ಎನ್ನಾರೈ ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ
ಬೆಂಗಳೂರು, ಮಾ.17: ಲಂಡನ್ ಲ್ಯಾಂಬೆತ್ ನಗರದ ಮಾಜಿ ಮೇಯರ್ ಹೊರನಾಡ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ವಿದೇಶದಲ್ಲಿ ಮೇಯರ್ ಸ್ಥಾನ ಅಲಂಕರಿಸಿದ ಪ್ರಥಮ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದ ನೀರಜ್ ಪಾಟೀಲ್, ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಹೇಳಿದ್ದಾರೆ.
ಗುಲ್ಬರ್ಗಾ ಮೂಲದ ಡಾ. ನೀರಜ್ ಪಾಟೀಲ್ ಅವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು ಆದರೆ, ಎಲ್ಲವನ್ನು ಬದಿಗೊತ್ತಿ ಸೋಮವಾರ(ಮಾ.17) ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನೀರಜ್ ಪಾಟೀಲ್ ಅವರು ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಡಾ. ನೀರಜ್ ಪಾಟೀಲ್ ಸೇರ್ಪಡೆ ಬಗ್ಗೆ ಫೇಸ್ ಬುಕ್ ನಲ್ಲಿ ಸುದ್ದಿ ಪ್ರಕಟಿಸಿದ ಸುರೇಶ್ ಕುಮಾರ್...
ನೀರಜ್ ಪಾಟೀಲ್ ಅವರನ್ನು ಬಿಜೆಪಿಗೆ ಸಂಸದ ಅನಂತಕುಮಾರ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್, ವಿ. ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು. ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಅವರು, ನರೇಂದ್ರ ಮೋದಿ ಅವರಂಥ ವ್ಯಕ್ತಿ ಈ ದೇಶದ ಪ್ರಧಾನಿಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದರು.

ನಾನು 15 ವರ್ಷದಿಂದ ಡೆಮಾಕ್ರೆಸಿ ನೋಡುತ್ತಿದ್ದೇನೆ.ಲಂಡನ್ನಿನಲ್ಲಿ ಜನರು ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಸಾಮಾನ್ಯ ಜನರು ರಾಜಕೀಯ ಪಕ್ಷಕ್ಕೆ ಸೇರಬೇಕು. ಮತಯಾಚನೆಗಾಗಿ ಅಭಿಮಾನ ಮಾಡುವಂತೆ ಜನ ಸಾಮಾನ್ಯರು ರಾಜಕೀಯಕ್ಕೆ ಸೇರುವಂತೆ ಅವರಿಗೆ ಉತ್ತೇಜನ ನೀಡಬೇಕು ಎಂದು ನೀರಜ್ ಪಾಟೀಲ್ ಹೇಳಿದರು.
ಗುಲ್ಬರ್ಗಾ ಜಿಲ್ಲೆಯ ಕಮಲಾಪುರದ ಡಾ. ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ 'ಜನಾಂಗೀಯ ಅಲ್ಪಸಂಖ್ಯಾತ ಕಾರ್ಯಪಡೆ'ಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಲಂಡನ್ನಿನ ಪ್ರತಿಷ್ಠಿತ ರಾಷ್ಟ್ರೀಯ ನೀತಿ ನಿರೂಪಣಾ ಸಮಿತಿ(ನ್ಯಾಷನಲ್ ಪಾಲಿಸಿ ಫೋರಂ)ಗೆ ಲಂಡನ್ ಬರೋ ಆಫ್ ಲ್ಯಾಂಬೆತ್ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ ಅವರನ್ನು ದಿ ಬ್ರಿಟಿಷ್ ಲೇಬರ್ ಪಾರ್ಟಿ ಆಯ್ಕೆ ಮಾಡಲಾಗಿತ್ತು. ಗುಲ್ಬರ್ಗಾದ ಕಮಲಾಪುರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ನೀರಜ್ ಪಾಟೀಲ್ ಅವರು ಲಂಡನ್ನಿನ ಥೇಮ್ಸ್ ನದಿತಟದಲ್ಲಿ ಅಣ್ಣ ಬಸವಣ್ಣ ಅವರ ಪ್ರತಿಮೆ ಸ್ಥಾಪಿಸಿದ ಸಾಧನೆ ಮಾಡಿದ್ದಾರೆ.












Click it and Unblock the Notifications