ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಎಫ್ ಐಆರ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ
ಬೆಂಗಳೂರು, ಜನವರಿ 05: ಮುಖ್ಯಮಂತ್ರಿ ಪದವಿಯನ್ನೇ ಅಲ್ಲಾಡಿಸಿದ್ದ ಡಿನೋಟಿಫಿಕೇಷನ್ ಭೂತ ಮತ್ತೆ ಬಿ.ಎಸ್. ಯಡಿಯೂರಪ್ಪ ಅವರ ಹೆಗಲೇರಿದೆ. ಡಿ ನೋಟಿಫಿಕೇಷನ್ ಅಕ್ರಮ ಕುರಿತು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದು ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ರಿಟ್ ನ್ನು ಹೈಕೋರ್ಟ್ ವಜಾ ಮಾಡಿದೆ. ಮಾತ್ರವಲ್ಲ ಅರ್ಜಿದಾರರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರಾದ ಮೈಕಲ್ ಡಿ. ಕುನ್ನಾ ಮಹತ್ವದ ಆದೇಶ ನೀಡಿದ್ದಾರೆ.
ಕಳೆದ 2008 ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ, ಗಂಗೇನಹಳ್ಳಿ ಸಮೀಪದ ಮಠದಹಳ್ಳಿ ಬಳಿ .1.10 ಎಕರೆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿದ್ದರು. 1977 ರಲ್ಲಿಯೇ ನಿವೇಶನ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈ ಭೂಮಿಯನ್ನು ಡಿ ನೋಟಿಫೈ ಮಾಡಿಕೊಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಬಂಧಿಕರು ಅರ್ಜಿ ಸಲ್ಲಿಸಿದ್ದರು.
ಯಡಿಯೂರಪ್ಪ, ನಿರಾಣಿ ಕೊರಳಿಗೆ ಉರುಳಾದ ಡಿನೋಟಿಫಿಕೇಷನ್ ಕೇಸ್
ಈ ಕಡತವನ್ನು ಪರಿಶೀಲಿಸಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಿ ನೋಟಿಫೈ ಮಾಡಿದ್ದರು. ಈ ಕುರಿತ ದಾಖಲೆಗಳನ್ನು ಸಂಗ್ರಹಿಸಿದ್ದ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹೀರೇಮಠ್ ದೂರು ಸಲ್ಲಿಸಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಮಲಾ ಮತ್ತಿತರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಮೈಕಲ್ ಡಿ ಕುನ್ನಾ ಅವರು ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಲ್ಲದೇ ಅರ್ಜಿದಾರರಿಗೆ 25 ಸಾವಿರ ದಂಡ ವಿಧಿಸಿ ತನಿಖೆಗೆ ಅಸ್ತು ಎಂದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಡಿ ನೋಟಿಫಿಕೇಷನ್ ಅಕ್ರಮಗಳು ಬೆನ್ನತ್ತಿದ್ದವು. ಕಂಪನಿಯೊಂದರಿಂದ ತಮ್ಮ ಒಡೆತನದ ಟ್ರಸ್ಟ್ ಗೆ ದೇಣಿಗೆ ಪಡೆದ ಪ್ರಕರಣದಲ್ಲಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡು ಜೈಲಿಗೆ ಹೋಗಿದ್ದರು. ಇದೇ ಅವಧಿಯಲ್ಲೂ ಮಠದಹಳ್ಳಿ ಭೂಮಿಯ ಡಿ ನೋಟಿಫಿಕೇಷನ್ ಅಕ್ರಮ ಬೆಳಕಿಗೆ ಬಂದಿತ್ತು. ಇದೀಗ ಮಠದಹಳ್ಳಿ ಭೂಮಿಯ ಡಿ ನೋಟಿಫಿಕೇಷನ್ ಪ್ರಕರಣದ ತನಿಖೆಗೆ ಎದುರಾಗಿದ್ದ ಅಡ್ಡಿ ದೂರವಾದಂತಾಗಿದೆ. ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ನಡೆಸಲಿದ್ದಾರೆ.
ಹಲ್ಲು ಕಿತ್ತ ಹಾವಿನಂತಿರುವ ಲೋಕ: ಲೋಕಾಯುಕ್ತ ಸಂಸ್ಥೆಯಿಂದ ಭ್ರಷ್ಟಾಚಾರ ನಿಗ್ರಹ ದಳವನ್ನು ಬೇರ್ಪಡಿಸಿ ಎಸಿಬಿ ರಚನೆ ಮಾಡಿದ ಬಳಿಕ ಲೋಕಾಯುಕ್ತ ಸಂಸ್ಥೆಯ ವರ್ಚಸ್ಸೇ ಸಂಪೂರ್ಣ ಕುಸಿದಿದೆ. ಪೊಲೀಸ್ ಘಟಕವಿದ್ದರೂ ಕೇವಲ ಲೋಕಾಯುಕ್ತರಿಗೆ ಬರುವ ದೂರುಗಳನ್ನು ವಿಚಾರಣೆ ನಡೆಸಿ ಪ್ರಥಮಿಕ ವರದಿ ನೀಡುತ್ತಾರೆ. ಈ ವರದಿ ಆಧರಿಸಿ ಲೋಕಾಯುಕ್ತರು ಕ್ರಮಕ್ಕೆ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಹೈಕೋರ್ಟ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.
ಯಡಿಯೂರಪ್ಪ ಅವರು ಆರೋಪಿಯಾಗಿರುವ ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು. ಆದರೆ ಲೋಕಾಯುಕ್ತ ಸಂಸ್ಥೆಯಿಂದ ಭ್ರಷ್ಟಾಚಾರ ನಿಗ್ರಹ ದಳ ಬೇರ್ಪಟ್ಟು ನಾಲ್ಕು ವರ್ಷಗಳೇ ಕಳೆದಿವೆ. ಹೀಗಾಗಿ ಎಷ್ಟರ ಮಟ್ಟಿಗೆ ಈ ಪ್ರಕರಣದ ಗಂಭೀರತೆ ಅರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.