5, 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಿರ್ಧಾರ ಹಿಂಪಡೆಯಿರಿ: ಸಿಎಂಗೆ ಪತ್ರ
ಬೆಂಗಳೂರು, ಅಕ್ಟೋಬರ್ 09: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಹೀಗೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಸಂಸ್ಥಾಪಕ ಮಹಾಪೋಷಕ ಡಾ. ವಿ.ಪಿ ನಿರಂಜನಾರಾಧ್ಯ ಅವರು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ. ಪತ್ರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರು ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಗೊಂದಲಮಯವಾಗಿ ಕಾರ್ಯ ನಿರ್ವಹಿಸುತ್ತಿದೆ.
ಸಮವಸ್ತ್ರ ಹಾಗೂ ಶೂ, ಸಾಕ್ಸ್ ವಿತರಣೆಯ ವಿಳಂಬ, ಪಠ್ಯಪುಸ್ತಕ ಪರಿಷ್ಕರಣೆಯ ವಿವಾದ, ಶಿಕ್ಷಕರ ವರ್ಗಾವಣೆಯ ಗೊಂದಲ, ಮಕ್ಕಳ ಪ್ರವೇಶಕ್ಕೆ ವಯೋಮಿತಿ ನಿಗದಿ, ಶಿಕ್ಷಕರ ನೇಮಕಾತಿಯ ವಿಳಂಬ, ಇತ್ತೀಚಿಗೆ ಬೆಳಕಿಗೆ ಬಂದ ಭ್ರಷ್ಟಾಚಾರ ಸೇರಿ ಅನೇಕ ವೈಫಲ್ಯಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಘನತೆ, ಗೌರವ ಮತ್ತು ಜನರಿಗಿದ್ದ ನಂಬಿಕೆಯನ್ನು ಹುಸಿಗೊಳಿಸಿವೆ ಎಂದರು.

ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘಿಸಲಾಗಿದೆ
ಇಲಾಖೆ ಐದು ಮತ್ತು ಎಂಟನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇಲ್ಲವೇ ಮೌಲ್ಯಾ೦ಖನ ಮಾಡಲು ನಿರ್ಧರಿಸಲಾಗಿದೆ. ಈ ನಿರ್ಧಾರ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಲ್ಲಿ ಗೊಂದಲ ಸೃಷ್ಟಿಸಲಿದೆ. ಇಲಾಖೆಯ ಈ ನಿರ್ಧಾರ ಶಿಕ್ಷಣ ಹಕ್ಕು ಕಾಯಿದೆ ಪ್ರಕರಣ 16, 29 ಮತ್ತು 30ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ ಎಂದು ಅವರು ದೂರಿದ್ದಾರೆ.

ಸಚಿವರ ಏಕಪಕ್ಷೀಯ ನಿರ್ಧಾರ ಸರಿಯಲ್ಲ
ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರ ಅಪ್ರಬುದ್ಧತೆ, ಸರ್ವಾಧಿಕಾರಿ ಧೋರಣೆ ಹಾಗೂ ಏಕಪಕ್ಷೀಯ ತೀರ್ಮಾನಗಳಿಂದ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಗೊಂದಲ ಉಂಟಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ನಿರಂತರ ಹಾಗು ವ್ಯಾಪಕ ಮೌಲ್ಯಮಾಪನಕ್ಕೆ ಅವಕಾಶವಿದ್ದು, ನಿರಂತರ ಮೌಲ್ಯಮಾಪನದ ಮೂಲಕ ಮಕ್ಕಳ ಕಲಿಕೆಯನ್ನು ಪರೀಕ್ಷಿಸಲಾಗುತ್ತಿದೆ. ಇದರ ಭಾಗವಾಗಿ ನಾಲ್ಕು ರೂಪಣಾತ್ಮಕ ಹಾಗೂ ಎರಡು ಸಂಕಲನಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜೊತೆಗೆ, ಕಲಿಕಾ ಚೇತರಿಕೆ ಭಾಗವಾಗಿ ಮೌಲ್ಯಮಾಪನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಾರ್ಷಿಕ ಪರೀಕ್ಷೆ ಅವಿವೇಕದ ನಡೆ
ಮಕ್ಕಳ ಕಲಿಕಾ ಮೌಲ್ಯಮಾಪನಕ್ಕೆ ಈಗಾಗಲೇ ವೈಜ್ಞಾನಿಕ ಹಾಗೂ ಮಕ್ಕಳ ಸ್ನೇಹಿ ವ್ಯವಸ್ಥೆ ಇದೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಬಿಟ್ಟು ಸಚಿವರು ಇಡೀ ಶಿಕ್ಷಣ ವ್ಯವಸ್ಥೆಯನ್ನು ಅವೈಜ್ಞಾನಿಕ ಸನಾತನ ಪರೀಕ್ಷಾ ಸಂಪ್ರದಾಯಕ್ಕೆ ನೂಕುತ್ತಿರುವುದು ನಿಜಕ್ಕೂ ಹಿನ್ನೆಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಜೊತೆಗೆ ನಮ್ಮ ಕಲಿಕಾ ವ್ಯವಸ್ಥೆಯು ಸಾಮರ್ಥ್ಯಧಾರಿತ ವ್ಯವಸ್ಥೆಯಾಗಿದ್ದು ನಿಗದಿಗೊಳಿಸಿದ ಸಾಮರ್ಥ್ಯಗಳನ್ನು ಕಲಿಸಿಯೇ ಮುಂದೆ ಹೋಗಬೇಕಿದೆ. ವಾರ್ಷಿಕ ಪರೀಕ್ಷೆ ಅವೈಜ್ಞಾನಿಕ ಮಾತ್ರವಲ್ಲದೆ ಅವಿವೇಕದ ನಡೆಯಾಗುತ್ತದೆ. ಪ್ರತೀ ತರಗತಿಯಲ್ಲಿ ಮತ್ತು ಪ್ರತಿ ವಿಷಯದಲ್ಲಿ ಮಕ್ಕಳು ಕಲಿಯಲೇಬೇಕಾದ ಸಾಮರ್ಥ್ಯಗಳನ್ನು ಗುರುತಿಸಿ ಮಕ್ಕಳು, ಶಿಕ್ಷಕರು ಹಾಗೂ ಪಾಲಕರು ಅವುಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಅಧಿಸೂಚಿಸಲಾಗಿದೆ.

ನಿರ್ಧಾರ ಕೈ ಬಿಡಲು ಮನವಿ
ಈ ಎಲ್ಲ ಅಂಶಗಳನ್ನು ಗಮನಿಸಿ ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಶಿಕ್ಷಣ ಸಚಿವರಿಗೆ ಈಗ ಜಾರಿಯಲ್ಲಿರುವ ಹಕ್ಕು ಆಧಾರಿತ ಮಕ್ಕಳ ಸ್ನೇಹಿ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ಮಾರಕವಾಗುವ ಉದ್ದೇಶಿತ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ಕೈಬಿಡಲು ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಸ್ಎಸ್ಎಲ್ಸಿ ಮಾದರಿಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವರು ಚಿಂತನೆಯಲ್ಲಿದ್ದಾರೆ. ಆದರೆ ಈ ಬಗ್ಗೆ ಯಾವುದು ಅಂತಿಮವಾಗಿಲ್ಲ. ಅಂತಿಮಗೊಳಿಸಲು ಅ.13ರಂದು ಉನ್ನತ ಮಟ್ಟದ ಸಭೆ ನಡೆಸಿ ನಂತರ ಶಿಕ್ಷಣ ಸಚಿವ ನಿರ್ಧಾರ ಪ್ರಕಟಿಸಲಿದ್ದಾರೆ.












Click it and Unblock the Notifications