ಕೊಡಗು ಹಾಗೂ ಕೇರಳಕ್ಕೆ 1 ಕೋಟಿ ಮೌಲ್ಯದ ಜನೌಷಧಿ: ಅನಂತ್
ಬೆಂಗಳೂರು ಆಗಸ್ಟ್ 21: ನೆರೆ ಪೀಡಿತ ಕೊಡಗು ಹಾಗೂ ಕೇರಳ ರಾಜ್ಯಕ್ಕೆ ತಲಾ ಒಂದು ಲಾರಿಯಂತೆ ಸುಮಾರು 1 ಕೋಟಿ ಮೌಲ್ಯದ ಜನೌಷಧಿಗಳನ್ನು ಕಳುಹಿಸಿಕೊಡಲು ನಿರ್ಧರಿಸಿರುವುದಾಗಿ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.
ನಗರದ ನ್ಯಾಷನಲ್ ಮೈದಾನದಲ್ಲಿ ಬೆಂಗಳೂರು ಮಹಾನಗರ ಬಿಜೆಪಿ, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಿರುವ ಪರಿಹಾರ ಸಾಮಗ್ರಿಗಳನ್ನು ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡಗಿನವರು ದೇಶ ಪ್ರೇಮಿಗಳು ಹಾಗೂ ಕೊಡುಗೈ ದಾನಿಗಳು. ಅವರು ಆತಿಥ್ಯಕ್ಕೆ ಬಹಳ ಹೆಸರುವಾಸಿ. ದಕ್ಷಿಣದ ಕಾಶ್ಮಿರ ಎಂದೇ ಹೆಸರುವಾಸಿಯಾಗಿರುವ ಈ ಕೊಡಗು ಈಗ ಸರ್ವನಾಶದ ಅಂಚಿಗೆ ಬಂದಿದೆ.
ಬೆಂಗಳೂರು ಮಹಾನಗರ ಬಿಜೆಪಿ ಕಳೆದ ಮೂರು ದಿನಗಳಿಂದ ನಗರದ ಜನತೆಯಿಂದ ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಜನರಿಗೋಸ್ಕರ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದೆ. ತಮ್ಮ ಸಹೋದರ ಜಿಲ್ಲೆಯ ಜನರಿಗೆ ಆಗಿರುವ ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಕಾಳಜಿಯನ್ನು ನಗರದ ಜನತೆ ತಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಮಾಡುತ್ತಿದ್ದಾರೆ.
ಇಂತಹ ಸಮಯದಲ್ಲಿ ಅವರಿಗೆ ಬೇಕಾದ ಪರಿಹಾರ ಸಾಮಗ್ರಿಗಳನ್ನು ಕಳುಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಕಳೆದ ಮೂರು ದಿನಗಳಿಂದ ಪರಿಹಾರ ಸಾಮಗ್ರಿಗಳನ್ನು ಆರ್ ಅಶೋಕ್ ನೇತೃತ್ವದಲ್ಲಿ ಸಂಗ್ರಹಿಸಿದ್ದಾರೆ. ಸಂಸದ ಪಿ ಸಿ ಮೋಹನ್ ಸೇರಿದಂತೆ ಹಲವರು ಈ ಮಹತ್ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಅಲ್ಲದೇ ಈ ಸಾಮಗ್ರಿಗಳನ್ನು ತಲುಪಿಸುವ ಉದ್ದೇಶದಿಂದ ತಾವೇ ಕೊಡಗಿಗೆ ಹೊರಟಿರುವುದು ಬಹಳ ಶ್ಲಾಘನೀಯ ಎಂದರು.
ಇಂದು ಈ ಎಲ್ಲಾ ಸಾಮಗ್ರಿಗಳನ್ನು ಆಯಾ ಸ್ಥಳಗಳಿಗೆ ತಲುಪಿಸಲು ಬೆಂಗಳೂರು ನಗರದಿಂದ ರವಾನಿಸಲಾಯಿತು.

ಕೊಡಗಿಗೆ ವಿಶೇಷ ನೆರವು ನೀಡುವಂತೆ ನಿವೇದನೆ
ಕೊಡಗಿನಲ್ಲಿ ಆಗಿರುವ ವಿಪತ್ತಿನ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಅಲ್ಲದೆ, ಕೊಡಗಿಗೆ ವಿಶೇಷ ನೆರವು ನೀಡುವಂತೆ ನಿವೇದನೆಯನ್ನೂ ಮಾಡಿದ್ದೇವೆ ಎಂದರು.
ಎನ್ ಡಿ ಆರ್ ಎಫ್ ಹಾಗೂ ಸೇನೆಯವರು ಬಹಳ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಎಲ್ಲಿ ಬೊಟ್ಗಳು ತಲುಪುವುದಿಲ್ಲವೋ ಮತ್ತು ಹೆಲಿಕ್ಯಾಪ್ಟರ್ ಹೋಗುವುದಿಲ್ಲವೋ ಅಂತಹ ಕಡೆಯಲ್ಲಿಯೂ ಕಾರ್ಯಾಚರಣೆ ಮಾಡಿ ಜನರನ್ನು ರಕ್ಷಿಸಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ ಎಂದರು.

ಕರ್ತವ್ಯ ಎಂಬಂತೆ ಸಹಾಯ ಮಾಡುತ್ತೇವೆ
ನಾವು ನಮ್ಮ ಕುಟುಂಬದ ಜನರು ತೊಂದರೆಗೆ ಈಡಾದರೆ ದೇಣಿಗೆ ಎಂದು ಸಹಾಯ ಮಾಡುವುದಿಲ್ಲ. ಅವರ ಸಂಕಟದ ದಿನಗಳಿಗೆ ನಾವು ನಮ್ಮ ಕರ್ತವ್ಯ ಎಂಬಂತೆ ಸಹಾಯ ಮಾಡುತ್ತೇವೆ. ಬೆಂಗಳೂರು ಬಿಜೆಪಿ ತಂಡವೂ ಕೂಡಾ ನಿರಾಶ್ರಿತರ ಸೇವೆಯನ್ನು ತಮ್ಮ ಕರ್ತವ್ಯ ಎಂಬಂತೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅಲ್ಲಿನ ಜನರಿಗೆ ಜೀವನಾವಶ್ಯಕ ವಸ್ತುಗಳು ದೊರೆಯಬೇಕು. ಒಂದು ಮನೆಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಮುತುವರ್ಜಿಯಿಂದ ನಮ್ಮ ಕಾರ್ಯಕರ್ತರು ಸಂಗ್ರಹಿಸಿರುವುದು ಬಹಳ ಒಳ್ಳೆಯ ಕೆಲಸ ಎಂದರು.

ಒಂದು ಲಾರಿ ಜನೌಷಧಿಗಳನ್ನು ಕಳುಹಿಸಿಕೊಡಲಿದ್ದೇವೆ
ಭಾರತ ಸರಕಾರದ ಪರವಾಗಿ ಹಾಗೂ ನಮ್ಮ ಮಂತ್ರಾಲಯದ ಜೊತೆಗೂಡಿ ಕೊಡಗು ಹಾಗೂ ಕೇರಳ ಕ್ಕೆ ತಲಾ ಒಂದು ಲಾರಿ ಜನೌಷಧಿಗಳನ್ನು ಕಳುಹಿಸಿಕೊಡಲಿದ್ದೇವೆ ಎಂದು ಇದೇ ಸಂಧರ್ಭದಲ್ಲಿ ಸಚಿವರು ಘೋಷಿಸಿದರು. ಈ ಲಾರಿಗಳಲ್ಲಿ ಅಗತ್ಯವಾಗಿರುವ ಔಷಧಿಗಳ ಜೊತೆಯಲ್ಲಿ, ರಕ್ತದೊತ್ತಡ, ಹೃದ್ರೋಗ, ಮಧುಮೇಹ ಸೇರಿದಂತೆ ಎಲ್ಲಾ ಪ್ರಮುಖ ಔಷಧಿಗಳನ್ನು ಕಳುಹಿಸಿಕೊಡಲಿದ್ದೇವೆ. ಈ ಜೆನೆರಿಕ್ ಔಷಧಿಗಳ ಮೌಲ್ಯ ಒಂದು ಕೋಟಿಯಾಗಿದ್ದು, ಮಾರುಕಟ್ಟೆಯ ಮೌಲ್ಯ ಸುಮಾರು 3 ಕೋಟಿ ರೂಪಾಯಿ ಎಂದರು. ಇದನ್ನು ಭಾರತ ಸರಕಾರ ತನ್ನ ಕರ್ತವ್ಯ ಎಂದು ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

ಕೊಡಗು ಜಿಲ್ಲೆಗೆ ಒಂದು ಲಾರಿ ಲೋಡ್ ಬೇಳೆ
ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಅನಂತಕುಮಾರ್ ಅವರು, ಕೊಡಗು ಜಿಲ್ಲೆಗೆ ಒಂದು ಲಾರಿ ಲೋಡ್ ಬೇಳೆ ಹಾಗೂ ಒಂದು ಲಾರಿ ಲೋಡ್ ಅಕ್ಕಿ ಕಳುಹಿಸಲು ತೀರ್ಮಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೇ ವೇಳೆ ಅದಮ್ಯ ಚೇತನದ ವತಿಯಿಂದಲೂ ಕೇರಳ ಹಾಗೂ ಕೊಡಗು ಜನರಿಗೆ 10 ಸಾವಿರ ಜನೌಷಧಿ ಸ್ಯಾನಿಟರಿ ನ್ಯಾಪ್ ಕಿನ್ಗಳನ್ನು ಜೊತೆಗೆ ಬಿಸ್ಕತ್ತುಗಳನ್ನು ಕಳುಹಿಸಲು ನಿರ್ಧರಿಸಲಾಗಿತ್ತು.












Click it and Unblock the Notifications