ನಿತ್ಯಾನಂದ ವಿರುದ್ಧದ ಜಾಮೀನು ರಹಿತ ವಾರೆಂಟ್ ರದ್ದು
ಬೆಂಗಳೂರು, ಆ.1: ವಿವಾದಿತ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿರುದ್ಧ ರಾಮನಗರ ಕೋರ್ಟ್ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಅನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಆದರೆ, ಪುರುಷತ್ವ ಪರೀಕ್ಷೆಗೆ ಸಿಐಡಿ ನಿಗದಿಪಡಿಸಿದ ದಿನಾಂಕಕ್ಕೆ ಅಸ್ತು ಎಂದಿದೆ.
ನಿತ್ಯಾನಂದನ ವಿರುದ್ಧ ಸಿಐಡಿ ತನಿಖೆ ಹಾಗೂ ಪುರುಷತ್ವ ಪರೀಕ್ಷೆ ನಡೆಸುವಂತೆ ರಾಮನಗರದ ಸಿಜೆಎಂ ಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಆದರೆ ರಾಮನಗರ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿತ್ಯಾನಂದ ಮತ್ತು ಇತರೆ ನಾಲ್ವರು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಸ್. ಪಚ್ಚಾಪುರೆ ಅವರ ಏಕ ಸದಸ್ಯ ಪೀಠ ನಿತ್ಯಾ ಹಾಗೂ ಇತರ ನಾಲ್ವರು ವಿರುದ್ಧದ ವಾರಂಟ್ ಗೆ ಒಂದು ದಿನದ ತಡೆಯಾಜ್ಞೆ ವಿಧಿಸಿತ್ತು.
ಆದರೆ, ಶುಕ್ರವಾರ ನಿತ್ಯಾನಂದ ವಿರುದ್ಧದ ವಾರಂಟ್ ರದ್ದುಗೊಳಿಸಿರುವ ನ್ಯಾ.ಪಚ್ಚಾಪುರೆ ಅವರು, ಆಗಸ್ಟ್ 6ರಂದು ಬೆಳಗ್ಗೆ 10ಗಂಟೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಪುರುಷತ್ವ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಆಗಸ್ಟ್ 18ರಂದು ರಾಮನಗರ ಕೋರ್ಟಿಗೆ ಹಾಜರಾಗುವಂತೆ ಆದೇಶಿಸಿದ್ದಾರೆ.[ಪುರುಷತ್ವ ಪರೀಕ್ಷೆಗೆ ಮುಹೂರ್ತ ಫಿಕ್ಸ್]

ನಿತ್ಯಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ(ಜು.16) ತೆರವುಗೊಳಿಸಿತ್ತು. ಈ ಮೂಲಕ ನಿತ್ಯಾನಂದ ಅವರು ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಸಿಐಡಿಯಿಂದ ವಿಚಾರಣೆ, ವೈದ್ಯಕೀಯ ಪರೀಕ್ಷೆಗೆ ಒಳಪಡಲು ಇದ್ದ ಅಡ್ಡಿ ದೂರಾಗಿತ್ತು.
ನಿತ್ಯಾನಂದ ಆಶ್ರಮವಾಸಿಯಾಗಿದ್ದ ಆರತಿ ಹಾಗೂ ಇನ್ನಿತರು ನೀಡಿದ್ದ ದೂರನ್ನು ಆಧಾರವಾಗಿಟ್ಟುಕೊಂಡು ಸಿಐಡಿ ಪೊಲೀಸರು ಸಿಆರ್ ಪಿಸಿ 53(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹೈಕೋರ್ಟ್ ನ್ಯಾ. ವಿ ಜಗನ್ನಾಥನ್ ಅವರಿರುವ ನ್ಯಾಯಪೀಠ ನೀಡಿರುವ ಆದೇಶದ ಪ್ರಕಾರ ಸಿಐಡಿ ಪೊಲೀಸರು ಈ ಕೂಡಲೇ ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬಹುದಾಗಿದೆ.[ಹೋರಾಟಗಾರರನ್ನು ಕೆಣಕಿದ ನಿತ್ಯಾನಂದ]












Click it and Unblock the Notifications