ರಸ್ತೆ ಗುಂಡಿ ಮುಚ್ಚುವ ವಿಚಾರ; ಆದೇಶ ಪಾಲಿಸಲು ಪಾಲಿಕೆ ವಿಫಲವೆಂದು ಹೈಕೋರ್ಟ್ ಕಿಡಿ
ಬೆಂಗಳೂರು, ಅ.27. ಸಾರ್ವಜನಿಕರು ವಿಶೇಷವಾಗಿ ವಾಹನ ಸವಾರರಿಗೆ ಯಮಧೂತನಂತೆ ಕಾಡುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳ ವಿಚಾರದಲ್ಲಿ ಪಾಲಿಕೆ ನ್ಯಾಯಾಲಯಗಳ ಯಾವ ಆದೇಶಗಳನ್ನೂ ಪಾಲಿಸುತ್ತಿಲ್ಲವೆಂಬುದು ಎಲ್ಲರಿಗೂ ತಿಳಿದ ಸಂಗತಿಯೇ ಸರಿ.
ಆದರೂ ನ್ಯಾಯಾಲಯ ಅಗಿಂದಾಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ನಿರ್ದೇಶನಗಳನ್ನು ನೀಡುತ್ತಲೇ ಬಂದಿದೆ. ಇಷ್ಟಾದರೂ ಪಾಲಿಕೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಏಕೆಂದರೆ ಗುರುವಾರವೂ ಬಿಬಿಎಂಪಿ ಹೈಕೋರ್ಟ್ನಿಂದ ಮಂಗಳಾರತಿ ಮಾಡಿಸಿಕೊಂಡಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅನಾಹುತಗಳ ಕುರಿತಂತೆ ಕೋರಮಂಗದಲ ವಿಜಯ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗುರುವಾರ ಸಿಜೆ ಪ್ರಸನ್ನ ಬಿ ವರಳೆ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಂದಿತು.

ಆಗ ಅರ್ಜಿದಾರರ ಪರ ವಕೀಲರು, ರಸ್ತೆಗುಂಡಿಗಳಿಂದ ಸಾವನ್ನಪ್ಪುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರಸ್ತೆ ಗುಂಡಿ ಮುಚ್ಚಲು ಸಮರ್ಪಕ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ ಎಂದು ದೂರಿದರು.
ಆಗ ಬಿಬಿಎಂಪಿ ವಕೀಲರು, ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್ ಗೆ ಬಿಬಿಎಂಪಿ ವರದಿ ಸಲ್ಲಿಕೆಗೆ ಮತ್ತು ವಾದಮಂಡನೆಗೆ ಕಾಲಾವಕಾಶ ಕೋರಿದರು. ಆಗ ನ್ಯಾಯಪೀಠ, ಹೈಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಇದನ್ನು ಹೀಗೆಯೇ ಬಿಡಲು ಸಾಧ್ಯವಿಲ್ಲ, ಸಂಬಂಧಿಸಿದ ಅಧಿಕಾರಿಗಳ ಪ್ರಮಾಣಪತ್ರದೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿತು.
ರಾತ್ರೋರಾತ್ರಿ ನಿರ್ಮಾಣವಾದವೇ?
ಇದೇ ವೇಳೆ ನ್ಯಾಯಾಲಯದ ಮುಂದೆ ಯಲಹಂಕದ ಕೋತಿಹೊಸಹಳ್ಳಿ, ಕೊಡಿಗೇಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಶ್ನಿಸಿ ಅಶ್ವಥನಾರಾಯಣಗೌಡ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
ಆಗ ಬಿಬಿಎಂಪಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡು, ಸರ್ಕಾರಿ ಜಮೀನಿನಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಇಷ್ಟು ದೊಡ್ಡ ಕಟ್ಟಡಗಳು ರಾತ್ರೋರಾತ್ರಿ ನಿರ್ಮಾಣವಾದವೇ? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು? ಕಚೇರಿಯಲ್ಲಿ ಕುಳಿತು ಮೂಕಪ್ರೇಕ್ಷಕರಾಗಿದ್ದರೇ? ಸರ್ಕಾರಿ ಭೂಮಿಯಲ್ಲಿ ಕಟ್ಟಡ ನಿರ್ಮಿಸುವಾಗ ಸುಮ್ಮನಿದ್ದಿದ್ದೇಕೆ? ಎಂದು ಖಾರವಾಗಿ ಪ್ರಶ್ನಿಸಿತು.
ಅಲ್ಲದೆ, ಅನುಮತಿ ನೀಡುವಾಗ ದಾಖಲೆ ಪರಿಶೀಲಿಸುವುದಿಲ್ಲವೇ? ಎಲ್ಲಾ ಇಲಾಖೆಗಳಲ್ಲಿಯೂ ಇಂತಹ ಅರಾಜಕತೆ, ನಿರ್ಲಕ್ಷ್ಯತೆಯಿದೆಯೇ? ಸರ್ಕಾರಕ್ಕೆ ತನ್ನ ಆಸ್ತಿಯ ಮೇಲೆಯೇ ನಿಯಂತ್ರಣವಿಲ್ಲವೇ.? ಎಂದೂ ಸಹ ಕಿಡಿ ಕಾರಿತು.
ಇಲಾಖೆಗಳಲ್ಲಿ ಸಮನ್ವಯತೆ ಇಲ್ಲದಿರಲು ಕಾರಣವೇನು ಎಂದು ಸಿಜೆ ಸರ್ಕಾರ, ಬಿಬಿಎಂಪಿಯನ್ನು ಪ್ರಶ್ನಿಸಿದರು. ತಪ್ಪಿತಸ್ಥ ಅಧಿಕಾರಿ ವಿರುದ್ಧ ವಿಚಾರಣೆ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಹೈಕೋರ್ಟ್ ಸೂಚನೆ ನೀಡಿ ಮೂರು ವಾರಗಳಲ್ಲಿ ವಿಚಾರಣಾ ವರದಿ ನೀಡುವಂತೆ ನಿರ್ದೇಶನ ನೀಡಿತು.
ಇದೇ ಪ್ರಕರಣದಲ್ಲಿ ಎನ್ಟಿಐ ಹೌಸಿಂಗ್ ಸೊಸೈಟಿ, ಕೆ.ಎನ್.ಚಕ್ರಪಾಣಿ ಸೇರಿ ಹಲವರಿಗೆ ನ್ಯಾಯಾಲಯ ಈ ಹಿಂದೆ ನೋಟಿಸ್ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications