ನಕಲಿ ಪೊಲೀಸ್ ದಾಳಿ ಮಾಡಿ ದರೋಡೆ ಅಸಲಿ ಪೊಲೀಸರು ಅಂದರ್
ಬೆಂಗಳೂರು ನವೆಂಬರ್ 22: ಕಳ್ಳರನ್ನು ಹಿಡಿಯಬೇಕಾದವರು ಪೊಲೀಸರು. ದುಡ್ಡಿಗಾಗಿ ಪೊಲೀಸರೇ ಕಳ್ಳತನಕ್ಕೆ ಇಳಿದು ಸಿಕ್ಕಿಬಿದ್ದಿರುವ ಕಥೆಯಿದು. ಅಸಲಿ ಪೊಲೀಸರು ಕಳ್ಳರ ಜತೆಗೆ ಸೇರಿಕೊಂಡು ನಕಲಿ ದಾಳಿ ಮಾಡಿ ಚಿನ್ನದ ಆಭರಣಗಳನ್ನು ದೋಚಿ ಸಿಕ್ಕಿಬಿದ್ದಿದ್ದಾರೆ. ಅಸಲಿ ಪೊಲೀಸರು ಈಗ ದರೋಡೆಕೋರರ ಜತೆಗೆ ಜೈಲು ಪಾಲಾಗಿದ್ದಾರೆ. ಅಂದಹಾಗೆ ಕಳ್ಳರು ಮತ್ತು ಪೊಲೀಸರು ಜತೆಗೂಡಿ ನಕಲಿ ಪೊಲೀಸ್ ರೇಡ್ ಮಾಡಿರುವ ದರೋಡೆಯ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅವತ್ತು ನವೆಂಬರ್ 11. ನಗರ್ತಪೇಟೆಯ ಅಣ್ಣಯ್ಯ ಬೀದಿಯಲ್ಲಿ ಚಿನ್ನದ ಅಂಗಡಿಗೆ ಏಕಾಏಕಿ ಪೊಲೀಸರು ದಾಳಿ ಮಾಡಿದ್ದರು. ನೀನು ಪರವಾನಗಿ ಇಲ್ಲದೇ ಅಂಗಡಿ ನಡೆಸುತ್ತಿದ್ದೀಯ. ಕದ್ದ ಚಿನ್ನ ಖರೀದಿಸಿರುವ ಮಾಹಿತಿ ಇದೆ ಎಂದು ಸಿಸಿಬಿ ಪೊಲೀಸರ ಶೈಲಿಯಲ್ಲೇ ದಾಳಿ ನಡೆಸಿ ಬರೋಬ್ಬರಿ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು. ದಾಳಿ ನಡೆದ ಬಳಿಕ ಅಂಗಡಿ ಮಾಲೀಕ ಕಾರ್ತಿಕ್ ಅವರು ಪರಿಚಿತ ಪೊಲೀಸರ ಮೂಲಕ ದಾಳಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ದಾಳಿ ನಡೆಸಿದ್ದು ಅಸಲಿ ಪೊಲೀಸರಲ್ಲ, ದರೋಡೆಕೋರರು ಎಂಬ ಸಂಗತಿ ಅರಿವಿಗೆ ಬಂದಿತ್ತು. ಕೂಡಲೇ ಹೋಗಿ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ಸೋಗಿನಲ್ಲಿ ದರೋಡೆಕೋರರು ದಾಳಿ ನಡೆಸಿ ಚಿನ್ನಾಭರಣ ಕದ್ದಿದ್ದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡಸಿದ್ದರು. ಪ್ರಕರಣದ ತನಿಖೆ ನಡೆಸಿದ ಹಲಸೂರುಗೇಟ್ ಪೊಲೀಸರು ನಕಲಿ ದಾಳಿ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಇಬ್ಬರು ಅಸಲಿ ಪೊಲೀಸ್ ಕಾನ್ಸ್ಟೇಬಲ್ ಗಳು ನಕಲಿ ದಾಳಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಪೇದೆ ಅಶೋಕ್ ಸೇರಿ ಎಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಕಾನ್ಸ್ಟೇಬಲ್ ಚೌಡೇಗೌಡ ತಲೆಮರೆಸಿಕೊಂಡಿದ್ದಾನೆ.
ನಡೆದಿದ್ದು ಇಷ್ಟೇ : ಚಿನ್ನದ ಅಂಗಡಿ ಮಾಲೀಕ ಕಾರ್ತೀಕ್ ಪರವನಾಗಿ ಪಡೆಯದೇ ಚಿನ್ನದ ಆಭರಣ ಮಾಡುತ್ತಿದ್ದರು. ಈ ವಿಷಯ ತಿಳಿದಿದ್ದ ಬಿಲ್ಡಿಂಗ್ ಮಾಲೀಕರ ಪುತ್ರ ಸೂರಜ್ ಕಳ್ಳರ ಜತೆ ಸೇರಿ ಪೊಲೀಸರ ಹೆಸರಿನಲ್ಲಿ ದಾಳಿ ನಡೆಸಿ ಹಣ ದೋಚಲು ಸಂಚು ರೂಪಿಸಿದ್ದಾರೆ. ಅದಕ್ಕೆ ಅಸಲಿ ಪೊಲೀಸರ ನೆರವು ಪಡೆಯಲು ಮುಂದಾಗುವ ದರೋಡೆಕೋರರ ತಂಡ, ಅಪಘಾತ ಪ್ರಕರಣದಲ್ಲಿ ಪ್ರಮುಖ ಆರೋಪಿ ನದೀಮ್ ಗೆ ಪರಿಚಯವಾಗಿದ್ದ ಕಾನ್ಸ್ಟೇಬಲ್ ಗಳಾದ ಚೌಡೇಗೌಡ ಮತ್ತು ಅಶೋಕ್ ಜತೆ ಮಾತನಾಡಿ ಯೋಜನೆ ರೂಪಿಸಿದ್ದಾರೆ. ಕಾರ್ತೀಕ್ ಪೊಲೀಸರಿಗೆ ದೂರು ಕೊಡಲ್ಲ ಎಂಬ ಧೈರ್ಯದ ಮೇಲೆಯೇ ಪ್ಲಾನ್ ನಂತೆ ನದೀಮ್ ನೇತೃತ್ದದಲ್ಲಿ ದರೋಡೆಕೋರರು ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿದ್ದಾರೆ.
Recommended Video
ಈ ದಾಳಿಯಲ್ಲಿ ಪೇದೆಗಳಾದ ಚೌಡೇಗೌಡ ಮತ್ತು ಅಶೋಕ್ ಪಾಲ್ಗೊಂಡಿದ್ದಾರೆ. ಇದೇ ಕಾರಣಕ್ಕೆ ಭಯ ಬಿದ್ದು ದಾಳಿ ವೇಳೆ ಅಂಗಡಿ ಮಾಲೀಕ ಸುಮ್ಮನಾಗಿದ್ದ. ಪರಿಚಿತ ಪೊಲೀಸರ ಮೂಲಕ ಪೊಲೀಸರ ದಾಳಿ ನಕಲಿ ಎಂದು ಗೊತ್ತಾದ ಬಳಿಕ ದೂರು ನೀಡಿದ್ದು, ಇದೀಗ ಅಸಲಿ ಪೊಲೀಸರ ಜತೆಗೂಡಿ ನಕಲಿ ದಾಳಿ ಮಾಡಿ ದರೋಡೆ ಮಾಡಿದ್ದ ಏಳು ಆರೋಪಿಗಳು ಅಂದರ್ ಆಗಿದ್ದಾರೆ. ಕಾನ್ಸ್ಟೇಬಲ್ ಚೌಡೇಗೌಡ ತಪ್ಪಿಸಿಕೊಂಡಿದ್ದು,ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ದರೋಡೆ ಮಾಡಿದ್ದ 9 ಲಕ್ಷ ರೂ.ಗಳಲ್ಲಿ ತಲಾ ಒಂದೊಂದು ಲಕ್ಷ ಹಂಚಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹಬ್ಬದ ಕೂಳಿಗೆ ಆಸೆ ಪಟ್ಟು, ವರ್ಷದ ಕೂಳು ಕಳೆದುಕೊಂಡಂತಾಗಿದೆ ಬಂಧಿತ ಪೊಲೀಸರದ್ದು.