ನಕಲಿ ಅಧಿಕಾರಿಗಳ ದಾಳಿ: ಕೆಜಿಗಟ್ಟಲೆ ಚಿನ್ನ ಹೊತ್ತು ಪರಾರಿಯಾಗುವಾಗ ಆದ ಎಡವಟ್ಟೇನು?
ಬೆಂಗಳೂರು, ಜನವರಿ 29: ಬಿಐಎಸ್ ಎಂದು ಹೇಳಿಕೊಂಡ ನಕಲಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಕೆಜಿಗಟ್ಟಲೆ ಚಿನ್ನ ಜಪ್ತಿ ಮಾಡಿ ಕೊಂಡೋಯ್ದ ಘಟನೆ ಬೆಂಗಳೂರಿನ ಕೆಆರ್ಪುರಂನಲ್ಲಿ ನಡೆದಿದೆ. ಜನವರಿ 27ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು ಎಂದುಕೊಂಡು ನಕಲಿ ಅಧಿಕಾರಿಗಳ ತಂಡವೊಂದು ಚಿನ್ನದ ಅಂಗಡಿಯೊಳಗೆ ನುಗ್ಗಿ ದಾಳಿ ನಡೆಸಿದ್ದಾರೆ. ಕೆ.ಆರ್ಪುರಂನಲ್ಲಿರುವ ಚಿನ್ನದ ಅಂಗಡಿಗಳನ್ನು ಆರೋಪಿಗಳು ಟಾರ್ಗೆಟ್ ಮಾಡಿದ್ದಾರೆ.

ಕೆಆರ್ ಪುರದ ಮಹಾಲಕ್ಷ್ಮೀ ಜ್ಯುವೆಲ್ಲರಿಯನ್ನೇ ಗುರಿಯಾಗಿಸಿಕೊಂಡ ನಾಲ್ಕು ಜನರಿರುವ ಆರೋಪಿಗಳ ತಂಡ ಇನೋವಾ ಕಾರಿನಲ್ಲಿ ಬಂದು ನಾವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ.
'ನಗರದ ಹಲವು ಜ್ಯುವೆಲರ್ಸ್ ಮೇಲೆ ದಾಳಿ ಆಗಿವೆ. ಅದರಲ್ಲಿ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದ ಅಕ್ರಮ ಚಿನ್ನದ ಪರಿಶೀಲನೆ' ಎಂದು ಹೇಳಿದ ಆರೋಪಿಗಳು, ದಾಳಿ ಹೆಸರಲ್ಲಿ ಸುಮಾರು 40 ನಿಮಿಷಗಳ ಕಾಲ ಅಂಗಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜ್ಯುವೆಲ್ಲರಿಯಲ್ಲಿದ್ದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಾರೆ.
1 ಕೆಜಿಗೂ ಅಧಿಕ ಚಿನ್ನವನ್ನು ಗಂಟುಕಟ್ಟಿದ ಖದೀಮರ ಗ್ಯಾಂಗ್ ಚಿನ್ನ ತೆಗೆದುಕೊಂಡು ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಚಿನ್ನ ತೆಗೆದುಕೊಂಡು ವಾಪಸ್ ಹೋಗುವ ವೇಳೆ ನಕಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದು, ಜ್ಯುವೆಲ್ಲರಿ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ.

ಇದನ್ನು ಕಂಡು ಅನುಮಾನಗೊಂಡ ಚಿನ್ನದ ಅಂಗಡಿ ಸಿಬ್ಬಂದಿ ನಕಲಿ ಅಧಿಕಾರಿಗಳ ಕಾರು ಹಿಂಬಾಲಿಸಿದ್ದಾರೆ. ತಾವು ಬಂದ ಕೆಲಸ ಯಶಸ್ವಿಯಾಗಿ ಆಯಿತು ಎಂದು ಖುಷಿಯಲ್ಲಿ ತೆರೆಳುತ್ತಿದ್ದ ಆರೋಪಿಗಳು ಚಿನ್ನದ ಅಂಗಡಿ ಸಿಬ್ಬಂದಿ ಫಾಲೋ ಮಾಡುವುದನ್ನು ನೋಡಿ ಹೌಹಾರಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಮನಬಂದಂತೆ ಕಾರು ಚಲಾಯಿಸಿದ್ದಾರೆ. ಈ ವೇಳೆ ಬೈಕ್ಗಳ ನಡುವೆ ಸರಣಿ ಅಪಘಾತ ಕೂಡ ನಡೆದಿದೆ.
ಇತ್ತ ಚಿನ್ನದ ಅಂಗಡಿ ಸಿಬ್ಬಂದಿ ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕೆ ಆರ್ ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ಸಬ್ ಇನ್ಸ್ಪೆಕ್ಟರ್ಗಳು ಟಿಸಿ ಪಾಳ್ಯ ಜಂಕ್ಷನ್ಗೆ ದೌಡಾಯಿಸಿದ್ದು, ಮಾರ್ಗ ಮಧ್ಯೆಯೇ ನಕಲಿ ಅಧಿಕಾರಿಗಳ ತಂಡವನ್ನು ಹಿಡಿದು ಬಂಧಿಸಿದ್ದಾರೆ.
ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್ ಹಾಗೂ ಸಂದೀಪ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳ ವಿರುದ್ಧ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಬಳಿಯಿದ್ದ ಚಿನ್ನ ಜಪ್ತಿ ಮಾಡಿದ್ದಾರೆ.












Click it and Unblock the Notifications