ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಬಫರ್ 18 ಕಿಮೀ ಸರ್ವಿಸ್ ರಸ್ತೆ ಯೋಜನೆ: ಭೂ ಸಮೀಕ್ಷೆ ಕಾರ್ಯಕ್ಕೆ ವೇಗ
ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ರವರ ಅಧ್ಯಕ್ಷತೆಯಲ್ಲಿ ಬೆಳ್ಳಂದೂರು ವೇಸ್ಟ್ ವಿಯರ್/ಔಟ್ಲೆಟ್ನಿಂದ ಓಲ್ಡ್ ಏರ್ಪೋರ್ಟ್ ರಸ್ತೆ ಸಮೀಪದ ವರ್ಜೀನಿಯಾ ಮಾಲ್ ವರೆಗಿನ ಪ್ರಸ್ತಾಪಿತ ರಾಜಕಾಲುವೆ/ಬಫರ್ ವಲಯ ಸಂರಕ್ಷಣೆ ಅಭಿವೃದ್ಧಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಯೋಜನೆಗೆ ವೇಗ ದೊರೆತಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ, ಮೂಲಸೌಕರ್ಯ ಅಭಿವೃದ್ಧಿ, ತಾಂತ್ರಿಕ ಅನುಷ್ಠಾನದ ಕುರಿತು ಪರಿಶೀಲನಾ ಸಭೆಯು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ನೇತೃತ್ವದಲ್ಲಿ ಬುಧವಾರ ನಡೆಯಿತು. ಬೆಳ್ಳಂದೂರು ಬಫರ್ ಸರ್ವಿಸ್ ರಸ್ತೆಗೆ ಅಗತ್ಯವಿರುವ ಭೂ ಸಮೀಕ್ಷೆ ಮತ್ತು ಆಸ್ತಿ ಗುರುತಿಸುವಿಕೆ ಕಾರ್ಯವನ್ನು ಚುರುಕುಗೊಳಿಸುವಂತೆ ಅವರು ಸೂಚಿಸಿದರು.

ಡಿಪಿಆರ್, ಸಂಪರ್ಕ ಮೂಲಸೌಕರ್ಯಕ್ಕೆ ಸೂಚನೆ
ಪ್ರಸ್ತಾಪಿತ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಪರಿಶೀಲಿಸಿ ಬಫರ್ ಸರ್ವಿಸ್ ರಸ್ತೆಯನ್ನು ಹೊರ ವರ್ತುಲ ರಸ್ತೆಯೊಂದಿಗೆ ಸಂಪರ್ಕಿಸುವ ಕುರಿತು, ಯೋಜನಾ ಮಾರ್ಗದಲ್ಲಿ ಹಾದು ಹೋಗುವ ರೈಲು ಮಾರ್ಗಗಳಲ್ಲಿ ರಸ್ತೆ ಸಂಪರ್ಕದ ತಾಂತ್ರಿಕ ನಿರ್ವಹಣೆ ಬಗ್ಗೆ ಚರ್ಚೆಗಳು ನಡೆದಿದ್ದು, ಮಹತ್ವದ ತೀರ್ಮಾನಕ್ಕೆ ಬರಲಾಗಿದೆ.
ಇಲ್ಲಿನ ರೈಲ್ವೆ ಓವರ್ ಬ್ರಿಡ್ಜ್ ಮತ್ತು ರೈಲ್ವೆ ಅಂಡರ್ ಬ್ರಿಡ್ಜ್ ಸೇರಿದಂತೆ ಕೆಲವು ಪ್ರಮುಖ ಮೂಲಸೌಕರ್ಯ ಅಂಶಗಳು ಡಿಪಿಆರ್ನಲ್ಲಿ ಸೇರಿಸುವ ಮೂಲಕ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲಾ ತಾಂತ್ರಿಕ ಅಂಶಗಳನ್ನು ಪರಿಗಣಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶಿಸಿದರು.
ಯೋಜನೆಗೆ ಬೇಕಾದ ಭೂ ಸಮೀಕ್ಷೆ, ಆಸ್ತಿ ಗುರುತಿಸಿ
ಬಫರ್ ರಸ್ತೆಯ ಯೋಜನೆ ವ್ಯಾಪ್ತಿಯು 18 ಕಿಲೋಮೀಟರ್ ಉದ್ದದ್ದಾಗಿದೆ. ಈ ಪೈಕಿ 2ಕಿ.ಮೀ ವ್ಯಾಪ್ತಿಯಲ್ಲಿನ ಮಾರ್ಗದಲ್ಲಿ ಭೂ ಸ್ವಾಧೀನಕ್ಕೆ ಅಗತ್ಯವಿರುವ ಸುಮಾರು 80 ಆಸ್ತಿಗಳನ್ನು ಈಗಾಗಲೇ ಗುರುತಿಸಲಾಗಿರುತ್ತದೆ. ಯೋಜನೆಗೆ ಅಗತ್ಯವಿರುವ ಭೂಮಿಯ ಶೇಕಡಾ 50ರಷ್ಟು ಸಮೀಕ್ಷೆ ಮತ್ತು ದಾಖಲೆ ಅಂತಿಮೀಕರಣ ಕಾರ್ಯ ಮಾತ್ರ ಪೂರ್ಣಗೊಂಡಿದ್ದು, ಭೂ ಮಾಪನ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ 15 ದಿನಗಳೊಳಗೆ ಉಳಿದ ದಾಖಲೆಗಳನ್ನು ಸಂಗ್ರಹಿಸುವ ಮೂಲಕ ಭೂ ಸಮೀಕ್ಷೆ ಮತ್ತು ಆಸ್ತಿ ಗುರುತಿಸುವಿಕೆ ಕಾರ್ಯವನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ಸಂರಕ್ಷಣೆ ಮತ್ತು ಪ್ರವಾಹ ನಿಯಂತ್ರಣ
ಪ್ರಸ್ತಾಪಿತ ಬಫರ್ ರಸ್ತೆಯುದ್ದಕ್ಕೂ ಇರುವ ರಾಜಕಾಲುವೆ ಹಾಗೂ ಬಫರ್ ವಲಯ ಸಂರಕ್ಷಣೆ ಕುರಿತು ಸಭೆಯಲ್ಲಿ ವಿಶೇಷ ಚರ್ಚೆ ನಡೆಸಲಾಯಿತು. ಕೆಲವು ಭಾಗಗಳಲ್ಲಿ ಮಳೆ ನೀರು ಕಾಲುವೆಯ ಅಗಲ ಕಿರಿದಾಗಿದ್ದು, ಭಾರೀ ಮಳೆಯ ಸಂದರ್ಭದಲ್ಲಿ ನೀರಿನ ಒಳ ಹರಿವಿಗೆ ಇದು ಅಡ್ಡಿಯಾಗಿರುತ್ತದೆ. ನಗರ ಪ್ರವಾಹ ತಡೆಗಟ್ಟುವ ಉದ್ದೇಶದಿಂದ ಕೆಲವು ಪ್ರಮುಖ ಭಾಗಗಳಲ್ಲಿ ಕಾಲುವೆಯ ಅಗಲವನ್ನು 30 ಮೀಟರ್ವರೆಗೆ ವಿಸ್ತರಿಸಲು ಇರುವ ಕಾರ್ಯ ಸಾಧ್ಯತೆ ಇನ್ನಷ್ಟು ಮಾಹಿತಿ ಪಡೆಯಲಾಗುವುದು.
ಇನ್ನೂ ಸ್ವಾಭಾವಿಕ ಮಳೆ ನೀರು ಹರಿವಿನ ಮಾರ್ಗಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ. ವೈಜ್ಞಾನಿಕ ರೀತಿಯಲ್ಲಿ ಮಳೆ ನೀರು ಕಾಲುವೆಗಳ ನಿರ್ವಹಣೆ ಮತ್ತು ಸಂರಕ್ಷಣೆಯ ಆದ್ಯತೆಯೊಂದಿಗೆ ಯೋಜನೆಯನ್ನು ರೂಪಿಸಬೇಕು. ನಿಯಮಾವಳಿಗಳ ಪ್ರಕಾರ ಕಡ್ಡಾಯ ಸೆಟ್ಬ್ಯಾಕ್ ಅಂತರವನ್ನು ಕಾಲುವೆಯ ಅಂಚಿನಿಂದ ಪರಿಗಣಿಸದೇ ಬಫರ್ ವಲಯದ ಅಂತ್ಯದಿಂದ ಪರಿಗಣಿಸಬೇಕಾಗಿದೆ. ಸದರಿ ಯೋಜನೆಯುದ್ದಕ್ಕೂ ಇರುವ ರಾಜಕಾಲುವೆಗಳಿಗೆ ಹೊಂದಿಕೊಂಡಿರುವ ಅಭಿವೃದ್ಧಿ ಯೋಜನೆಗಳಲ್ಲಿನ ಅನುಮೋದಿತ ಯೋಜನಾ ನಕ್ಷೆಗಳು, ಸ್ಥಳ ಪರಿಶೀಲನಾ ವರದಿಗಳು ಹಾಗೂ ಸೂಪರ್ ಇಂಪೋಸ್ಡ್ ನಕ್ಷೆಯನ್ನು ಪರಿಶೀಲಿಸಿ ಯಾವುದೇ ಕಟ್ಟಡ ಅಥವಾ ನಿರ್ಮಾಣದಿಂದ ಬಫರ್ ವಲಯ ಮತ್ತು ಸೆಟ್ಬ್ಯಾಕ್ ನಿಯಮಗಳ ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲಿಸಿ ಸಮಗ್ರ ವರದಿ ನಿಡುವಂತೆ ಅವರು ಹೇಳಿದರು.
ಭೂ ವಿವಾದಗಳು ಮತ್ತು ಕಾನೂನು ಸವಾಲುಗಳು
ಯೋಜನೆಯ ಕೆಲವು ಭಾಗಗಳಲ್ಲಿ ಭೂಮಾಲೀಕರು ಬಫರ್ ವಲಯ ಘೋಷಣೆಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ವಿಳಂಬವಾಗಲು ಪ್ರಮುಖ ಕಾರಣವಾಗುತ್ತಿವೆ. ಕಾನೂನು ಮತ್ತು ಆಡಳಿತಾತ್ಮಕ ಅಡೆತಡೆಗಳಿಂದ ಯೋಜನೆ ವಿಳಂಬವಾಗದಂತೆ ತಡೆಯಲು ಯಾವುದೇ ವಿವಾದಗಳಿಲ್ಲದ ಹಾಗೂ ಭೂ ಲಭ್ಯತೆ ಸ್ಪಷ್ಟವಾಗಿರುವ ಪ್ರದೇಶಗಳಲ್ಲಿ ಮೊದಲಿಗೆ ಕಾಮಗಾರಿ ಆರಂಭಿಸುವುದರಿಂದ ಯೋಜನೆಗೆ ವೇಗ ಸಿಗುತ್ತದೆ. ಅಲ್ಲದೇ ಮುಂದಿನ ಹಂತದಲ್ಲಿ ಸಂಕೀರ್ಣ ಸಮಸ್ಯೆಗಳ ಪರಿಹಾರಕ್ಕೂ ಸಹಕಾರಿಯಾಗಲಿದೆ ಎಂದರು.
ಯೋಜನೆ ಜಾರಿ ಆಗುವ ಸ್ಥಳಗಳಲ್ಲಿ ತಳಮಟ್ಟದ ವಾಸ್ತವ ಪರಿಸ್ಥಿತಿ, ಬಫರ್ ವಲಯ ಗುರುತು, ಅತಿಕ್ರಮಣ ಮತ್ತು ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸಲು ಬಿ ಸ್ಮೈಲ್, ಎಂಜಿನಿಯರಿಂಗ್, ಕಂದಾಯ, ಭೂ ಸ್ವಾಧೀನ ಮತ್ತು ಟಿಡಿಆರ್ ವಿಭಾಗಗಳ ಅಧಿಕಾರಿಗಳೊಂದಿಗೆ ಜಂಟಿ ಸ್ಥಳ ವೀಕ್ಷಿಸುವಂತೆ ತಾಕೀತು ಮಾಡಿದರು.
ಸುಸ್ಥಿರ ನಗರಾಭಿವೃದ್ಧಿಗೆ ಪಾಲಿಕೆ ಬದ್ಧ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಾಭಾವಿಕ ರಾಜಕಾಲುವೆಗಳ ಸಂರಕ್ಷಣೆ, ವೈಜ್ಞಾನಿಕ ಮಳೆ ನೀರು ನಿರ್ವಹಣೆ, ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಸುಸ್ಥಿರ ನಗರ ಮೂಲಸೌಕರ್ಯ ಅಭಿವೃದ್ಧಿಗೆ ನಗರ ಪಾಲಿಕೆ ಸಂಪೂರ್ಣ ಬದ್ಧವಾಗಿದೆ. ಈ ಯೋಜನೆಯಿಂದ ಬೆಳ್ಳಂದೂರು-ಓಲ್ಡ್ ಏರ್ಪೋರ್ಟ್ ರಸ್ತೆ ಮಾರ್ಗದಲ್ಲಿ ಪ್ರವಾಹ ನಿಯಂತ್ರಣ ಸಾಮರ್ಥ್ಯ ಹೆಚ್ಚಳವಾಗುವುದರೊಂದಿಗೆ ರಾಜಕಾಲುವೆ ಬಫರ್ ವಲಯಗಳ ರಕ್ಷಣೆ ಹಾಗೂ ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ಸಿಗಲಿದೆ ಎಂದು ಅವರು ತಿಳಿಸಿದರು.














Click it and Unblock the Notifications