ನ್ಯಾಯಾಧೀಶೆಗೆ ನಿಂದನೆ: ಫೋರಂ ಮಾಲ್ ಸೆಕ್ಯುರಿಟಿ ಸೇರಿ ಇಬ್ಬರ ಬಂಧನ
ಬೆಂಗಳೂರು, ಡಿಸೆಂಬರ್ 3: ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರನ್ನು ನಿಂದಿಸಿ ಆಟೋ ಚಾಲಕನೊಬ್ಬ ಜೈಲು ಸೇರಿದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ನವೆಂಬರ್ 29ರಂದು ಕುಟುಂಬದ ಜೊತೆಗೆ ನ್ಯಾ. ನಾಗರತ್ನ ಅವರು ಫೋರಂ ಮಾಲ್ಗೆ ಹೋಗಿದ್ದರು, ಶಾಪಿಂಗ್ ಬಳಿಕ ರಾತ್ರಿ 8 ಗಂಟೆಗೆ ಮನೆಗೆ ಮರಳಲು ಮಾಲ್ನ ಹೊರಗೆ ನಿಂತಿದ್ದ ಕಾರು ಹತ್ತಲು ಮುಂದಾಗಿದ್ದರು, ಈ ವೇಳೆ ಅವರ ಜೊತೆಯಲ್ಲಿ ಒಬ್ಬ ವಿಶೇಷಚೇತನರಿದ್ದ ಕಾರಣ ಅವರನ್ನು ಕಾರಿಗೆ ಹತ್ತಿಸಿಕೊಳ್ಳಲು ಕೆಲ ಸೆಕೆಂಡ್ ವಿಳಂಬವಾಗಿದೆ.
ಅಷ್ಟಕ್ಕೆ ಕೋಪಗೊಂಡ ಗಾರ್ಡ್ ಹಾಗೂ ರಸ್ತೆಯಲ್ಲಿ ನಿಂತಿದ್ದ ಆಟೋ ಚಾಲಕ ವೆಂಕಟೇಶ್, ನ್ಯಾ. ನಾಗರತ್ನ ಹಾಗೂ ಜೊತೆಗಿದ್ದವರನ್ನು ಉದ್ದೇಶಿಸಿ ನಿಂದಿಸಿದ್ದಾರೆ.

ಆಟೋ ಚಾಲಕ ವೆಂಕಟೇಶ್ ಹಾಗೂ ಸೆಕ್ಯುರಿಟಿ ಗಾರ್ಡ್ ರಾಜು ಅವರ ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಚ್ಜಿ ನಾಗರತ್ನ ಅವರು ದೂರು ನೀಡಿದ್ದರು. ವಿಶೇಷಚೇತನರು ಕಾರು ಹತ್ತುತ್ತಿದ್ದು ಸ್ವಲ್ಪ ವಿಳಂಬವಾಗಿದೆ ನಿಂದಿಸಬೇಡಿ ಎಂದು ತಿಳಿ ಹೇಳಿದ್ದಾರೆ.
ಅದಕ್ಕೆ ಸುಮ್ಮನಾಗದ ಅವರಿಬ್ಬರು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 506,509 ಮತ್ತು 504 ಅಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications