದೇವಸ್ಥಾನವನ್ನು ನರಸಯ್ಯ ಎಂಬುವರು ಸ್ಥಾಪಿಸಿದ್ದರು. ಅವರ ನಿಧನ ನಂತರ ಅವರ ಪುತ್ರ ಶ್ರೀನಿವಾಸ್ ಅವರು ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತ, ದೇಗುಲದ ಪ್ರಧಾನ ಅರ್ಚಕರೆನಿಸಿ, ಟ್ರಸ್ಟ್ ಸ್ಥಾಪಿಸಿ ಎಲ್ಲವನ್ನು ನಿಭಾಯಿಸುತ್ತಾ ಬಂದಿದ್ದಾರೆ.
ಆದರೆ, ದೇವಸ್ಥಾನದ ಸಮಿತಿಯಾಗಲಿ, ಟ್ರಸ್ಟ್ ಆಗಿ ನೋಂದಣಿಯಾಗಿರಲಿಲ್ಲ. ದೇಗುಲಕ್ಕೆ ಸೇರಿರುವ ಚಿನ್ನಾಭರಣಗಳ ಮೌಲ್ಯಮಾಪನ ಕೂಡಾ ನಡೆದಿರಲಿಲ್ಲ. ದೇಗುಲದ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆ ಇರಲಿಲ್ಲ. ಹೀಗಾಗಿ ದೇಗುಲದಿಂದ ಬರುವ ಹಣವೆಲ್ಲ ಶ್ರೀನಿವಾಸ್ ಅವರ ಜೇಬು ಸೇರುತ್ತಿತ್ತು. ದೇಗುಲದ ಆಡಿಟ್ ನಡೆದಿಲ್ಲ ಎಂದು ಮೌಲ್ಯಮಾಪಕ ವೇದಮೂರ್ತಿ ಹೇಳಿದ್ದಾರೆ.
ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ 5 ಕೆಜಿಗೂ ಅಧಿಕ ಚಿನ್ನಾಭರಣ ಪತ್ತೆಯಾಗಿದೆ. ಆದರೆ ದೇವಸ್ಥಾನದ ದಿನನಿತ್ಯದ ವ್ಯವಹಾರಗಳು, ಹಣಕಾಸು, ಆಸ್ತಿ ಬಗ್ಗೆ ದಾಖಲೆ ಸಿಕ್ಕಿಲ್ಲ. ಶ್ರೀನಿವಾಸ್ ಅವರು ಕೆನರಾ ಬ್ಯಾಂಕಿನಲ್ಲಿ ತಮ್ಮ ಹೆಸರಿನಲ್ಲಿ ಒಂದು ಖಾತೆ ಹೊಂದಿದ್ದಾರೆ. ಮುಜರಾಯಿ ಇಲಾಖೆಗೆ ದೇಗುಲ ಸೇರಿಸುವುದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ ಆದೇಶದಿಂದ ಹಿನ್ನಡೆ ಅನುಭವಿಸಿದ್ದು, ಸಮಸ್ತ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.












Click it and Unblock the Notifications