ಜೀವ ವೈವಿಧ್ಯ ತಾಣದ ಭೂಮಿ ಪರಭಾರೆ; ಬೆಂಗಳೂರು ವಿವಿ ವಿವಾದ
ಬೆಂಗಳೂರು, ಅಕ್ಟೋಬರ್ 02 : ಬೆಂಗಳೂರು ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದೆ. ಜೀವ ವೈವಿಧ್ಯ ತಾಣವಾದ ವಿಶ್ವವಿದ್ಯಾಲಯದ ಕ್ಯಾಂಪಸ್ನ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ಇದಕ್ಕೆ ಕಾರಣವಾಗಿದೆ. ಪರಿಸರವಾದಿಗಳು, ಪರಿಸರ ತಜ್ಞರು, ವಾಯು ವಿಹಾರಿಗಳು ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ ಉತ್ತಮ ಪರಿಸರ ಇರುವ ಭೂಮಿ ಹೊಂದಿರುವ ಪ್ರದೇಶಗಳಲ್ಲಿ ಜ್ಞಾನಭಾರತಿ ಕ್ಯಾಂಪಸ್ ಸಹ ಒಂದು. ಕರ್ನಾಟಕ ಸರ್ಕಾರ ಜ್ಞಾನಭಾರತಿ ಆವರಣವನ್ನು ಜೀವ ವೈವಿಧ್ಯ ಅರಣ್ಯ ಭೂಮಿ ಎಂದು 2010ರಲ್ಲಿ ದೃಢೀಕರಿಸಿದೆ. ಈ ಭೂಮಿಯನ್ನು ಯಾವುದೇ ಸಂಸ್ಥೆಗೆ ಹಸ್ತಾಂತರ ಮಾಡಬಾರದು ಎಂದು ಉನ್ನತ ಶಿಕ್ಷಣ ಇಲಾಖೆಯ ಸೂಚನೆ ಇದೆ.
2017ರಲ್ಲಿ ನಡೆದ ಬೆಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿಯೂ ಜ್ಞಾನಭಾರತಿ ಕ್ಯಾಂಪಸ್ ಭೂಮಿಯನ್ನು ಯಾವುದೇ ಸಂಸ್ಥೆಗೆ ಪರಭಾರೆ ಮಾಡುವುದಿಲ್ಲ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈಗ ಸುಮಾರು 32 ಎಕರೆ ಭೂಮಿಯನ್ನು ಬೇರೆ ಬೇರೆ ಸಂಸ್ಥೆಗಳಿಗೆ ನೀಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.

ಪರಿಸರವಾದಿಗಳು, ಪರಿಸರ ತಜ್ಞರು, ವಾಯುವಿಹಾರಿಗಳು ಬೆಂಗಳೂರು ವಿಶ್ವವಿದ್ಯಾಲಯದ ತೀರ್ಮಾನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಎನ್ವಿರಾನ್ಮೆಂಟಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಭೂಮಿಯನ್ನು ಯಾವುದೇ ಸಂಸ್ಥೆಗೆ ಪರಭಾರೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಭೂಮಿ ಪರಭಾರೆ ವಿವಾದ : ಬೆಂಗಳೂರು ವಿಶ್ವವಿದ್ಯಾಲಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ನಿಯಮಗಳನ್ನು ಉಲ್ಲಂಘನೆ ಮಾಡಿ ಯೋಗ ವಿಜ್ಞಾನ ವಿಶ್ವವಿದ್ಯಾಲಯಕ್ಕೆ 15 ಎಕರೆ, ಕಲಬುರಗಿ ಸೆಂಟ್ರಲ್ ವಿಶ್ವವಿದ್ಯಾಲಯಕ್ಕೆ 15 ಎಕರೆ ಮತ್ತು ಸಿಬಿಎಸ್ಸಿಯ ದಕ್ಷಿಣ ಭಾರತದ ಶಾಖೆಗಾಗಿ 2 ಎಕರೆ ಜಮೀನು ನೀಡಿದೆ.
"ಕಳೆದ 30 ವರ್ಷಗಳಿಂದ ಸಾರ್ವಜನಿಕರು, ವಾಯುವಿಹಾರಿಗಳು, ಪರಿಸರ ತಜ್ಞರು, ಎನ್ಎಸ್ಎಸ್ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ದಟ್ಟ ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ವಿಶ್ವವಿದ್ಯಾಲಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮೂರು ಸಂಸ್ಥೆಗಳಿಗೆ ಸೇರಿ ಸುಮಾರು32 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿದೆ" ಎಂದು ಎನ್ವಿರಾನ್ಮೆಂಟಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ. ಡಿ. ಪರಮೇಶ್ ನಾಯ್ಕ್ ಆರೋಪ ಮಾಡಿದ್ದಾರೆ.

ಡಾಕ್ಟರೇಟ್ ವಾಪಸ್ ನೀಡಲು ಪತ್ರ : ಬೆಂಗಳೂರು ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಡಾ. ಎ. ಎನ್. ಯಲ್ಲಪ್ಪ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಯ ಜೀವ ವೈವಿಧ್ಯ ತಾಣದ ಸಲಹೆಗಾರರಾದ ಯಲ್ಲಪ್ಪ ರೆಡ್ಡಿ ಅವರು ವಿಶ್ವವಿದ್ಯಾಲಯ ತಮಗೆ ನೀಡಿದ ಗೌರವ ಡಾಕ್ಟರೇಟ್ ವಾಪಸ್ ನೀಡಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಕಾಲಾವಕಾಶ ನೀಡುವಂತೆ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದಾರೆ.
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಡಾ. ಎ. ಎನ್. ಯಲ್ಲಪ್ಪ ರೆಡ್ಡಿ, "ನಾನು ಜೀವ ವೈವಿಧ್ಯದ ತಾಣದ ಸಲಹೆಗಾರರಾಗಿದ್ದೆ. ಈಗಲೂ ಸಹ ವಿವಿಯ ದಾಖಲೆಗಳ ಪ್ರಕಾರ ನಾನು ಸಲಹೆಗಾರ. ನನಗೆ ಡಾಕ್ಟರೇಟ್ ಕೊಟ್ಟಿದ್ದು, ವಿವಿಯ ಆವರಣದಲ್ಲಿ ಜೀವ ವೈವಿದ್ಯದ ಪಾರ್ಕ್ ಮಾಡಿದ್ದೇನೆ" ಎಂಬ ಕಾರಣಕ್ಕೆ ಎಂದು ಹೇಳಿದರು.
"ಅವರು ಈಗ ಜೀವ ವೈವಿಧ್ಯದ ತಾಣವನ್ನು ನಾಶ ಮಾಡಲು ಹೊರಟಿದ್ದಾರೆ. 25 ವರ್ಷಗಳಿಂದ ಬೆಳೆಸಿದ ಮರಗಳನ್ನು ಕಡಿದು ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದಾರೆ. ನಾಳೆ ಯಾರಾದರೂ ಜೀವ ವೈವಿಧ್ಯದ ತಾಣ ಮಾಡಿದ್ದಕ್ಕೆ ನಿಮಗೆ ಡಾಕ್ಟರೇಟ್ ಕೊಟ್ಟಿದ್ದಾರೆ. ಈಗ ಅದನ್ನು ನಾಶ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರೆ ನನಗೆ ನಾಚಿಕೆ ಆಗುತ್ತದೆ" ಎಂದು ಯಲ್ಲಪ್ಪ ರೆಡ್ಡಿ ಹೇಳಿದರು.
"25 ವರ್ಷಗಳ ಕಾಲ ಯೋಜನೆ ಮಾಡಿ, ರಾತ್ರಿ-ಹಗಲು ಕಷ್ಟಪಟ್ಟು, ಜನರಿಂದ ದುಡ್ಡು ಹಾಕಿಸಿ, ವಿದ್ಯಾರ್ಥಿಗಳ ಸಹಾಯದಿಂದ ಜೀವ ವೈವಿಧ್ಯದ ತಾಣ ನಿರ್ಮಾಣ ಮಾಡಲಾಗಿದೆ. ಈಗ ಇರುವವರು ಅದನ್ನು ನಾಶ ಮಾಡಲು ಹೊರಟಿದ್ದಾರೆ. ಈಗಲೂ ನಾನು ಸಲಹೆಗಾರ. ಆದರೆ, ನಮ್ಮನ್ನು ಕೇಳಿಲ್ಲ" ಎಂದು ಯಲ್ಲಪ್ಪ ರೆಡ್ಡಿ ತಿಳಿಸಿದರು.
ವಿಶ್ವವಿದ್ಯಾಲಯ ಹೇಳುವುದೇನು? : ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಇದು ವಿಶ್ವವಿದ್ಯಾಲಯದ ಏಕಪಕ್ಷೀಯ ನಿರ್ಧಾರವಲ್ಲ. ಸರ್ಕಾರದ ತೀರ್ಮಾನದ ಅನ್ವಯ ಭೂಮಿಯನ್ನು ಯೋಗ ವಿಜ್ಞಾನ ವಿಶ್ವವಿದ್ಯಾಲಯ ಸೇರಿದಂತೆ ಇತರ ಸಂಸ್ಥೆಗಳಿಗೆ ನೀಡಲಾಗಿದೆ" ಎಂದು ಹೇಳಿದ್ದಾರೆ.
"ಯುಜಿಸಿ ನಮ್ಮ ವಿವಿ ಆವರಣದಲ್ಲಿ ಯೋಗ ವಿಜ್ಞಾನ ವಿಶ್ವವಿದ್ಯಾಲಯ ಆರಂಭ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಯುಜಿಸಿ ಮನವಿ ಮೇರೆಗೆ ರಾಜ್ಯ ಸರ್ಕಾರದ ನಿರ್ಧಾರದಂತೆ 30 ವರ್ಷಗಳ ಕಾಲ ಭೋಗ್ಯಕ್ಕೆ ನೀಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ" ಎಂದು ಕುಲಪತಿಗಳು ಸ್ಪಷ್ಟನೆ ನೀಡಿದ್ದಾರೆ.
ಎನ್ವಿರಾನ್ಮೆಂಟಲ್ ಸೊಸೈಟಿ ಆಫ್ ಇಂಡಿಯಾ ಭೂಮಿ ಪರಭಾರೆ ಮಾಡಿರುವ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ವಿವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಕೇಂದ್ರ ಪರಿಸರ ಖಾತೆ, ಪ್ರಧಾನಿ, ರಾಷ್ಟ್ರಪತಿಗಳಿಗೂ ಈ ಕುರಿತು ದೂರು ನೀಡಿದೆ. ಭೂಮಿ ಪರಭಾರೆ ರದ್ದುಗೊಂಡು ಬೆಂಗಳೂರು ವಿಶ್ವವಿದ್ಯಾಲಯದ ಜೀವ ವೈವಿಧ್ಯದ ತಾಣ ಹಾಗೆಯೇ ಉಳಿಯಲಿದೆಯೇ? ಕಾದು ನೋಡಬೇಕು.












Click it and Unblock the Notifications