ನನ್ನ ಮಗ ಪೊಲೀಸರಿಗೆ ಶರಣಾಗುತ್ತಾನೆ ಎಂದ ಶಾಸಕ ಹ್ಯಾರಿಸ್
Recommended Video
ಬೆಂಗಳೂರು, ಫೆಬ್ರವರಿ 19 : ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ನಾನೇ ಪೊಲೀಸರಿಗೆ ಒಪ್ಪಿಸುತ್ತೇನೆ ಎಂದು ಹ್ಯಾರಿಸ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಈ ರೀತಿ ಮಾಡಲು ಅವನಿಗೆ ಅವಕಾಶ ನೀಡಿರಲಿಲ್ಲ. ನನ್ನ ಮಗನ ಕೃತ್ಯದಿಂದಾಗಿ ನನಗೂ ನೋವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಲು ಅವಕಾಶವನ್ನು ನೀಡಿಲ್ಲ ಎಂದರು.
ಹೀಗೆ ಬೆಳೆಸಬೇಕು ಮಕ್ಕಳನ್ನಾ ಹ್ಯಾರೀಸ್ ಬೆನ್ನುತಟ್ಟಿದ್ದ ಪ್ರಕಾಶ್ ರೈ
ನಿನ್ನೆ ರಾತ್ರಿ ಮೊಹಮ್ಮದ್ ನಲಪಾಡ್ ಅವರ ತಾಯಿಯೊಂದಿಗೆ ಮಾತನಾಡಿದ್ದಾರೆ, ಇಂದು ಪೊಲೀಸರಿಗೆ ಶರಣಾಗಲು ಸೂಚಿಸಿದ್ದೇನೆ. ಪೊಲೀಸರು ಕಾನೂನಿನ ಪ್ರಕಾರ ಕರಮ ಕೈಗೊಳ್ಳಬಹುದು. ಯಾರೇ ತಪ್ಪು ಮಾಡಿದರೂ ಕೂಡ ಅದು ತಪ್ಪು. ಜವಾಬ್ದಾರಿ ಸ್ಥಾನದಲ್ಲಿದ್ದು ಕಾನೂನು ಪಾಲಿಸುತ್ತಿದ್ದೇನೆ ಆದರೆ ನಾನೇ ತಪ್ಪು ಮಾಡಿರುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದರು.
ಈ ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇದರಲ್ಲಿಯೂ ರಾಜಕೀಯ ಮಾಡುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಬೈದಿದ್ದಕ್ಕೆ ಆತ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ನನ್ನ ಜತೆ ಸಂಪರ್ಕಕ್ಕೆ ಬಂದರೆ ನಾನೇ ಅವನಿಗೆ ಪೊಲೀಸರಿಗೆ ಶರಣಾಗುವಂತೆ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.