ಚಳ್ಳಕೆರೆಯ ಹವಾಲಾ ದಲ್ಲಾಳಿ ವೀರೇಂದ್ರಗೆ ಷರತ್ತುಬದ್ಧ ಜಾಮೀನು
ಬೆಂಗಳೂರು,ಜನವರಿ 25: ಸ್ನಾನಗೃಹದಲ್ಲಿ ಕೋಟ್ಯಂತರ ರು ಹಣ, ಚಿನ್ನ ಬಚ್ಚಿಟ್ಟು ಐಟಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದ ಹವಾಲಾ ದಲ್ಲಾಳಿ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿಗೆ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಹವಾಲಾ ದಲ್ಲಾಳಿ ಕೆ.ಸಿ. ವೀರೇಂದ್ರ ಮೆನೆಯಲ್ಲಿ ಸಿಕ್ಕ ಹಣವನ್ನು ಸಿಬಿಐ ವಶಪಡಿಸಿಕೊಂಡು ಬ್ಯಾಂಕಿಗೆ ಪಾವತಿ ಮಾಡಿದೆ. ಹಾಗೆಯೇ ಪ್ರಕರಣದ ನಿಜವಾದ ಆರೋಪಿ ಯಾರು ಎಂಬುದು ಇನ್ನು ಪತ್ತೆಹಚ್ಚಿಲ್ಲ ಹೀಗಾಗಿ ನಮ್ಮ ಕಕ್ಷಿದಾರನ ಬಳಿ ಇದ್ದ ಹಣ ಕಾನೂನು ಬಾಹಿರವೆಂದು ಪರಿಗಣಿಸಿ ಜಾಮೀನು ನೀಡಬೇಕೆಂದು ಅರ್ಜಿದಾರ ಪರ ವಕೀಲ ಎಚ್.ಎಸ್.ಚಂದ್ರಮೌಳಿ ಅವರು ವಾದ ಮಂಡಿಸಿದ್ದು, ವೀರೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ವಿಚಾರಗೊಳಪಡಿಸಿ ಜಾಮೀನು ನೀಡಿದೆ.[ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]
ಇನ್ನು ವೀರೇಂದ್ರ ಅವರಿಗೆ ವಂಚನೆ ಮತ್ತು ನಂಬಿಕೆ ದ್ರೋಹದಡಿ ದಾಖಲಿಸಿರುವ ಕ್ರಿಮಿನಲ್ ಆರೋಪ ಸುಳ್ಳು. ಅವರು ಯಾವುದೇ ಮೋಸ ಮಾಡಿಲ್ಲ. ತಮ್ಮ ವ್ಯವಹಾರದ ಹಣವನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇದಕ್ಕೆ ಆದಾಯ ತೆರಿಗೆ ಅಧಿಕಾರಿಗಳಿಗೆ ಲೆಕ್ಕ ಕೊಡಬಲ್ಲರು ಎಂದು ವಾದ ಮಂಡಿಸಿ ಜಾಮೀನು ಕೋರಲಾಗಿತ್ತು. ಅದಕ್ಕೆ ಸಿಬಿಐ ಪರ ಹಾಜರಿದ್ದ ಪಿ.ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ನ್ಯಾಯಮೂರ್ತಿ ರತ್ನಕಲಾ ಅವರಿಲ್ಲ ಏಕಸದಸ್ಯ ಪೀಠ ವಾದವನ್ನು ಪುರಸ್ಕರಿಸಿ ರು.1 ಲಕ್ಷ ಮೊತ್ತದ ಬಾಂಡ್, 2 ಲಕ್ಷ ಮೊತ್ತದ ಇಬ್ಬರ ಭದ್ರತೆ ಕೊಡಬೇಕು ಹಾಗೂ ಅರ್ಜಿದಾರರು ಸಿಬಿಐ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಹೊರಹೋಗಬಾರದು ಎಂದು ಷರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದರು.
ಐಟಿ ಅಧಿಕಾರಿಗಳು ಚಳ್ಳಕೆರೆಯಲ್ಲಿ ದಾಳಿ ನಡೆಸಿದಾಗ 5.7 ಕೋಟಿ 2000,500 ಮುಖ ಬೆಲೆಯ ಹೊಸ ನೋಟುಗಳು ಜೊತೆಗೆ 90 ಲಕ್ಷ ನಗದು, 28 ಕೆಜಿ ಒಟ್ಟು ಚಿನ್ನಾಭರಣಗಳು, ದೊರೆತಿದ್ದವು.