ಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆ
ಬೆಂಗಳೂರು, ಸೆಪ್ಟೆಂಬರ್ 25: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಸತತ ಚಾಟಿಯೇಟಿನ ಬಳಿಕ ಕೆಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೆರೆಯ ಸಂಪೂರ್ಣ ಪುನಶ್ಚೇತನ ಕಾರ್ಯ ಮುಗಿಯುತ್ತಿಲ್ಲ.
ಈ ಮಧ್ಯೆ ಬೆಳ್ಳಂದೂರು ಕೆರೆ ಸಂರಕ್ಷಣೆಗಾಗಿ ಕಸವನಹಳ್ಳಿ ನಿವಾಸಿಗಳು ಸೇರಿದಂತೆ ಅನೇಕ ವೇದಿಕೆಗಳು 'ಸೇವ್ ಬೆಳ್ಳಂದೂರು' ಅಭಿಯಾನ ನಡೆಸಿ, ನಾನಾ ರೀತಿಯಲ್ಲಿ ಹೋರಾಟ ನಡೆಸಿವೆ. ಇದೆಲ್ಲದರ ನಡುವೆಯೇ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ ಪರಿಣಾಮ ಕೆರೆಯಲ್ಲಿ ಕೊಳಚೆ, ಚರಂಡಿ ಹಾಗೂ ಮಳೆ ನೀರು ಹರಿದು ಬಂದು ನೊರೆ ಕಾಣಿಸಿಕೊಂಡಿದೆ.
ಅಚ್ಚರಿಯ ಸಂಗತಿ ಏನೆಂದರೆ ಬೆಳ್ಳಂದೂರು ಕೆರೆಯಲ್ಲಿ ಒಳಚರಂಡಿ ನೀರು ಸಂಸ್ಕರಣ ಘಟಕ ಸ್ಥಾಪಿಸುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಯರ್ ಗಳಿಗೆ ಕಾಮಗಾರಿ ಯಾವ ಹಂತಕ್ಕೆ ಬಂದಿದೆ ಎಂಬುದೇ ಗೊತ್ತಿಲ್ಲ.
ಯೋಜನೆ ಪ್ರಕಾರ 2020ರ ವೇಳೆಗೆ ಪೂರ್ಣಗೊಳ್ಳಬೇಕು. ಆದರೆ ಸಧ್ಯದ ಸ್ಥಿತಿಯಲ್ಲಿ ಯಾವ ಹಂತದಲ್ಲಿದೆ ಎಂಬುದು ಜಲಮಂಡಳಿಯ ಯಾವ ಅಧಿಕಾರಿಗಳಿಗೂ ತಿಳಿದಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಾ.ಜಿ.ಪರಮೇಶ್ವರ್, ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಬಂದಿರುವುದು ನನ್ನ ಗಮನಕ್ಕೆ ಬಂದಿದೆ. ನಾನೂ ಹಿಂದೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ ಎಂದರು.
ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗಂಭೀರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಬಜೆಟ್ ನಲ್ಲಿ 50ಕೋಟಿ ರೂ. ಮೀಸಲಿಡಲಾಗಿದೆ. ಈ ಸಮಸ್ಯೆ ಬಗೆಹರಿಸಲು ಇತರೆ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.












Click it and Unblock the Notifications