Jindal: ಜಿಂದಾಲ್ಗೆ 3,667 ಎಕರೆ ಭೂಮಿ ಹಂಚಿಕೆ ಬಗ್ಗೆ ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 23: ಮುಡಾ ಅಕ್ರಮ, ಸಿಎಂ ವಿರುದ್ಧ ತನಿಖೆಗೆ ಅನುಮತಿ ವಿಚಾರ ಕಾಂಗ್ರೆಸ್ನಲ್ಲಿ ಭಾರೀ ಸದ್ದು ಗದ್ದಲ ಎಬ್ಬಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ನಾಯಕರನ್ನು ದೆಹಲಿಗೆ ಕರೆದಿದ್ದಾರೆ. ಈ ಪೈಕಿ ಯಾರು, ಯಾರು ದೆಹಲಿಗೆ ಹೋಗುತ್ತಾರೆ. ಸ್ವಯಂ ಪ್ರೇರಿತವಾಗಿ ಯಾರು ಹೋಗುತ್ತಾರೆ. ಅಲ್ಲೇನು ಚರ್ಚೆ ಆಗಲಿದೆ ಹಾಗೂ ಸಂಪುಟದಲ್ಲಿ ಜಿಂದಾಲ್ ಕಂಪನಿಗೆ 3,667 ಎಕ್ರೆ ಜಾಗ ನೀಡಿದ್ದರ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಬೇರೆ ರಾಜ್ಯಗಳ ರಾಜ್ಯಪಾಲರ ನಡತೆ ಮತ್ತು ವರ್ತನೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಇಂಡಿಯಾ ಒಕ್ಕೂಟ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಪಕ್ಷದ ರಾಷ್ಟ್ರೀಯ ವರಿಷ್ಟರು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರನ್ನು ಕರೆದಿದ್ದಾರೆ. ನಮ್ಮನ್ನು ಆಹ್ವಾನಿಸಿಲ್ಲ. ಕೆಲ ಸಚಿವರು ಸ್ವಯಂ ಪ್ರೇರಿತವಾಗಿ ಹೋಗುತ್ತಿದ್ದೇವೆ. ಇಲಾಖೆಗೆ ಸಂಬಂಧಿಸಿದ ಕೆಲಸಗಳಿವೆ. ಪೊಲೀಸ್ ವಸತಿ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿ ಮಾಡಬೇಕಿದೆ.
ಜಿಂದಾಲ್ಗೆ ಭೂಮಿ ಹಂಚಿಕೆ: ಸಚಿವರು ಹೇಳಿದ್ದೇನು?
ಜಾಗತೀಕ ಮಟ್ಟದ ಹೂಡಿಕೆದಾರರ ಸಭೆಗಳಲ್ಲಿ ವಿದ್ಯುತ್, ಭೂಮಿ ಬೆಲೆ ಮುಂತಾದವುಗಳಲ್ಲಿ ರಿಯಾಯಿತಿ ನೀಡುವುದಾಗಿ ಕೈಗಾರಿಕೋದ್ಯಮಿಗಳಿಗೆ ಹೇಳಿರುತ್ತೇವೆ. ಇರುವ ಕೈಗಾರಿಕೋದ್ಯಮಿಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸಬರನ್ನು ತರಬೇಕಿದೆ. ಜಿಂದಾಲ್ನವರಯ ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಅಂತವರಿಗೆ ಅವಕಾಶ ಕಲ್ಪಿಸದಿದ್ದರೆ ರಾಜ್ಯ ಬಿಟ್ಟು ಹೋಗುತ್ತಾರೆ ಎಂದರು.

ದೇಶದ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಉಚಿತವಾಗಿ ಭೂಮಿ ನೀಡುತ್ತೇವೆ ಎಂದು ಮುಕ್ತವಾಗಿ ಹೇಳುತ್ತಿದ್ದಾರೆ. ನಾವು ಭೂಮಿ ಕೊಡಲಿಲ್ಲವೆಂದರೆ ಬೇರೆ ರಾಜ್ಯದವರು ಕೊಡುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಣ್ಣ ಘಟನೆ ನಡೆದಾಗ ಇಂಡಸ್ಟ್ರಿ ಬಿಟ್ಟು ಹೋಗುವುದಾಗಿ ಹೇಳಿದಾಗ. ತಮಿಳುನಾಡು, ಆಂಧ್ರದವರು ನಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈ ಬಗ್ಗೆ ಬಿಜೆಪಿಯವರು ನಮ್ಮನ್ನು ಮನವರಿಕೆ ಮಾಡಿದ್ದರೆ ನಾವು ಒಪ್ಪುತ್ತಿದ್ದೆವು ಎಂದು ಸಮರ್ಥಿಸಿದರು.
ರಾಜ್ಯಪಾಲರ ವರ್ತನೆ ಬಗ್ಗೆ ಧ್ವನಿ ಎದ್ದಿದೆ
ಮುಡಾ ಅಕ್ರಮದ ಬಗ್ಗೆ ವಿವರಣೆ ನೀಡಲು ಹೋಗುತ್ತಿಲ್ಲ. ಅಜೆಂಡಾ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಬೇರೆಬೇರೆ ರಾಜ್ಯದಲ್ಲಿಯೂ ಸಹ ಅಲ್ಲಿನ ರಾಜ್ಯಪಾಲರ ವರ್ತನೆ ಬಗ್ಗೆ ಧ್ವನಿ ಎದ್ದಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರ ನಡತೆ ಬಗ್ಗೆ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಚರ್ಚೆ ಆಗುತ್ತದೆಯೇ ಏನೆಂಬುದು ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ರಾಜ್ಯಪಾಲರು 11 ಮಸೂದೆಗಳನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಇಂತಹ ಬೆಳವಣಿಗಳು ನಡೆಯುತ್ತವೆ. ಒಂದೆರಡು ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ಕೇಳಿರುವುದು ಇದೆ. ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಪಾಲರ ನಡೆ ಬಗ್ಗೆ ಸಚಿವರ ಬೇಸರ
ರಾಜ್ಯ ಸರ್ಕಾರದ ಹನ್ನೊಂದು ಬಿಲ್ಗಳನ್ನು ವಾಪಸ್ ಕಳಿಸಿರುವುದು ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿರುವ ಎಂಬ ಸಂದೇಶ ಸಿಗುತ್ತಿದೆ ಎಂದರು ಅವರು ಬೇಸರ ವ್ಯಕ್ತಪಡಿಸಿದರು.
ಜಿಂದಾಲ್ಗೆ ಭೂಮಿ ಮಾರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿದ್ದಾಗ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ ಉತ್ತರ ಸಿಕ್ಕಿದೆ. ಕೋರ್ಟ್ ಸಹ ಆದೇಶ ಮಾಡಿದೆ. ಸ್ಥಳೀಯ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡಲಾಗಿದೆ.
ಬಿಜೆಪಿಯವರು ಅಧಿಕಾರವಧಿಯಲ್ಲಿ ನಡೆದ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. ಭೋವಿ ನಿಗಮ, ಜಂತಕಲ್ ಗಣಿ ಹಗರಣ ಈತರದ್ದೆಲ್ಲ ತನಿಖೆ ಮಾಡಿ, ತಾರ್ಕಿಕ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದು ಅವರು ಹೇಳಿದರು.












Click it and Unblock the Notifications