ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಾಪಾರಿಗೆ ಕಿರುಕುಳ; ದೂರು ದಾಖಲು
ಬೆಂಗಳೂರು, ಏಪ್ರಿಲ್ 26 : ಬೆಂಗಳೂರಿನಲ್ಲಿ ಬೀದಿ ಬದಿ ಹಣ್ಣು ಮಾರುತ್ತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀದಿ ಬದಿ ವ್ಯಾಪಾರಿಗೆ ನೀಡಿದ ಕಿರುಕುಳದ ಬಗ್ಗೆ ಈಗ ಧ್ವನಿ ಎತ್ತಲಾಗಿದೆ.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ವಿಡಿಯೋ ವೈರಲ್ ಆದ ಬಳಿಕ ವ್ಯಾಪಾರಿಯ ಬೆಂಬಲಕ್ಕೆ ನಿಂತಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ರಸ್ತೆಯಲ್ಲಿ ಉಗುಳುತ್ತಾ ವ್ಯಾಪಾರ ಮಾಡುತ್ತಿದ್ದ ಎಂದು ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿಡಿಯೋ ಚಿತ್ರೀಕರಿಸಿದ್ದ ವ್ಯಕ್ತಿ ವ್ಯಾಪಾರಿ ಮುಖಕ್ಕೆ ಹಾಕಿದ್ದ ಮಾಸ್ಕ್ ತೆಗೆಯುವಂತೆ ಒತ್ತಾಯಿಸಿದ್ದ. ವಿಡಿಯೋದಲ್ಲಿರುವ ಮಾತುಗಳನ್ನು ನೋಡಿದರೆ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದಂತೆ ಭಾಸವಾಗುತ್ತಿದೆ ಎಂದು ಒಕ್ಕೂಟ ಹೇಳಿದೆ.

ದ್ರಾಕ್ಷಿ ಹಣ್ಣನ್ನು ಮಾರಾಟ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿ ಹಣ್ಣುಗಳ ಮೇಲೆ ಉಗಿದಿದ್ದಕ್ಕೆ ಯಾವುದೇ ಸಾಕ್ಷಿಗಳಲ್ಲಿ. ಹಣ್ಣುಗಳ ಮೇಲೆ ಉಗಿದಿದ್ದಾನೆ ಎಂದು ಸುದ್ದಿ ಪ್ರಸಾರ ಮಾಡಿದ ಕನ್ನಡದ ಖಾಸಗಿ ನ್ಯೂಸ್ ಚಾನೆಲ್ ಮತ್ತು ಕರ್ನಾಟಕದ ಸಂಘಿ ಎಂಬ ಟ್ವೀಟರ್ ಹ್ಯಾಂಡಲ್ ವಿರುದ್ಧ ದೂರು ನೀಡಲಾಗಿದೆ.
ಸುದ್ದಿಯನ್ನು ಪ್ರಸಾರ ಮಾಡುವಾಗ ಚಾನೆಲ್, 'ದ್ರಾಕ್ಷಿ ಹಣ್ಣಿನ ಮೇಲೆ ಉಗಿದು ವ್ಯಕ್ತಿ ವ್ಯಾಪಾರ ಮಾಡುತ್ತಿದ್ದ. ಕೊರೊನಾ ಹರಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯ ಉದ್ದೇಶ ಏನಾಗಿತ್ತು?. ಪೊಲೀಸರು ಏನು ಮಾಡುತ್ತಿದ್ದಾರೆ. ಇಂತಹ ಹಲವಾರು ಘಟನೆ ನಡೆಯುತ್ತಿವೆ' ಎಂದು ನಿರೂಪಕರು ಹೇಳಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ. ಇಂತಹ ವಿಡಿಯೋವನ್ನು ವೈರಲ್ ಮಾಡಿ ಸಮುದಾಯವೊಂದನ್ನು ಟಾರ್ಗೆಟ್ ಮಾಡಿ ಅವರನ್ನು ವ್ಯಾಪಾರದ ಸ್ಥಳದಿಂದ ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಒಕ್ಕೂಟ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ದೂರು ಸಲ್ಲಿಸಿದೆ. ವ್ಯಾಪಾರಿಗೆ ಕಿರುಕುಳ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆ. ಪಿ. ನಗರ ಪೊಲೀಸರಿಗೂ ದೂರು ನೀಡಲಾಗಿದೆ.












Click it and Unblock the Notifications