Fact Check: ರಾತ್ರಿ 1- 1.30ಕ್ಕೆ ಕೊತ್ತಂಬರಿ ಸೊಪ್ಪು ತರಲು ಯಾರೂ ಮನೆಯಿಂದ ಹೋಗಲ್ವಾ?

ಬೆಂಗಳೂರು, ಆಗಸ್ಟ್ 17: ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ದಿನಕ್ಕೆ ಒಂದು ರೀತಿ ರೂಪ ಪಡೆಯುತ್ತಿದೆ. ಟ್ರೋಲ್, ಆಕ್ಷೇಪಗಳು, ಸಿಟ್ಟು ಎಲ್ಲವೂ ವಾಟ್ಸಾಪ್, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಈಗ ಬಹಳ ಮುಖ್ಯವಾಗಿ ರಾತ್ರಿ 1 ಗಂಟೆಗೆ ಆರೋಪಿಯೊಬ್ಬ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದಂತೆ ಎಂಬುದು ಬಹಳ ಜೋರಾಗಿ ಟ್ರೋಲ್ ಆಗುತ್ತಿದೆ.

Recommended Video

      Lakshmi Hebbalkar ಪುತ್ರನ ನಿಶ್ಚಿತಾರ್ಥಕ್ಕೆ ಎಲ್ಲಾ ಪಕ್ಷದವರಿಗೂ ಆಮಂತ್ರಣ | Oneindia Kannada

      ಮಹಿಳೆಯೊಬ್ಬರು ಖಾಸಗಿ ವಾಹಿನಿಯ ವರದಿಗಾರರಿಗೆ ತನ್ನ ಅಣ್ಣನ ಬಂಧನದ ಬಗ್ಗೆ ಪ್ರತಿಕ್ರಿಯಿಸುತ್ತಾ, ನನ್ನ ಅಣ್ಣ ಕೊತ್ತಮಿರಿ ಸೊಪ್ಪು ತರಲು ಹೋಗಿದ್ದು. ಅದನ್ನು ತಂದು ಅಂಗಡಿಗಳಿಗೆ ಹಾಕುವುದು ಅವರ ಕೆಲಸ...ಎಂದಿದ್ದಾರೆ. ಆ ವಿಡಿಯೋದಲ್ಲಿ ಅವರು ಕೊನೆ ಮಾತು ಹೇಳಿ, ಪೂರ್ತಿ ಮಾಡುವಷ್ಟರಲ್ಲಿ ನಾನಾ ಬಗೆಯ ಟ್ರೋಲ್ ವಿಡಿಯೋ, ಮೀಮ್ಸ್ ಗಳು ಬರುತ್ತವೆ.

      ಹೌದಾ, ರಾತ್ರಿ 1 ಗಂಟೆಗೆ ಯಾರೂ ಕೊತ್ತಮಿರಿ ಸೊಪ್ಪು ತರಲು ಮಾರ್ಕೆಟ್ ಗೆ ಹೋಗುವುದೇ ಇಲ್ಲವಾ? ತಮ್ಮ ಮನೆಗೆಂದು ಕೊತ್ತಮಿರಿ ಸೊಪ್ಪು ತರಲು ಆ ವ್ಯಕ್ತಿ ಹೋಗಿದ್ದ ಎಂದು ಮಹಿಳೆ ಹೇಳಿದ್ದರೆ, ಆಕೆಯ ಮಾತನ್ನು ಸಮರ್ಥನೆ ಎಂದು ಸಂಪೂರ್ಣವಾಗಿ ತಳ್ಳಿ ಹಾಕಬಹುದಿತ್ತು.

      Fact Check: Is Anybody Buy Coriander Leaves At 1 AM?

      ಮಾರ್ಕೆಟ್ ಗೆ ಸೊಪ್ಪು- ತರಕಾರಿ ಎಷ್ಟು ಹೊತ್ತಿಗೆ ಬರುತ್ತದೆ?

      ಆದರೆ, ತನ್ನ ಅಣ್ಣ ಮಾರ್ಕೆಟ್ ನಲ್ಲಿ ಬರುವ ಕೊತ್ತಮಿರಿಯನ್ನು ತಂದು ಅಂಗಡಿಗಳಿಗೆ ಹಾಕುತ್ತಾರೆ ಎಂಬ ಮಾತನ್ನು ಆಕೆ ತನಗೆ ಬರುವಷ್ಟು ಕನ್ನಡದಲ್ಲಿ ಹೇಳುತ್ತಿದ್ದಾರೆ. ಅಂದರೆ ಅಷ್ಟು ಹೊತ್ತಿನಲ್ಲಿ ಮಾರುಕಟ್ಟೆಗೆ ಕೊತ್ತಂಬರಿ ಬರುವುದು ಹೌದಾ ಎಂಬ ಪ್ರಶ್ನೆಯನ್ನು ಪರೀಕ್ಷಿಸಿಕೊಂಡರೆ, ಉತ್ತರ ಹೌದು ಎಂದು ಸಿಗುತ್ತದೆ.

      ತರಕಾರಿ, ಸೊಪ್ಪು ಮತ್ತೊಂದು ಮಾರ್ಕೆಟ್ ಗೆ ಬರುವುದು ರಾತ್ರಿ ಹನ್ನೊಂದು ಗಂಟೆಯ ಮೇಲೆ. ಬೆಳಗ್ಗೆ ನಾಲ್ಕು- ಐದು ಗಂಟೆಯ ಮೇಲೆ ಹರಾಜು ಹಾಕಲು ಆರಂಭವಾಗುತ್ತದೆ. ಮಧ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ತಳ್ಳು ಗಾಡಿಯ ಮೇಲೆ ತರಕಾರಿ, ಸೊಪ್ಪುಗಳನ್ನು ತರುವವರನ್ನು ಬನಶಂಕರಿ ಬಳಿ ಬೇಕಾದಷ್ಟು ಜನರನ್ನು ನೋಡಿದ್ದೇನೆ ಎನ್ನುತ್ತಾರೆ ಬಿಪಿಒ ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿ, ಸದ್ಯಕ್ಕೆ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಕುಮಾರ್.

      ದೊಡ್ಡಬಳ್ಳಾಪುರದಿಂದ ರಾತ್ರಿ ಎಂಟು ಗಂಟೆಗೆ ತರಕಾರಿ, ಸೊಪ್ಪುಗಳು ಬೆಂಗಳೂರಿಗೆ ಹೊರಡುತ್ತವೆ. ರಾತ್ರಿ ಹನ್ನೊಂದು ಗಂಟೆಗೆ ಅಲ್ಲಿಗೆ ತಲುಪುತ್ತವೆ. ಅಷ್ಟು ಹೊತ್ತಿನಲ್ಲೇ ಹರಾಜು, ಮಾರಾಟ ನಡೆಯಬಹುದು ಅಂತ ನನಗೆ ಅನಿಸಿಲ್ಲ. ಬೆಳಗ್ಗೆ ನಾಲ್ಕು- ಐದು ಗಂಟೆ ಮೇಲೆ ಹರಾಜು ಹಾಕಬಹುದು. ಆದರೆ ಇದು ಹೀಗೇ ಎಂದು ಹೇಳುವುದಕ್ಕೆ ನಾನು ಅಲ್ಲಿಗೆ ಹೋಗಿಲ್ಲ ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು ದೊಡ್ಡಬಳ್ಳಾಪುರದ ವಿಜಯ್ ಕುಮಾರ್.

      ಹಗಲು ಹೊತ್ತಿನಲ್ಲಿ ಅಂದರೆ ಬೆಳಗ್ಗೆ ಸೊಪ್ಪನ್ನು ಮಾರುಕಟ್ಟೆಗೆ ತಂದರೆ ಹರಾಜು ಮಧ್ಯಾಹ್ನ ಅಥವಾ ಸಂಜೆ ನಡೆಯಬೇಕಾಗುತ್ತದೆ. ಬಿಸಿಲಿನ ತಾಪಕ್ಕೆ ಸೊಪ್ಪು ಬಾಡಿಹೋಗಿ, ರೈತರಿಗೆ ಬೆಲೆ ಸಿಗುವುದಿಲ್ಲ. ಸಂಜೆಯೇ ಕೊಯ್ಲು ಮಾಡಿ, ರಾತ್ರಿಯ ಹೊತ್ತು ಸಾಗಾಟ ಮಾಡುವ ಕ್ರಮವನ್ನು ರೈತರು ರೂಢಿಸಿಕೊಂಡಿದ್ದಾರೆ. ಇದು ಬಹುಕಾಲದಿಂದ ಚಾಲ್ತಿಯಲ್ಲಿರುವ ತೀರಾ ಸಹಜ ವಿದ್ಯಮಾನ ಎನ್ನುತ್ತಾರೆ ರೈತರಾದ ಪದ್ಮರಾಜು.

      ಗೊತ್ತಿಲ್ಲದ ವಿಚಾರದ ಬಗ್ಗೆ ಏನೇನೋ ಮಾತನಾಡಬಾರದು

      ಸೋಷಿಯಲ್ ಮೀಡಿಯಾ, ವಾಟ್ಸ್ ಆಪ್ ಗಳಲ್ಲಿ ನನಗೂ ಈ ಟ್ರೋಲ್ ಬಂದಿತ್ತು. ನಾನೇ ಹೋಗಿ ರಾತ್ರಿ ಮೂರು ಗಂಟೆಗೆ ಮಾರುಕಟ್ಟೆಯಿಂದ ತರಕಾರಿಗಳನ್ನು ತಂದಿದ್ದೀನಿ. ಹಾಗೆ ತರುವಾಗ ಯಾರು ಮನೆ ಎಷ್ಟು ದೂರ ಇದೆಯೋ ಅದರ ಆಧಾರದಲ್ಲಿ ಅಷ್ಟು ಬೇಗ ಮನೆಯಿಂದ ಹೊರಡಬೇಕಾಗುತ್ತದೆ. ಮಾರ್ಕೆಟ್ ನಲ್ಲಿ ತರಕಾರಿ, ಸೊಪ್ಪು ಮತ್ತೊಂದು ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಬಗ್ಗೆ ಒಂದು ದಿನಕ್ಕೂ ನೋಡದ, ಗೊತ್ತಿರದವರಷ್ಟೇ ಹೀಗೆ ಮಾತನಾಡೋಕೆ ಸಾಧ್ಯ ಎಂದರು ಅಡುಗೆ ಕಾಂಟ್ರ್ಯಾಕ್ಟ್ ಮಾಡುವ ರಂಗಾಚಾರ್.

      ಈಗಿನ ಘಟನೆಯಿದೆಯಲ್ಲ ಬಹಳ ಸೂಕ್ಷ್ಮವಾದದ್ದು. ಆ ಮಹಿಳೆ ಹೇಳಿದ್ದು ನಾನು ಸಹ ನೋಡಿದ್ದೀನಿ. ಆ ವ್ಯಕ್ತಿ ಕೊತ್ತಂಬರಿ ಸೊಪ್ಪು ತರಲು ಹೋಗಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ತೆಗೆದುಹಾಕುವುದಕ್ಕೆ ಸಾಧ್ಯವಿಲ್ಲ. ಅದೇ ಸಂದರ್ಭದಲ್ಲಿ ಆತ ಅಮಾಯಕ ಅಂತ ತೀರ್ಪು ನೀಡುವುದು ಸರಿಯಲ್ಲ. ಆದರೆ ಈಗಿನ ಬೆಳವಣಿಗೆ ಇದೆಯಲ್ಲಾ ಅದು ಯಾವುದೇ ಸಮಾಜಕ್ಕೂ ಒಳ್ಳೆ ಸಂದೇಶ ಅಲ್ಲ ಎಂದು ಪತ್ರಕರ್ತ ರಘು ಅಭಿಪ್ರಾಯ ಪಡುತ್ತಾರೆ.

      ಹೇಗೆ ಒಂದು ಸಮುದಾಯವನ್ನು ಓಲೈಕೆ ಮಾಡುವುದು ತಪ್ಪೋ ಅದೇ ರೀತಿ ಒಂದು ಸಮುದಾಯವನ್ನು ವಿಚಾರಣೆಯೇ ಮಾಡದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಕೂಡ ತಪ್ಪು. ಸೂಕ್ತ ತನಿಖೆ, ವಿಚಾರಣೆ ಆಗದೆ ತೀರ್ಪು ನೀಡುವುದು ಸರಿಯಲ್ಲ ಎನ್ನುತ್ತಾರೆ.

      ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗುತ್ತಾರಾ ಎಂದು ಯಾರಿಗಾದರೂ ತಿಳಿಯಬೇಕು ಅಂದರೆ, ತಳ್ಳುಗಾಡಿಯವರನ್ನು, ತಮ್ಮ ಬೀದಿ ಅಥವಾ ಬಡಾವಣೆಯ ತರಕಾರಿ ಅಂಗಡಿಯವರನ್ನು, ಕೊನೆಗೆ ಮಾರ್ಕೆಟ್ ನಲ್ಲಿ ಹೋಗಿ ತಿಳಿದುಕೊಳ್ಳುವುದು ಕಷ್ಟದ ಸಂಗತಿ ಏನಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+