ಬೆಂಗಳೂರಲ್ಲಿ ಷಟ್ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ
ಬೆಂಗಳೂರು, ಅ.1: ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಷಟ್ಪಥ ಕಾರಿಡಾರ್ ವ್ಯವಸ್ಥೆಯನ್ನು ತರಲು ಆಲೋಚಿಸಲಾಗಿತ್ತು ಆದರೆ ಕಾರಣಾಂತರಗಳಿಂದ ಯೋಜನೆ ನೆನಗುದಿಗೆ ಬಿದ್ದಿತ್ತು. ಇದೀಗ ಮತ್ತೊಮ್ಮೆ ಯೋಜನೆಗೆ ಜೀವ ಬಂದಿದ್ದು, ಷಟ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪರಿಸರಕ್ಕೆ ಧಕ್ಕೆ ಬಾರದಂತೆ ಹಾಗೂ ಹೆಚ್ಚು ಮರಗಳನ್ನು ತೆರವು ಮಾಡದೆ ಮರಗಳನ್ನು ಉಳಿಸಿ ರೆಂಬೆ ಕೊಂಬೆಗಳನ್ನು ಮಾತ್ರ ತೆಗೆದು ಯೋಜನೆಯನ್ನು ಅನುಷ್ಠಾನಗೊಳಿಸುವ ಕಡೆಗೆ ಚಿಂತನೆ ನಡೆಸಿದೆ. ಒಂದು ವೇಳೆ ಯೋಜನೆಗೆ ವಿರೋಧ ಎದುರಾದಲ್ಲಿ ಅದನ್ನು ಸಮರ್ಪಕವಾಗಿಯೇ ಎದುರಿಸಿ ಯೋಜನೆಯನ್ನು ಕೈಗೊಳ್ಳುವ ಕಡೆಗೆ ಗಮನ ನೀಡಿದೆ.
ಎಲಿವೆಟೆಡ್ ಕಾರಿಡಾರ್ ನಿರ್ಮಾಣದ ವೇಳೆ 10 ಸಾವಿರಕ್ಕಿಂತ ಹೆಚ್ಚು ಮರಗಳು ತೆರವಾಗುತ್ತವೆ ಎಂದು ಹೇಳಲಾಗಿದ್ದರೂ ಸರ್ಕಾರ ಅದನ್ನು ಒಪ್ಪುತ್ತಿಲ್ಲ. ಕೇವಲ 2800 ಮರಗಳನ್ನು ತೆರವು ಮಾಡಲಾಗುತ್ತಿದೆ. ಇದೂ ಕೂಡಾ ಇನ್ನಷ್ಟು ಕಡಿಮೆ ಮಾಡುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದೆ.

ಯೋಜನೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ ಪರಿಸರವಾದಿಗಳ ಆಕ್ಷೇಪ ಎದುರಾಗಿದೆ. ಯೋಜನೆಯಿಂದ ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣ ಕಡಿಮೆಯಾಗಿದೆ. ಸಾವಿರಾರು ಮರಗಳ ಮಾರಣಹೋಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಾಹನ ದಟ್ಟಣೆ ಬಗ್ಗೆ ಸಾರ್ವಜನಿಕವಾಗಿ ಭಾರಿ ಆಕ್ರೋಶವಿದೆ. ಅದನ್ನು ಮಾನದಂಡವಾಗಿ ಮಾಡಿಕೊಂಡು, ವಾಹನ ದಟ್ಟಣೆ ತಗ್ಗಿಸಲೆಂದೇ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬ ಅಂಶವನ್ನು ಜನರಿಗೆ ಮನದಟ್ಟು ಮಾಡಿಕೊಡುವ ಮೂಲಕ ವಿರೋಧ ಪ್ರಮಾಣ ತಗ್ಗಿಸಲು ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯಲಾಗುತ್ತಿದೆ.
ಈ ಯೋಜನೆಯಡಿ 102 ಕಿಮೀ.ಗಳ ಆರು ಕಾರಿಡಾರ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಇದಕ್ಕೆ 152 ಕಿ.ಮೀ. ಎಕರೆ ಜಾಗದ ಅಗತ್ಯವಿದೆ. ಆದರೆ, ಇದನ್ನೂ ಕೂಡಾ ಕಡಿಮೆ ಮಾಡುವ ಕಡೆಗೆ ಗಮನ ನೀಡಲಾಗಿದೆ. ಒಂದು ಅಂದಾಜಿನ ಪ್ರಕಾರ 90 ಎಕರೆ ಜಾಗವನ್ನು ಬಳಕೆ ಮಾಡಿಕೊಂಡು ಎಲಿವೇಟೆಡ್ ರಸ್ತೆಯನ್ನು ನಿರ್ಮಾಣ ಮಾಡುವುದು ಸರ್ಕಾರದ ಗುರಿಯಾಗಿದೆ.












Click it and Unblock the Notifications