ಆಮ್ ಆದ್ಮಿಪಕ್ಷಕ್ಕೆ ಕುಮಾರಸ್ವಾಮಿ ಆಪ್ತ ಉದ್ಯಮಿ ನಾಗಣ್ಣ ಸೇರಿದ್ದೇಕೆ?
ಬೆಂಗಳೂರು ಡಿ.1: ಜೆಡಿಎಸ್ (ಜಾತ್ಯಾತೀತ ಜನತಾದಳ) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಉದ್ಯಮಿ ನಾಗಣ್ಣ ಸೇರಿದಂತೆ ಹಲವಾರು ಮಂದಿ ಇತ್ತೀಚೆಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಉದ್ಯಮಿ ನಾಗಣ್ಣ ಅವರ ನೇತೃತ್ವದಲ್ಲಿ ಪ್ರಸಿದ್ದ ಲೆಕ್ಕಪರಿಶೋಧಕ ಮುರೂರು ರಾಜೇಂದ್ರ ಕುಮಾರ್ ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿಯ ಆಮ್ ಆದ್ಮಿ ಪಕ್ಷ ತಂದಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ಬೆಂಗಳೂರಿಗೂ ತರುವ ಒತ್ತಾಸೆಯನ್ನು ಇಟ್ಟುಕೊಂಡು ಅನೇಕ ಕ್ಷೇತ್ರಗಳ ಪ್ರಮುಖರು, ವಿವಿಧ ಪಕ್ಷಗಳ ನಾಯಕರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಉಸ್ತುವಾರಿ ರೋಮಿ ಬಾಟಿ ಉಪಸ್ಥಿತರಿದ್ದರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಮಾತನಾಡಿ, ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಅತ್ಯುತ್ತಮ ವಾದ ಬೆಂಬಲಗಳಿಸುತ್ತಿದೆ. ನಾಗಣ್ಣ ಅವರಂತಹ ವ್ಯಕ್ತಿಗಳು ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ ಭ್ರಷ್ಟಾಚಾರದ ವಿರುದ್ದ ದ್ವನಿ ಎತ್ತು ಪಕ್ಷಕ್ಕೆ ಇನ್ನಷ್ಟು ಬಲವನ್ನು ತುಂಬಿದ್ದಾರೆ ಎಂದು ಹೇಳಿದರು.

ಬೆಂಗಳೂರು ಘಟಕ ಆಮ್ ಆದ್ಮಿ ಪಕ್ಷದ ಮೋಹನ್ ದಾಸರಿ ಮಾತನಾಡಿ, 198 ವಾರ್ಡ್ಗಳಲ್ಲೂ ಆಪ್ ಸ್ಪರ್ಧೆಗೆ ಇಳಿಯಲಿದೆ. ಕೆ.ಬಿ ನಾಗಣ್ಣ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದರು.

ಕೆ.ಬಿ ನಾಗಣ್ಣ ಮಾತನಾಡಿ, ಮೊದಲಿನಿಂದಲೂ ನಾವು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಾ ಬಂದಿದ್ದೇನೆ. ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುವ ಮೂಲಕ ನಾವು ಮುಂದಿನ ಪೀಳಿಗೆಗೆ ಯಾವುದಾದರೂ ಕೊಡುಗೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ. ಒಬ್ಬ ವ್ಯಕ್ತಿ ರಾಜಕೀಯ ಅನುಭವ ಇಲ್ಲದೆ ರಾಜಕೀಯ ಪಕ್ಷದ ಸೃಷ್ಟಿ ಮಾಡಿ ಇಂತಹ ವ್ಯವಸ್ಥೆಯ ಬದಲಾವಣೆ ಮಾಢಿದ್ದಾರೆ ಅರವಿಂದ ಕೇಜ್ರಿವಾಲ್. ಇಂತಹ ಆಡಳಿತ ದೇಶದ ಎಲ್ಲಡೆ ಸಾಧ್ಯವಿದ್ದು, ಬದಲಾವಣೆಯನ್ನು ತರುವ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆ ಆಗಿದ್ದೇನೆ ಎಂದು ಹೇಳಿದರು.












Click it and Unblock the Notifications