ಚೀಟಿ ಹಾಕುವ ಮೊದಲೇ ಈ ಚೀಟಿಂಗ್ ದಂಪತಿ ಬಗ್ಗೆ ಗೊತ್ತಿರಲಿ !
ಬೆಂಗಳೂರು, ಡಿಸೆಂಬರ್ 14: ಚೀಟಿ ಹೆಸರಿನಲ್ಲಿ ನೂರಾರು ಜನರಿಗೆ ಟೋಪಿ ಹಾಕಿರುವ ದಂಪತಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಚೀಟಿ ಕೂಗಿದರೂ ಹಣ ಕೊಡದೇ ಹೆಚ್ಚುವರಿ ಬಡ್ಡಿ ಕೊಡ್ತೀವಿ ಎಂದು ಬೆಂಗಳೂರು ನಗರದ ಜನರಿಗೆ ಮೋಸ ಮಾಡಿದ್ದ ದಂಪತಿಯನ್ನು ಸಾರ್ವಜನಿಕರೇ ಎಳೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈಕೆ ಹೆಸರು ನೀಲಾವತಿ, ಪತಿಯ ಹೆಸರು ಜ್ಞಾನೇಶ್ , ಇವರಿಗೆ ಪುತ್ರನೊಬ್ಬನಿದ್ದು ಕ್ಯಾಬ್ ಓಡಿಸುತ್ತಿದ್ದ. ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ ನೆಲೆಸಿದ್ದ ಕುಟುಂಬ ಚೀಟಿ ವ್ಯವಹಾರ ನಡೆಸುತ್ತಿದ್ದರು. ಮೊದಲು ಚಿಕ್ಕ ಪುಟ್ಟ ಚೀಟಿ ನಡೆಸುತ್ತಿದ್ದ ಇವರು ಸ್ವಂತ ಮನೆ ಹೊಂದಿದ್ದರು. ಇತ್ತೀಚೆಗೆ ಮೂರು ಲಕ್ಷ ರೂಪಾಯಿ ಮೌಲ್ಯದ ಎರಡು ಚೀಟಿ ಸೇರಿದಂತೆ ನೂರಾರು ಮಂದಿ ಹಣ ಕಟ್ಟಿದ್ದರು. ನಾಲ್ಕು ಚೀಟಿ ಕಟ್ಟಿಸಿಕೊಂಡಿದ್ದರು. ಚೀಟಿ ಕೂಗುತ್ತಿದ್ದವರಿಗೆ ಹಣ ನೀಡದೇ ಅದಕ್ಕೂ ಬಡ್ಡಿ ಅಥವಾ ಶೇರ್ ಕೊಡುವುದಾಗಿ ನಂಬಿಸಿದ್ದರು. ಇದನ್ನೇ ನಂಬಿ ಜನರು ಯಾರೂ ದೂರು ನೀಡಿರಲಿಲ್ಲ.
ಇತ್ತೀಚೆಗೆ ಸ್ವಂತ ಮನೆ ಮಾರಿದ್ದ ವಂಚಕ ದಂಪತಿ ಹಣ ಸಮೇತ ಪರಾರಿಯಾಗಿದ್ದರು. ಸುಮಾರು ನೂರೈವತ್ತುಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ್ದರು. ತಲೆ ಮರೆಸಿಕೊಂಡಿದ್ದ ಜ್ಞಾನೇಶ್ ಹಾಗೂ ನೀಲಾವತಿ ದಂಪತಿ ವಿರುದ್ಧ ದೂರು ನೀಡಿದ್ದರು. ಪರಾರಿಯಾಗಿದ್ದ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಗಿರಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ದಂಪತಿ ವಿರುದ್ಧ ಈವರೆಗೂ 106 ಮಂದಿ ದೂರು ನೀಡಿದ್ದಾರೆ.
ಆರೋಪಿತರ ಬಂಧನ ಪ್ರಕ್ರಿಯೆ ಮುಗಿಸಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆಯಲಾಗುವುದು. ಈವರೆಗೂ 106 ದೂರು ಸ್ವೀಕರಿಸಿದ್ದು, ಕೋಟ್ಯಂತರ ರೂಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಅವರ ಎಲ್ಲಾ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುತ್ತೇವೆ. ಅನಧಿಕೃತವಾಗಿ ಚೀಟಿ ನಡೆಸುತ್ತಿದ್ದು, ಇನ್ನೂ ಹೆಚ್ಚು ಮಂದಿ ದೂರು ನೀಡುವ ಕಾರಣ ಖಚಿತ ಮೋಸದ ಮೊತ್ತ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Recommended Video
ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆ ಮುಂದೆ ಕರೆ ತರುತ್ತಿದ್ದಂತೆ ಚೀಟಿ ಕಟ್ಟಿ ಹಣ ಕಳೆದುಕೊಂಡ ನೂರಾರು ಮಂದಿ ಠಾಣೆ ಮುಂದೆ ಜಮಾಯಿಸಿದ್ದರು. ಆರೋಪಿಗಳಿಂದ ಹಣ ಕೊಡಿಸಿ ಎಂದು ಕೂಗಾಡುತ್ತಿದ್ದರು. ಗಿರಿನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.