ಅದೃಷ್ಟವೆಂದು ನರಿಯನ್ನು ಮನೆಯಲ್ಲಿ ಸಾಕಿದ ಮಹಿಳೆ? ಮುಂದೇನಾಯ್ತು
ಬೆಂಗಳೂರು, ಏಪ್ರಿಲ್ 12: ನರಿ ಮುಖ ನೋಡಿದರೆ ಅದೃಷ್ಟ ಎನ್ನುವ ನಂಬಿಕೆಯಿಂದ ನೆಲಮಂಗಲದಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಸಾಕಿದ್ದ ನರಿಯನ್ನು ಬಿಬಿಎಂಪಿ ಅರಣ್ಯ ಘಟಕದ ಸ್ವಯಂ ಸೇವಕರು ರಕ್ಷಣೆ ಮಾಡಿದ್ದಾರೆ.
ಅರಣ್ಯ ಘಟಕದ ಸ್ವಯಂ ಸೇವಕರು ಹಾಗೂ ಸಿಬ್ಬಂದಿ ತೆರಳಿ ವನ್ಯಮೃಗ ನರಿಯನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ರವಾನೆ ಮಾಡಿದ್ದಾರೆ. ನಗರದ ಶ್ರೀನಿವಾಸ ಪುರ ಬಳಿಯ ಮರಸರಹಳ್ಳಿ ಎಂಬಲ್ಲಿ ಕೃಷಿಕ ಮಹಿಳೆಯೊಬ್ಬರು ಮನೆಯಲ್ಲಿ ನರಿ ಸಾಕಿಕೊಂಡಿದ್ದರು. ಈ ಕುರಿತು ಮಾಹಿತಿ ಪಡೆದು ಬುಧವಾರ ಮನೆಗೆ ತೆರಳಿ ಪರಿಶೀಲಿಸಿದಾಗ ನರಿ ಪತ್ತೆಯಾಗಿದೆ.
ಸುಮಾರು ಒಂದೂವರೆ ತಿಂಗಳ ನರಿಯನ್ನು ಹದಿನೈದು ದಿನಗಳಿಂದ ಮಹಿಳೆ ಸಾಕಿಕೊಂಡು ಸ್ಟೋರ್ ರೂಮ್ ನಲ್ಲಿ ಬಿಟ್ಟಿದ್ದರು. ಕುರುಚಲು ಕಾಡು, ತೋಟ, ಹೊಲಗಳು ಸೇರಿದಂತೆ ಅರಣ್ಯದ ಹೊರ ಭಾಗಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ನರಿಯನ್ನು ಸಾಕು ಪ್ರಾಣಿಯಂತೆ ಮನೆಯಲ್ಲಿ ಸಾಕಿಕೊಳ್ಳುವುದು ಕಾನೂನು ಬಾಹಿರ.

ಈ ಕುರಿತು ಮಹಿಳೆಗೆ ಮನವರಿಕೆ ಮಾಡಿ ನರಿಯನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಉದ್ಯಾನಕ್ಕೆ ಬಿಡಲಾಗಿದೆ. ಕೆಲ ದಿನಗಳ ಹಿಂದೆ ಹಕ್ಕಿ ಪಿಕ್ಕಿ ಜನಾಂಗದವರು ಬಂದು ನರಿಯನ್ನು ಕೊಟ್ಟು ಹೋಗಿದ್ದಾರೆ. ಹೀಗಾಗಿ, ಮನೆಯಲ್ಲಿ ಸಾಕಿಕೊಂಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.












Click it and Unblock the Notifications