ಸಚಿವ ದೇಶಪಾಂಡೆ ಆಸ್ತಿ ಕೇವಲ 11 ಕೋಟಿಯಲ್ಲ!

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಜಯಂತ್ ಮುಕುಂದ್ ತಿಣೇಕರ್, 2004, 2008 ಮತ್ತು 2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಾಗ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ. ತಮ್ಮ ನಿಜವಾರ ಆಸ್ತಿಯ ಮೌಲ್ಯವನ್ನು ಬಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಆರ್ ವಿ ದೇಶಪಾಂಡೆ ಪತ್ನಿ, ಮಕ್ಕಳು ಮತ್ತು ಸೊಸೆಯಂದಿರ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ. ಇವರು ಕುಟುಂಬ ಮೂರು ಟ್ರಸ್ಟ್ಗಳನ್ನು ನಡೆಸುತ್ತಿದ್ದು, ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣ ಬಳಿ 100 ಕೋಟಿ ರೂ. ಮೌಲ್ಯದ ಬಂಗಲೆ ಹೊಂದಿದ್ದಾರೆ. ಆದರೆ, ಈ ಮಾಹಿತಿಯನ್ನು ಆಯೋಗದಿಂದ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
2013ರ ಚುನಾವಣೆಗೆ ಆಯೋಗಕ್ಕೆ ತಮ್ಮ ಬಳಿ 11 ಕೋಟಿ ರೂ. ಮೌಲ್ಯದ ಸಂಪತ್ತು ಇರುವುದಾಗಿ ದೇಶಪಾಂಡೆ ಪ್ರಮಾಣ ಪತ್ರ ಸಲ್ಲಿಸಿದ್ದರು. 1997ರಿಂದ 2004ರವರೆಗೆ ದೇಶಪಾಂಡೆ ಅವರು 9 ಕಂಪನಿಗಳ ನಿರ್ದೇಶಕರಾಗಿದ್ದರು. ಆದರೆ, ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಜಯಂತ್ ದೂರಿದ್ದಾರೆ.
ಆರ್ ವಿ ದೇಶಪಾಂಡೆ ತಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲ ಎಂದು ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ. ಯಾವುದೇ ಕಂಪೆನಿಗಳಿಗೆ ಪ್ಯಾನ್ ಕಾರ್ಡ್ ಇಲ್ಲದೆ ನಿರ್ದೇಶಕರಾಗುವುದು ಕಾನೂನು ಬಾಹೀರ. ಈ ಆಧಾರದ ಮೇಲೆಯೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಜಯಂತ್ ಹೇಳಿದರು. ಸಿಎಂ ಸಿದ್ದರಾಮಯ್ಯ ದೇಶಪಾಂಡೆ ಅವರನ್ನು ಸಂಪುಟದಿಂದ ಕೈ ಬಿಟ್ಟು ಈ ಕುರಿತು ತನಿಖೆ ನಡೆಸಲು ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲಾ ಆರೋಪಗಳು ನಿರಾಧಾರ : ತಮ್ಮ ವಿರುದ್ಧ ಜಯಂತ್ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ ಎಂದು ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ. ನನ್ನ ಆಸ್ತಿ ವಿವರಗಳನ್ನು ಲೋಕಾಯುಕ್ತ, ಆದಾಯ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ನಾನು ಯಾವುದೇ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿಲ್ಲ ಎಂದು ಅವರು ಹೇಳಿದರು. ಜಯಂತ್ ನಿರಾಧಾರವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications