ಎಂಪಿ ಪ್ರಕಾಶ್ ಪುತ್ರ, ಮಾಜಿ ಶಾಸಕ ಎಂಪಿ ರವೀಂದ್ರ ವಿಧಿವಶ
Recommended Video

ಬೆಂಗಳೂರು, ನವೆಂಬರ್ 03: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂಪಿ ರವೀಂದ್ರ(49) ಶನಿವಾರ ಬೆಳಿಗ್ಗೆ ವಿಧಿವಶರಾದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಗ್ಗಿನ ಜಾವ ಸುಮಾರು 3:45 ರ ಸುಮಾರಿಗೆ ಅವರು ವಿಧಿವಶರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಅವರ ಅಂತಿಮ ದರ್ಶನಕ್ಕೆ ವಿಕ್ರಂ ಆಸ್ಪತ್ರೆಯಲ್ಲೇ ವ್ಯವಸ್ಥೆ ಮಾಡಲಾಗಿದೆ.
ನಂತರ ಪಾರ್ಥಿವ ಶರೀರವನ್ನು ಹರಪನಹಳ್ಳಿ(ದಾವಣಗೆರೆ)ಗೆ ಕಳಿಸಲಾಗುತ್ತಿದ್ದು, ಸಂಜೆ 6 ವರೆಗೂ ಹರಪನಹಳ್ಳಿಯ ಎಡಿಬಿ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಭಾನುವಾರ ಮಧ್ಯಾಹ್ನ 12 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದ್ದು, ಮಾಜಿ ಶಾಸಕ ಎಂಪಿ ಪ್ರಕಾಶ್ ಅವರ ಸಮಾಧಿಯ ಪಕ್ಕದಲ್ಲೇ ರವೀಂದ್ರ ಅವರ ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ.

ಮೂರು ತಿಂಗಳ ಹಿಂದೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರು ಸಿಂಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೆಲದಿನಗಳ ನಂತರ ಮತ್ತೆ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ.
ಸಜ್ಜನ ರಾಜಕಾರಣಿ ಎಂ ಪಿ ಪ್ರಕಾಶ್ ಅವರ ಪುತ್ರ ಎಂಪಿ ರವೀಂದ್ರ ಅವರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
2013 ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ ಅವರು, 2018 ರ ವಿಧಾನಸಭೆಯಲ್ಲಿ ಹರಪನಹಳ್ಳಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು.












Click it and Unblock the Notifications