ಸುಳ್ಳು ಲೆಕ್ಕ ಕೊಟ್ಟು ಯಾವ ಕಂಟ್ರ್ಯಾಕ್ಟರ್ ಉದ್ದಾರ ಮಾಡಲು ಹೊರಟಿದ್ದೀರಾ?
ಬೆಂಗಳೂರು, ಮೇ 20: ಸರಕಾರ ಪ್ರಕಟಿಸಿದ ಕೊರೊನಾ ವಿಶೇಷ ಪ್ಯಾಕೇಜ್ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸುಳ್ಳು ಲೆಕ್ಕ ಕೊಟ್ಟು ಯಾವ ಗುತ್ತಿಗೆದಾರರನ್ನು ಉದ್ದಾರ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಜನಹಿತದ ಲಾಕ್ ಡೌನ್ ಮತ್ತು ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎನ್ನುವ ಜೆಡಿಎಸ್ ಒತ್ತಾಯದ ನಂತರ ಸರಕಾರ ಈ ಪ್ಯಾಕೇಜ್ ಅನ್ನು ಘೋಷಿಸಿದೆ. ಆದರೆ, ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್ ಏನೇನೂ ಸಾಲದು ಎಂದು ಎಚ್ಡಿಕೆ ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷ ಪ್ಯಾಕೇಜ್ನಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ನೀಡಲಾಗುತ್ತಿರುವ ಉಚಿತ ಊಟದ ವ್ಯವಸ್ಥೆಯನ್ನೂ ಸೇರಿಸಲಾಗಿದೆ. ಅದರಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಎಂದು ಸರಕಾರ ಹೇಳಿತ್ತು.

ಈ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಹೀಗಿದೆ, "ನಿತ್ಯ 6 ಲಕ್ಷ ಮಂದಿ ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರ ಪಡೆಯುತ್ತಿರುವುದಾಗಿ ಹೇಳಲಾಗಿದೆ. ಇಂದಿರಾ ಕ್ಯಾಂಟೀನ್ಗಳ ಎದುರು ಜನರೇ ಇಲ್ಲ. ಆದರೆ, ಪ್ರತಿ ದಿನ 6 ಲಕ್ಷ ಜನರ ಲೆಕ್ಕ ಕೊಟ್ಟು ಸರ್ಕಾರ ಯಾವ ಕಂಟ್ರಾಕ್ಟರ್ ಅನ್ನು ಉದ್ದಾರ ಮಾಡುತ್ತಿದೆ".
"ಕ್ಯಾಂಟೀನ್ಗಳ ಎದುರು ಇರುವ ಜನಸಂದಣಿಯನ್ನು ಸರ್ಕಾರ ವಿಡಿಯೊ ಮಾಡಿ ಬಿಡುಗಡೆ ಮಾಡಬಲ್ಲದೇ?" ಎಂದು ಕುಮಾರಸ್ವಾಮಿಯವರು ಟ್ವೀಟ್ ಮೂಲಕ ಸರಕಾರಕ್ಕೆ ಸವಾಲು ಎಸೆದಿದ್ದಾರೆ.
ಬಿಬಿಎಂಪಿ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಬಡಜನರಿಗೆ, ಕಾರ್ಮಿಕರಿಗೆ 25ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸರಕಾರ ಹೇಳಿತ್ತು.












Click it and Unblock the Notifications