ಅನರ್ಹ ಶಾಸಕ ಮುನಿರತ್ನಗೆ ಸಂಕಷ್ಟ ತಂದಿಟ್ಟ ಬಿಜೆಪಿ ಮುಖಂಡ
ಬೆಂಗಳೂರು, ಸೆಪ್ಟೆಂಬರ್ 19: ಅನರ್ಹ ಶಾಸಕರು ಬಿಜೆಪಿ ಅಧಿಕಾರಕ್ಕೇರಲು ಸಹಾಯವೇನೋ ಮಾಡಿದರು. ಆದರೆ ಅವರನ್ನು ಬಿಜೆಪಿಯ ಎಲ್ಲ ಮುಖಂಡರು ಹಾರ್ದಿಕವಾಗಿ ಸ್ವಾಗತಿಸುತ್ತಿಲ್ಲ. ವಿಶೇಷವಾಗಿ ರಾಜರಾಜೇಶ್ವರಿ ನಗರ ಶಾಸಕರಾಗಿದ್ದ ಮುನಿರತ್ನ ಅವರಿಗೆ ಬಿಜೆಪಿಯಲ್ಲಿಯೇ ಪ್ರತಿರೋಧ ಎದುರಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಅವರ ವಿರುದ್ಧ ನಕಲಿ ವೋಟರ್ ಐಡಿ ಸಂಬಂಧ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು, ಕ್ಷೇತ್ರದ ಚುನಾವಣೆಯೇ ಮುಂದೂಡುವಂತಾಗಿತ್ತು. ನಂತರ ಚುನಾವಣೆ ನಡೆದು ಮುನಿರತ್ನ ಅವರು ಸಮೀಪ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜು ಗೌಡ ವಿರುದ್ಧ ಜಯಗಳಿಸಿದರು.
ಆದರೆ ನಂತರ ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಅಧಿಕಾರಕ್ಕೇರಲು ಸಹಾಯ ಮಾಡಿದ ನಂತರ, ನಕಲಿ ವೋಟರ್ ಐಡಿ ಪ್ರಕರಣದಿಂದ ಮುನಿರತ್ನ ಅವರ ಹೆಸರನ್ನೇ ಕೈಬಿಡಲಾಗಿತ್ತು. ಇದಕ್ಕೆ ಬಿಜೆಪಿ ಸರ್ಕಾರದ ಕೃಪಾಶೀರ್ವಾದ ಕಾರಣ ಎಂದು ಹೇಳಲಾಗಿತ್ತು. ಆದರೀಗ ಮತ್ತೆ ನಕಲಿ ವೋಟರ್ ಐಡಿ ಗುಮ್ಮ ಮುನಿರತ್ನ ಬೆನ್ನು ಬಿದ್ದಿದೆ.

ಮುನಿರತ್ನ ರನ್ನು ಒಪ್ಪಿಕೊಳ್ಳುತ್ತಿಲ್ಲ ರಾಜರಾಜೇಶ್ವರಿ ನಗರ ಬಿಜೆಪಿ
ಮುನಿರತ್ನ ಅವರನ್ನು ಬಿಜೆಪಿ ರಾಜ್ಯ ಮುಖಂಡರು ಒಪ್ಪಿಕೊಂಡರೂ, ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಮುಖಂಡರು ಒಪ್ಪಿಕೊಳ್ಳುತ್ತಿಲ್ಲ, ಕಳೆದ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ನಿಂತು ಹೋರಾಡಿದ್ದ ತುಳಸಿ ಮುನಿರಾಜು ಗೌಡ ಅವರು ಮುನಿರತ್ನ ಹೆಸರು ವೋಟರ್ ಐಡಿ ಪ್ರಕರಣದಲ್ಲಿ ಕೈಬಿಟ್ಟಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಕೋರ್ಟ್ ಮೆಟ್ಟಿಲೇರಿದ ಬಿಜೆಪಿಯ ತುಳಸಿ ಮುನಿರಾಜು
ಪ್ರಕರಣದಲ್ಲಿ ಮುನಿರತ್ನ ಅವರನ್ನು ಆರೋಪಿ ಮಾಡಬೇಕೆಂದು ತುಳಸಿ ಮುನಿರಾಜು ಗೌಡ ಅವರು ಏಳನೇ ಎಸಿಎಂಎಂ ಕೋರ್ಟ್ಗೆ ಪ್ರೊಟೆಸ್ಟ್ ಪಿಟಿಷನ್ ಸಲ್ಲಿಸಿದ್ದರು. ಈ ಪಿಟಿಶನ್ ಅನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಚಾರ್ಜ್ಶೀಟ್ನಲ್ಲಿ ಮುನಿರತ್ನ ಹೆಸರು ಕೈಬಿಡಲಾಗಿದೆ
ಪೊಲೀಸರು ಏಳನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್ ಶೀಟ್ನಲ್ಲಿ ಮುನಿರತ್ನ ಅವರ ಹೆಸರು ಕೈಬಿಡಲಾಗಿತ್ತು. ಆದರೆ ಈ ಮುಂಚೆ ಪ್ರಕರಣದಲ್ಲಿ ಅವರೇ ಪ್ರಮುಖ ಆರೋಪಿಯಾಗಿದ್ದರು.

ರಾಜರಾಜೇಶ್ವರಿ ನಗರ ಬಿಜೆಪಿಯಿಂದ ಪ್ರತಿರೋಧ
ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯೊಂದಿಗೆ ಸಖ್ಯ ಆರಂಭಿಸಿದಾಗಿನಿಂದಲೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯು ವಿರೋಧ ಮಾಡುತ್ತಲೇ ಬಂದಿದೆ. ಇತ್ತೀಚೆಗೆ ಕ್ಷೇತ್ರದ ಬಿಜೆಪಿ ಮುಖಂಡರ ಬಗ್ಗೆ ಆರ್.ಅಶೋಕ್ ಅವರಿಗೆ ಮುನಿರತ್ನ ದೂರು ಸಹ ನೀಡಿದ್ದರು. ಇದಕ್ಕೆ ಬದಲಾಗಿ ಕ್ಷೇತ್ರದ ಇಬ್ಬರು ಬಿಜೆಪಿ ಮುಖಂಡರು ಪಕ್ಷದಿಂದ ಹೊರಹಾಕಲಾಗಿತ್ತು.

ಬಿ.ಎಲ್.ಸಂತೋಶ್ ಬೆಂಬಲ ಹೊಂದಿರುವ ಮುನಿರಾಜು ಗೌಡ
ಆದರೆ ಕೂಡಲೇ ಮಧ್ಯ ಪ್ರವೇಶಿಸಿದ ತುಳಸಿ ಮುನಿರಾಜುಗೌಡ, ಬಿ.ಎಲ್.ಸಂತೋಶ್ ಸಹಾಯದಿಂದ ಅಮಾನತ್ತು ರದ್ದು ಮಾಡಿಸಿದರು. ಅಷ್ಟೆ ಅಲ್ಲದೆ ಮುನಿರತ್ನ ಅವರಿಗೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಹಕಾರ ದೊರೆಯುವಂತೆಯೂ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಇವೆ.












Click it and Unblock the Notifications