ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆಗೆ ಮೊದಲ ಟೆಂಡರ್ ಆಹ್ವಾನ
ಬೆಂಗಳೂರು, ನವೆಂಬರ್ 24: ಬೆಂಗಳೂರು ಸಬ್ಅರ್ಬನ್ ರೈಲ್ವೆ ಯೋಜನೆಗೆ ಮೊದಲ ಟೆಂಡರ್ ಆಹ್ವಾನಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ಮಾರ್ಗ ನಿರ್ಮಾಣ ಕುರಿತು ಟೆಂಡರ್ ಕರೆಯಲಾಗಿದೆ.
ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 25.1 ಕಿಮೀ ಉದ್ದದ ಮಾರ್ಗ ಇರಲಿದೆ. 37 ವರ್ಷಗಳ ಹಿಂದೆ ಈ ಯೋಜನೆ ಕುರಿತು ಮಾತುಕತೆ ನಡೆದಿತ್ತು, 2026ಕ್ಕೆ ಗಡುವು ನೀಡಲಾಗಿದ್ದು, 2030ರಿಂದ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಸಂಪುಟ ಆರ್ಥಿಕ ವ್ಯವಹಾರಗಳ ಸಮಿತಿ ಸದರಿ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡುವಾಗ ನಾಲ್ಕು ಕಾರಿಡಾರ್ ಪೈಕಿ ಆದ್ಯತೆ ಮೇರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ-ದೇವನಹಳ್ಳಿ(41.40ಕಿ.ಮೀ) ಕಾರಿಡಾರ್ ಕೈಗೆತ್ತಿಕೊಂಡು ಮೂರು ವರ್ಷದಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು.

ಆದರೆ, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕೆ-ರೈಡ್, ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮತ್ತು ಹೀಲಳಿಗೆ-ರಾಜಾನುಕುಂಟೆ ಕಾರಿಡಾರ್ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ. 148.17 ಕಿ.ಮೀ ಉದ್ದದ 15,767 ಕೋಟಿ ರೂ. ಅಂದಾಜು ವೆಚ್ಚದ ಉಪನಗರ ರೈಲು ಯೋಜನೆಯಲ್ಲಿ ಪ್ರಮುಖವಾಗಿ ನಾಲ್ಕು ಕಾರಿಡಾರ್ಗಳು ಬರಲಿವೆ. ಈ ಪೈಕಿ ಕೆ-ರೈಡ್ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ-ರಾಜಾನುಕುಂಟೆ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದೆ.
ಯೋಜನೆಯ ವೆಚ್ಚವನ್ನು ಭಾರತ ಸರ್ಕಾರದ ಅನುದಾನ ಬಾಹ್ಯ ಸಂಪನ್ಮೂಲಗಳ 20:20:60 ಅನುಪಾತದಡಿ ಭರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಈಗಾಗಲೇ 400 ಕೋಟಿ ರೂ. ಅನ್ನು 2020-21ರಲ್ಲಿ ಬಿಡುಗಡೆಗೊಳಿಸಿದೆ.
ನಾಲ್ಕು ಕಾರಿಡಾರ್ಗಳ ಕುರಿತು ಮಾಹಿತಿ
*ಕೆಎಸ್ಆರ್ ಬೆಂಗಳೂರು ನಗರ ನಿಲ್ದಾಣ-ದೇವನಹಳ್ಳಿ-41.40 ಕಿ.ಮೀ
*ಬೈಯಪ್ಪನಹಳ್ಳಿ ಟರ್ಮಿನಲ್ -ಚಿಕ್ಕಬಾಣಾವರ-25 ಕಿ.ಮೀ
*ಕೆಂಗೇರಿ-ವೈಟ್ಫೀಲ್ಡ್-35.52 ಕಿ.ಮೀ
*ಹೀಲಳಿಗೆ ನಿಲ್ದಾಣ-ರಾಜಾನುಕುಂಟೆ-46.24 ಕಿ.ಮೀ ಇರಲಿದೆ.
ಇದರಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ನಿರ್ಮಾಣ ಸಂಬಂಧ ಸಿವಿಲ್ ಕಾಮಗಾರಿಗೆ ಈ ಮಾಸಾಂತ್ಯದ ವೇಳೆಗೆ ಟೆಂಡರ್ ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ಅಕ್ಟೋಬರ್-ನವೆಂಬರ್ ವೇಳೆಗೆ ಈ ಟೆಂಡರ್ ಪ್ರಕ್ರಿಯೆ ಮುಗಿಸಿ, ಬಳಿಕ ಹೀಲಳಿಗೆ-ರಾಜಾನುಕುಂಟೆ ಕಾರಿಡಾರ್ ಸಿವಿಲ್ ಕಾಮಗಾರಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಕೆ-ರೈಡ್ ಮೂಲಗಳು ತಿಳಿಸಿವೆ.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ ಮಾದರಿಯಲ್ಲಿ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಅಂದರೆ, ಒಟ್ಟು ಯೋಜನಾ ವೆಚ್ಚದ ಪೈಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಶೇ.20ರಷ್ಟು ಹಣ ಭರಿಸಲಿದೆ. ಉಳಿದ ಶೇ.60ರಷ್ಟು ಹಣವನ್ನು ಕೆ-ರೈಡ್ ಸಂಸ್ಥೆ ಸಂಸ್ಥೆಗಳು ಅಥವಾ ಬ್ಯಾಂಕ್ಗಳಿಂದ ಸಾಲದ ರೂಪದಲ್ಲಿ ಪಡೆಯಲಿವೆ.
ಇದೀಗ ಜರ್ಮನಿ ಮೂಲದ ಕೆಎಫ್ಡಬ್ಲ್ಯೂ ಮತ್ತು ಫ್ರಾನ್ಸ್ ಮೂಲದ ಎಎಫ್ಡಿ ಸಂಸ್ಥೆಗಳು ಸದರಿ ಯೋಜನೆ ಅನುಷ್ಠಾನಕ್ಕೆ ಸಾಲ ನೀಡಲು ಆಸಕ್ತಿ ತೋರಿವೆ ಎಂಬುದು ಸ್ಪಷ್ಟವಾಗಿದೆ.
ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ನಲ್ಲಿ ಒಟ್ಟು 14 ರೈಲು ನಿಲ್ದಾಣಗಳು ಬರಲಿವೆ. ಬೈಯಪ್ಪನಹಳ್ಳಿ, ಕಸ್ತೂರಿನಗರ, ಸೇವಾನಗರ, ಬಾಣಸವಾಡಿ, ಕಾವೇರಿನಗರ, ನಾಗವಾರ, ಕನಕನಗರ, ಹೆಬ್ಬಾಳ, ಲೊಟ್ಟಗೊಲ್ಲ ಹಳ್ಳಿ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ, ಮೈದಾರಹಳ್ಳಿ ಹಾಗೂ ಚಿಕ್ಕಬಾಣಾವರ ರೈಲ್ವೆ ನಿಲ್ದಾಣಗಳು ಬರಲಿವೆ.
ಸಬ್ ಅರ್ಬನ್ ಯೋಜನೆಯಿಂದ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಆಗುವುದರ ಜೊತೆಗೆ ನಗರ ಹೊರವಲಯದ ಉಪನಗರ ಸಾರಿಗೆ ಸಂಪರ್ಕ ಸುಲಭವಾಗಲಿದೆ. ರೈಲ್ವೆ ಡಬಲಿಂಗ್ ಯೋಜನೆಗಳಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ. 15767 ಕೋಟಿ ರೂ. ವೆಚ್ಚದಲ್ಲಿ 148 ಕಿ.ಮೀ ಉದ್ದದ 4 ಕಾರಿಡಾರ್ಗಳ ಸಬ್ ಅರ್ಬನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.












Click it and Unblock the Notifications