ಬೆಂಗಳೂರು: ಏರ್ಪೋರ್ಟ್ಗೆ ಬಾಂಬ್ ಬೆದರಿಕೆ, ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
ಬೆಂಗಳೂರು, ಡಿ. 23: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಬಾಂಬ್ ಹಾಕುತ್ತೇನೆ ಎಂದು ಟ್ವೀಟ್ ಮಾಡಿದ್ದಕ್ಕಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 20 ವರ್ಷದ ವೈಭವ್ ಗಣೇಶ್ ಎಂದು ಗುರುತಿಸಲಾಗಿದ್ದು, ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಬೆಂಗಳೂರಿನ ದಕ್ಷಿಣ ಭಾಗದ ಕೂಡ್ಲು ಗೇಟ್ ನಿವಾಸಿ ಎಂದು ಈಶಾನ್ಯ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಕೋವಿಡ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶೀಘ್ರ ಸ್ಕ್ರೀನಿಂಗ್
ಡಿಸೆಂಬರ್ 10 ರಂದು, ಆರೋಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ "ನಾನು ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಬಾಂಬ್ ಹಾಕುತ್ತೇನೆ. ಬಳಿಕ ಅವರು ನಗರಕ್ಕೆ ಹತ್ತಿರದಲ್ಲಿ ಒಂದು ವಿಮಾನ ನಿಲ್ದಾಣವನ್ನು ಮರುನಿರ್ಮಾಣ ಮಾಡಬಹುದು" ಎಂದು ಬರೆದಿದ್ದರು. ಬಳಿಕ ಟ್ವೀಟ್ ಡಿಲೀಟ್ ಆಗಿದ್ದರೂ ಕೂಡ ಹಲವರ ಗಮನ ಸೆಳೆದಿತ್ತು.
ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ದೂರಿನ ಆಧಾರದ ಮೇಲೆ, ಡಿಸೆಂಬರ್ 12 ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 ಮತ್ತು 507 ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದೂರಿನ ಮೇರೆಗೆ ಈಶಾನ್ಯ ವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಸೈಬರ್ ಕ್ರೈಂ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ, ವೈಭವ್ನನ್ನು ಬಂಧಿಸಲು ತನಿಖೆ ಆರಂಭಿಸಿದ್ದು, ಗುರುವಾರ ಅವರನ್ನು ಬಂಧಿಸಲಾಗಿದೆ. ಟ್ವೀಟ್ ಮಾಡಿದ್ದ ಆತನ ಮೊಬೈಲ್ ಫೋನ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ನಿವಾಸ ಮತ್ತು ವಿಮಾನ ನಿಲ್ದಾಣದ ನಡುವೆ ಪ್ರಯಾಣಿಸಲು ಕಷ್ಟವಾಗುತ್ತಿದೆ. ಹೀಗಾಗಿ ಹತಾಶೆಯಿಂದ ಟ್ವೀಟ್ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಬೆಂಗಳೂರಿನ ಈಶಾನ್ಯ ಸಿಇಎನ್ ವಿಭಾಗದ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಅನೂಪ್ ಎ ಶೆಟ್ಟಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದಕ್ಕಾಗಿ ವಿದ್ಯಾರ್ಥಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಾಂಬ್ ಬೆದರಿಕೆ ಎಂಬುದು ತಮಾಷೆಯಲ್ಲ. ದಯವಿಟ್ಟು ಇಂತಹ ಬೆದರಿಕೆ ಹಾಕುವುದನ್ನು ಬಿಟ್ಟುಬಿಡಿ'' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣವು ದೇವನಹಳ್ಳಿಯಲ್ಲಿದ್ದು, ನಗರದ ಮಧ್ಯಭಾಗದಿಂದ ಸರಿಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ವಿಮಾನ ನಿಲ್ದಾಣವು ನಗರದ ಹೊರವಲಯದಲ್ಲಿರುವುದರಿಂದ ಮತ್ತು ಕೈಗೆಟುಕುವ ಸಾರಿಗೆ ಕೊರತೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಲವರು ಹಲವಾರು ಬಾರಿ ದೂರಿದ್ದಾರೆ.