ಬೆಂಗಳೂರು ಕಸದ ಮಾಫಿಯಾ: ಸಿಎಂ ಅಸಹಾಯಕತೆಯೋ, ಪ್ರಾಮಾಣಿಕತೆಯೋ?
"ಬೆಂಗಳೂರನ್ನು ಸ್ವಚ್ಛ ಮಾಡುವುದಕ್ಕೆ, ಇಲ್ಲಿನ ಕಸದ ಸಮಸ್ಯೆ ಪರಿಹರಿಸುವುದಕ್ಕೆ ಕಸದ ಮಾಫಿಯಾ ಬಿಡ್ತಿಲ್ಲ. ಈ ರಾಶಿ ರಾಶಿ ಕಸ ನೋಡಿದರೆ ತಲೆ ತಗ್ಗಿಸುವಂತಾಗುತ್ತದೆ" ಎಂದು ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಖುಲ್ಲಂಖುಲ್ಲಾ ಒಪ್ಪಿಕೊಂಡರು.
ಈ ಮಾತಿಗೆ ಏನು ಹೇಳಬೇಕು? ರಾಜ್ಯದ ಮುಖ್ಯಮಂತ್ರಿಯೇ ಒಂದು ಜಿಲ್ಲೆಯ, ಅಲ್ಲಲ್ಲ, ಒಂದು ನಗರದ ಒಂದು ಮುಖ್ಯ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಮಾಫಿಯಾವೊಂದು ಬಿಡುತ್ತಿಲ್ಲ ಎಂದು ಹೀಗೆ ಅಸಹಾಯಕರಾಗಿ ಹೇಳಿಕೊಂಡು ಬಿಟ್ಟರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮತ್ತೊಂದು ಕಡೆ ಅವರ ಪ್ರಾಮಾಣಿಕತೆಯನ್ನು ಮೆಚ್ಚಬೇಕಲ್ಲವೆ ಎಂಬ ಗೊಂದಲ ಸೃಷ್ಟಿಯಾಗುತ್ತದೆ.
ಕಸ ಸಮಸ್ಯೆ ಪರಿಹರಿಸಲು ಮಾಫಿಯಾ ಬಿಡುತ್ತಿಲ್ಲ: ಕುಮಾರಸ್ವಾಮಿ
ಇನ್ನು ಕಸದ ಮಾಫಿಯಾವನ್ನು ಮರಳು ಮಾಫಿಯಾಗೆ ಹೋಲಿಸಿ, ಅಷ್ಟು ಬಲವಾಗಿ ಬೇರು ಬಿಟ್ಟಿದೆ ಎಂದಿರುವ ಅವರಿಗೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜತೆಗೆ ಸೇರಿ ಅಧಿಕಾರ ನಡೆಸುತ್ತಿರುವುದು ಜೆಡಿಎಸ್ ಪಕ್ಷವೇ ಎಂಬ ಸಂಗತಿಯೇನಾದರೂ ಮರೆತು ಹೋಗಿದೆಯಾ ಎಂಬ ಅನುಮಾನ ಕೂಡ ಜತೆಗೆ ಮೂಡುತ್ತದೆ.
ಕುಮಾರಸ್ವಾಮಿ ಜನರ ಆಯ್ಕೆಯಾಗಿರಲಿಲ್ಲ
ಹನ್ನೆರಡು ವರ್ಷದ ಹಿಂದೆ ತಮಗೆ ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಲು ಸಿಕ್ಕ ಅವಕಾಶದಲ್ಲಿ ಕಂಡ ಕನಸುಗಳನ್ನು ಆ ನಂತರ ಬಂದ ಸರಕಾರಗಳು ಪೂರ್ಣಗೊಳಿಸಿಲ್ಲ ಎಂಬುದು ಕುಮಾರಸ್ವಾಮಿ ಅವರಿಗೆ ಬೇಸರವಂತೆ. ಆದರೆ ಆಗಲೂ ಹಾಗೂ ಈಗಲೂ ಕುಮಾರಸ್ವಾಮಿ ಅವರೇನೂ ಜನರ ಆಯ್ಕೆ ಆಗಿರಲಿಲ್ಲ ಎಂಬುದು ಅಷ್ಟೇ ನಿಜ.
ಕಸ ವಿಲೇವಾರಿ ದಂಧೆಯಿಂದಲೇ ಕಾಸು
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆ ಆಗುವುದು ಹಲವರಿಗೆ ಬೇಕಾಗಿಲ್ಲ. ಏಕೆಂದರೆ, ಆ ದಂಧೆಯಿಂದಲೇ ಕಾಸು ಮಾಡುತ್ತಿರುವ ಮಂದಿ ಇದ್ದಾರೆ. ಆದರೆ ಅವರೆಷ್ಟು ಪ್ರಬಲರಾಗಿ ಇದ್ದಾರೆಂದರೆ ರಾಜ್ಯದ ಮುಖ್ಯಮಂತ್ರಿಯೇ, ಈ ಶಕ್ತಿಗಳ ವಿರುದ್ಧದ ಹೋರಾಟ ಕಷ್ಟಸಾಧ್ಯ ಎನ್ನುವ ಮಟ್ಟಿಗೆ ಎಂಬುದೇ ಅಚ್ಚರಿ.
ಜೆಡಿಎಸ್- ಕಾಂಗ್ರೆಸ್ ಆ ಶ್ರೇಯವನ್ನು ಪಡೆಯಲಿ
ಇನ್ನು ಅಧಿಕಾರಿಗಳ ಜತೆಗೆ ಮಾತನಾಡಿ, ಸಮಸ್ಯೆ ಪರಿಹಾರ ಮಾಡ್ತೀನಿ. ನನಗೂ ಈ ಬಗ್ಗೆ ಬೇಸರವಿದೆ ಅನ್ನೋದೆಲ್ಲ ಮುಖ್ಯಮಂತ್ರಿಗೆ ತಕ್ಕುದಾದ ಮಾತಲ್ಲ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸ್ವತಃ ಪರಮೇಶ್ವರ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಬಿಬಿಎಂಪಿಯಲ್ಲೂ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಆಡಳಿತ ನಡೆಸುತ್ತಿದೆ. ಶಾಶ್ವತ ಪರಿಹಾರವನ್ನು ನೀವೇ ಕೊಟ್ಟು, ಅದರ ಶ್ರೇಯವನ್ನು ನೀವಿಬ್ಬರು (ಜೆಡಿಎಸ್- ಕಾಂಗ್ರೆಸ್) ಪಡೆದುಕೊಳ್ಳಿ.
ಅಸಹಾಯಕ ಧ್ವನಿ ಕೇಳಲು ಬಯಸಲ್ಲ
ಇನ್ನು ಮುಂದೆ ಚುನಾವಣೆಗಳಿವೆ. ಅವುಗಳಲ್ಲಿ ನೀವೇ ಸರಕಾರ. ಅಂದರೆ, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಗಿದ್ದು ಹೀಗೆ, ನಾನು ಬಂದ ಮೇಲೆ ಹೀಗೀಗೆ ಮಾಡಿದೆ ಎಂದು ಜನರೆದುರು ಹೇಳಲು ಹೊರಟರೆ ಅಂಥ ಸಮಜಾಯಿಷಿ ಯಾರು ಕೇಳ್ತಾರೆ? ಬೆಂಗಳೂರಿನ ಜನಸಂಖ್ಯೆ, ಇಲ್ಲಿನ ನೀರಿನ ಅಗತ್ಯ- ಕಸ ವಿಲೇವಾರಿ ಸಮಸ್ಯೆ, ಸಂಚಾರ ದಟ್ಟಣೆ ಎಲ್ಲಕ್ಕೂ ದೃಷ್ಟಿ ನಿಮ್ಮ ಕಡೆಗೇ ಇರುತ್ತದೆ. ನಿಮ್ಮ ಬಳಿ ಮಂತ್ರದಂಡ ಇದೆಯೋ ಅಥವಾ ಏಕ್ದಂ ಎಲ್ಲ ಪರಿಹರಿಸಲು ಸಾಧ್ಯವಿಲ್ಲವೋ, ಆದರೆ ಅಸಹಾಯಕತೆ ಹಾಗೂ ಕೈಲಾಗದ ಧ್ವನಿಯಲ್ಲಿ ನಿಮ್ಮಿಂದ ಏನೂ ಕೇಳಿಸಿಕೊಳ್ಳಲು ಜನರು ಬಯಸುವುದಿಲ್ಲ.