ನೀರಿನ ದರ ಪರಿಷ್ಕರಣೆ, ಶುಕ್ರವಾರ ನಿರ್ಧಾರ

ನೀರಿದ ದರ ಹೆಚ್ಚಳ ಮಾಡಬೇಕೆಂಬ ಜಲಮಂಡಳಿ ಪ್ರಸ್ತಾವವೆ ಕಳೆದ ಹಲವು ತಿಂಗಳಿಂದ ರಾಜ್ಯ ಸರ್ಕಾರದ ಮುಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆಗಾಗಿ ಕಾದಿದೆ. ಶುಕ್ರವಾರ ಸಿಎಂ, ಜಲಮಂಡಳಿ ಅಧಿಕಾರಿಗಳು, ಸಚಿವರ ಮತ್ತು ಶಾಸಕರ ಸಭೆ ಕರೆದಿದ್ದಾರೆ. ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಜಲಮಂಡಳಿಯಿಂದ ಹೊಸ ಯೋಜನೆಗಳನ್ನು ನಡೆವುದುದಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ದರ ಏರಿಕೆಗೆ ಅನುಮತಿ ನೀಡಬೇಕು ಎಂದು ಜಲ ಮಂಡಳಿ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ನಗರಾ ಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ನಗರಾಭಿವೃದ್ಧಿ ಇಲಾಖೆ ಅಕ್ಟೋಬರ್ 10ರಂದೇ ಆ ಪ್ರಸ್ತಾವವನ್ನು ಮುಖ್ಯ ಮಂತ್ರಿಗಳಿಗೆ ಕಳುಹಿಸಿದೆ. (ಬೆಂಗಳೂರಿನಲ್ಲಿ ನೀರಿನ ದರ ಶೇ 10 ರಷ್ಟು ಹೆಚ್ಚಳ)
ನೀರಿನ ಸಂಪರ್ಕಕ್ಕೆ ಕನಿಷ್ಠ ಶುಲ್ಕವನ್ನು 83 ರೂ.ಗಳಿಂದ 250 ರೂ.ಗಳಿಗೆ ಹೆಚ್ಚಳ ಮಾಡುವಂತೆ ಜಲಮಂಡಳಿ ಪ್ರಸ್ತಾವನೆಯಲ್ಲಿ ಮನವಿ ಮಾಡಿದೆ. ಆದರೆ.ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ನೀರಿನ ದರವನ್ನು ಜನರಿಗೆ ಹೊರೆಯಾಗುವಷ್ಟು ಹೆಚ್ಚಳ ಮಾಡಲು ಸರ್ಕಾರ ಧೈರ್ಯ ತೋರುವುದಿಲ್ಲ.
ಜಲಮಂಡಳಿಯು ಪ್ರಸ್ತುತ ನಗರದ 7.20 ಲಕ್ಷ ಬಳಕೆದಾರರಿಗೆ ಪ್ರತಿನಿತ್ಯ 1,200 ದಶಲಕ್ಷ ಲೀಟರ್ ನೀರು ಸರಬರಾಜು ಮಾಡುತ್ತಿದೆ. ಜೊತೆಗೆ 60,000 ಬಳಕೆದಾರರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಹೈಕೋರ್ಟ್ ನಿರ್ದೇಶನದ ಹಿನ್ನೆಲೆ ಯಲ್ಲಿ 62 ಸ್ಥಳಗಳಲ್ಲಿ 110 ಗ್ರಾಮ ಗಳಿಗೆ ಉಚಿತವಾಗಿ ಕುಡಿಯುವ ನೀರು ಪೂರೈಸುತ್ತಿದೆ.
ಮೊದಲು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಜಲಮಂಡಳಿ ಅಧಿಕಾರಿಗಳು ಸಭೆ ನಡೆಸಿ, ನೀರಿನ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಎಂದು ನಿರ್ಧರಿಸಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಸ್ವತಃ ತಾವೇ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರಿಂದ ದರ ಪರಿಷ್ಕರಣೆ ಪ್ರಕ್ರಿಯೆ ಕೊಂಚ ವಿಳಂಬವಾಗಿತ್ತು.












Click it and Unblock the Notifications