ಮದ್ದೂರಿನಲ್ಲಿದ್ದ ಗೌರಿ ಲಂಕೇಶ್ ಹಂತಕರ ಸುಳಿವು ಹಿಡಿದ ಎಸ್ ಐಟಿ!
ಬೆಂಗಳೂರು, ಮಾರ್ಚ್ 26: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿಗಳು ಕೊಲೆಯ ನಂತರ ಮದ್ದೂರಿನಲ್ಲಿ ಇದ್ದರು ಎಂಬ ಸಂಗತಿ ಬಯಲಾಗಿದೆ. ಕ್ರೀಡಾಪಟುಗಳು ಧರಿಸುವಂಥ ಟೋಪಿ ಹಾಗೂ ಸನ್ ಗ್ಲಾಸ್ ಹಾಕಿಕೊಂಡಿದ್ದ ನಾಲ್ವರು ವ್ಯಕ್ತಿಗಳು ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಜತೆ ಮಾರುತಿ ಓಮ್ನಿ ಕಾರಿನಲ್ಲಿ ಸುತ್ತಾಡಿದ್ದರು ಎಂಬುದು ಗೊತ್ತಾಗಿದೆ.
ನವೀನ್ ಕುಮಾರ್ ಅಕ್ರಮವಾಗಿ ಗನ್ ಗಳನ್ನು ಮಾರಾಟ ಮಾಡುತ್ತಿದ್ದವನು. ಎಸ್ ಐಟಿಯಿಂದ ಆತನನ್ನು ವಶಕ್ಕೆ ಪಡೆದಾಗ, ಗೌರಿ ಲಂಕೇಶ್ ಹತ್ಯೆಯ ವಿಚಾರವಾಗಿ ಬಾಯಿ ಬಿಟ್ಟಿದ್ದ.
"ಮಧ್ಯಮ ಎತ್ತರ ಹಾಗೂ ಗಾತ್ರದವರಾಗಿದ್ದರು. ಆ ಪೈಕಿ ಇಬ್ಬರು ಕನ್ನಡಕ ಹಾಕಿದ್ದರು. ಆ ಇಬ್ಬರಲ್ಲಿ ಒಬ್ಬನಿಗೆ ಮಾಲುಗಣ್ಣಿತ್ತು. ಅವರು ಸ್ಥಳೀಯರ ಜತೆಗೆ ಮಾತನಾಡುತ್ತಿರಲಿಲ್ಲ" ಎಂದು ಪ್ರತ್ಯಕ್ಷದರ್ಶಿಗಳು ಮದ್ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನೂ ಮುಂದುವರಿದು, ಮುಖ್ಯರಸ್ತೆಯ ಬಳಿ ಇರುವ ಬೇಕರಿಗೆ ಭೇಟಿ ನೀಡುತ್ತಿದ್ದ ಅಪರಿಚಿತರು ಅಲ್ಲಿಂದ ಟೀ ಮತ್ತು ಬಿಸ್ಕತ್ ಖರೀದಿಸುತ್ತಿದ್ದರು. ಅವರ ಜತೆಗೆ ನವೀನ್ ಹಿಂದಿಯಲ್ಲಿ ಮಾತನಾಡುತ್ತಿದ್ದ" ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಂತಕನಿಗೆ ಮಾಲುಗಣ್ಣಿತ್ತು
ಗೌರಿ ಲಂಕೇಶ್ ಹತ್ಯೆಯಲ್ಲಿ ಈ ನಾಲ್ವರು ಪ್ರಮುಖ ಶಂಕಿತರು. "ಆ ನಾಲ್ವರ ಪೈಕಿ ಒಬ್ಬ ಗೌರಿ ಲಂಕೇಶ್ ಗೆ ಶೂಟ್ ಮಾಡಿದವನು ಎಂಬುದು ನಮ್ಮ ಗುಮಾನಿ. ಆ ಮನುಷ್ಯನಿಗೆ ಮಾಲುಗಣ್ಣಿತ್ತು. ಇತರರು ವಿವಿಧ ಕೆಲಸಗಳಿಗೆ ಆತನಿಗೆ ಸಹಾಯ ಮಾಡುವುದಕ್ಕೆ ಅಂತ ನೇಮಕಗೊಂಡಿದ್ದವರು" ಎಂದು ಮೂಲಗಳು ತಿಳಿಸಿವೆ.

ಇಡೀ ಹತ್ಯೆಯಲ್ಲಿ ಕೊಂಡಿಯಂತೆ ಕೆಲಸ ಮಾಡಿದ್ದವನು ಪ್ರವೀಣ್
ಪ್ರವೀಣ್ ಎಂಬ ವ್ಯಕ್ತಿಗಾಗಿ ಇದೀಗ ಹುಡುಕಾಟ ಆರಂಭಿಸಲಾಗಿದೆ. ನಾಲ್ವರು ವ್ಯಕ್ತಿಗಳು ಹಾಗೂ ನವೀನ್ ಮಧ್ಯೆ ಕೊಂಡಿಯಂತೆ ಕೆಲಸ ಮಾಡಿದ ವ್ಯಕ್ತಿ ಆತ. ಉತ್ತರ ಬೆಂಗಳೂರಿನ ಸಣ್ಣ ಮನೆಯೊಂದರಲ್ಲಿ ಪ್ರವೀಣ್ ಬಾಡಿಗೆಗಿದ್ದ. ಆತನಿಗೆ ಮಂಗಳೂರು ಮೂಲದ ವ್ಯಕ್ತಿಗಳ ಜತೆಗೆ ನಂಟಿತ್ತು. ಆತ ಬಲಪಂಥೀಯ ಆಗಿದ್ದು, ಇತರ ರಾಜ್ಯಗಳಲ್ಲೂ ಆತನ ನಂಟಿತ್ತು ಎಂದು ಹೇಳಲಾಗಿದೆ.

ಮಂಗಳೂರು ಮೂಲದ ವ್ಯಕ್ತಿ ಯಾರು?
ಪ್ರವೀಣ್ ನನ್ನು ವಶಕ್ಕೆ ಪಡೆಯುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಆತನೊಬ್ಬನ ಮೂಲಕ ಮಾತ್ರ ಮಂಗಳೂರು ಮೂಲದ ಮುಖ್ಯ ವ್ಯಕ್ತಿ ಹಾಗೂ ಇತರರನ್ನು ತಲುಪಲು ಸಾಧ್ಯವಾಗುತ್ತದೆ. ಇನ್ನು ನವೀನ್ ಕುಮಾರ್ ನ ಮಂಪರು ಪರೀಕ್ಷೆಯ ವಿಚಾರಣೆಯನ್ನು ವಿಡಿಯೋ ಮಾಡುವುದಾಗಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಪರು ಪರೀಕ್ಷೆ ವಿಡಿಯೋ ಕೋರ್ಟ್ ಗೆ ಸಲ್ಲಿಕೆ
ಮಂಪರು ಪರೀಕ್ಷೆಯ ವಿಡಿಯೋ ಮಾಡಿ, ಅದರಲ್ಲಿ ಕೆ.ಟಿ.ನವೀನ್ ಕುಮಾರ್ ಯಾರೆಲ್ಲರ ಹೆಸರು ಹೇಳುತ್ತಾನೋ ಅದನ್ನು ಕೋರ್ಟ್ ನ ಗಮನಕ್ಕೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ ಐದರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಬಳಿ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆಗಿತ್ತು.












Click it and Unblock the Notifications