ಕೆಜಿಎಫ್ ಬಾಬು ಮನೆ ಮೇಲೆ ಇಡಿ ದಾಳಿ ಅಂತ್ಯ: ಮನೆಯಲ್ಲಿ ಸಿಕ್ಕಿದ್ದೇನು?
ಬೆಂಗಳೂರು, ಮೇ29: ಉದ್ಯಮಿ ಕೆಜಿಎಫ್ ಬಾಬುಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆಯ ಬಿಸಿ ಎದುರಾಗಿದೆ. ಮೇ 28ರಿಂದ ನಿರಂತರ 18 ಗಂಟೆಗಳ ಕಾಲ ಬಾಬು ಮನೆಯಲ್ಲಿ ಹುಡುಕಾಟ ನಡೆಸಿದ್ದ ಇಡಿ ಅಧಿಕಾರಿಗಳು ಕೆಲವು ಮಹತ್ವದ ಕಡತಗಳನ್ನು ವಶಕ್ಕೆ ಪಡೆದು ತೆರಳಿದ್ದು, ಈ ಸಂಬಂಧ ವಿಚಾರಣೆಗೆ ಬರುವಂತೆ ಬುಲಾವ್ ನೀಡಿದ್ದಾರೆ. ಇಡಿ ದಾಳಿಯು ಅಂತ್ಯವಾಗಿದ್ದು ಕೆಜಿಎಫ್ ಬಾಬು ಮನೆಯಲ್ಲಿ ಸಿಕ್ಕಿದ್ದೇನು ಅನ್ನೋದರ ವಿವರ ಇಲ್ಲಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು ಮನೆಯಲ್ಲಿ ಇಡಿ ಅಧಿಕಾರಿಗಳ ಶೋಧ ಅಂತ್ಯವಾಗಿದೆ. ಮೇ 28 ಬೆಳಗ್ಗೆ 6.30 ಕ್ಕೆ ಬಾಬು ಮನೆಯಲ್ಲಿ ಶೋಧ ಆರಂಭಿಸಿದ ಇಡಿ ಅಧಿಕಾರಿಗಳು ರಾತ್ರಿ 12.30ರ ಸುಮಾರಿಗೆ ದಾಳಿ ಅಂತ್ಯಗೊಳಿಸಿ ಕೆಲವು ಮಹತ್ವದ ದಾಖಲೆಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ತೆರಳಿದ್ದಾರೆ. ಸ್ಕ್ರಾಪ್ ಬ್ಯುಸಿನೆಸ್ ಮಾಡುತ್ತಿದ್ದ ಕೆಜಿಎಫ್ ಬಾಬು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿದ್ದರು. ಜಮೀನು, ನಿವೇಶನ, ಕಟ್ಟಡಗಳ ಕೊಡು ಕೊಳ್ಳುವಿಕೆ ಶುರುವಿಟ್ಟು ಸಾವಿರಾರು ಕೋಟಿಯ ಒಡೆಯನಾಗಿದ್ದರು.
ಕೆಜಿಎಫ್ ಬಾಬು ವ್ಯವಹಾರ, ಹಣಕಾಸು ವಹಿವಾಟು ಮೇಲೆ ನಿಗಾ ಇಟ್ಟಿದ್ದ ಇಡಿ ಅಧಿಕಾರಿಗಳು, ಕಳೆದ ಒಂದು ತಿಂಗಳಿಂದ ಬಾಬು ಆರ್ಥಿಕ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ನಿನ್ನೆ ದಾಳಿ ಮಾಡಿದ್ದರು. ಬಾಬುಗೆ ಸೇರಿದ ಎರಡು ಮನೆ, ಉಮ್ರಾ ಡೆವಲಪರ್ಸ್ ಕಚೇರಿ, ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ವ್ಯಾಪಕ ಶೋಧ ನಡೆಸಿದ್ದರು. ಈ ವೇಳೆ ಸ್ಕ್ರಾಪ್ ಬಾಬು ಆಗಿದ್ದ ನೀನು ಗೋಲ್ಡ್ ಬಾಬು ಆಗಿದ್ದೇಗೆ ಎಂದು ಕಥೆಯನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ.
ಕೆಜಿಎಫ್ ಬಾಬು ಹೇಳಿದ್ದೇನು?
ಕೆಜಿಎಫ್ ಬಾಬು ಮನೆ ಮೇಲೆ ನಡೆಸಿದ ದಾಳಿ ವೇಳೆ 8.60 ಲಕ್ಷ ನಗದು, ಮೂರು ಕೆಜಿ, 750 ಗ್ರಾಂ ಚಿನ್ನ, ಬ್ಯಾಂಕ್ ಖಾತೆಗಳು, ರಿಯಲ್ ಎಸ್ಟೇಟ್ ವ್ಯವಹಾರ ಪತ್ರಗಳು ಪತ್ತೆಯಾಗಿವೆ. ಇಡಿ ಅಧಿಕಾರಿಗಳು ಅವುಗಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ಇಡಿ ದಾಳಿ ಬಗ್ಗೆ ಮಾತನಾಡಿದ ಕೆಜಿಎಫ್ ಬಾಬು "ಬಡವರ ಹತ್ತಿರ ದುಡ್ಡು ಬಂದಿದೆ ಅಂದರೆ ರೇಡ್ ಮಾಮೂಲಿ ಆಗಿದೆ. ನಾನು ಎಲ್ಲಾ ಟ್ಯಾಕ್ಸ್ ಕಟ್ಟಿದ್ದೇನೆ. ನಿನ್ನೆ ವಾರೆಂಟ್ ತಗೊಂಡು ಬಂದು ರೇಡ್ ಮಾಡಿದ್ದಾರೆ. ಶಾಸಕ ಜಮೀರ್ ಅಹಮದ್ ಮನೆ ತಗೊಳೋಕೆ ನಾನು ಮೂರೂವರೆ ಕೋಟಿ ಸಾಲ ಕೊಟ್ಟಿದ್ದೆ. ಅವರ ಮೇಲೆ ರೇಡ್ ಆಯ್ತು, ನಾನು ಸಾಲ ಕೊಟ್ಟಿದ್ದೆ ಅಂತ ಧೃಡೀಕರಣ ಕೊಟ್ಟಿದ್ದೆ. ಬಳಿಕ ಇಡಿಯಿಂದ ನನಗೆ ನೋಟಿಸ್ ಬಂದಿತ್ತು, ಈಗ ಜಮೀರ್ ಅಹಮದ್ ರೇಡ್ ಲಿಂಕ್ನಿಂದ ಈ ದಾಳಿಯಾಗಿರಬಹುದು'' ಎಂದಿದ್ದಾರೆ.
ಏಳು ದಿನಗಳಲ್ಲಿ ಇಡಿ ವಿಚಾರಣೆ ಹಾಜರಾಗುವಂತೆ ನೋಟಿಸ್
ಕೆಜಿಎಫ್ ಬಾಬು ನಮ್ಮ ಆಸ್ತಿ ಮೂಲಗಳು ಎಲ್ಲ ಕರೆಕ್ಟಾಗಿದೆ. ಮನೆಯಲ್ಲಿ ಸಿಕ್ಕ ಹಣ ಬ್ಯಾಂಕ್ನಿಂದ ಡ್ರಾ ಮಾಡಿ ತಂದಿದ್ದು, ಚಿನ್ನವನ್ನು ಸೀಜ್ ಮಾಡಿದ್ದಾರೆ ಎಂದರು. ಅಲ್ಲದೇ ಇನ್ನೂ ಕೆಲವು ಮಾಹಿತಿಯನ್ನು ಇಡಿ ಅಧಿಕಾರಿಗಳು ಕೇಳಿದ್ದು, ಸಮನ್ಸ್ ಕೊಟ್ಟ ಏಳು ದಿನಗಳಲ್ಲಿ ದೆಹಲಿಗೆ ಬರುವಂತೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಚುನಾವಣೆಗೆ ಸ್ಪರ್ಧಿಸಿದ್ದೆ ದೊಡ್ಡ ಅಪರಾಧವಾಯ್ತು.
ಡಿಕೆ ಶಿವಕುಮಾರ್ ಅವರ ಮೇಲೆ ಚಾರ್ಜ್ ಶೀಟ್ ಹಾಕಿದ್ದರು. ನಿನ್ನೆ ನನ್ನ ಮನೆ ಮೇಲೆ ಇಡಿ ರೇಡ್ ಆಗಿದೆ. ಅವರು ನನ್ನ ಗುರುಗಳು, ನಮ್ಮ ನಾಯಕರು ಈ ಬಗ್ಗೆ ಏನು ಹೇಳೋಕೆ ಆಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು. ಇನ್ನೂ ಕಳೆದ ವರ್ಷ ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಕೆಜಿಎಫ್ ಬಾಬು ಚುನಾವಣೆಗೆ ಸ್ಪರ್ಧಿಸಿದ್ದೆ ದೊಡ್ಡ ಅಪರಾಧವಾಯ್ತು ಅಂತ ಬೇಸರ ಹೊರ ಹಾಕಿದರು. ಉದ್ಯಮಿ ಕೆಜಿಎಫ್ ಬಾಬುಗೆ ಇಡಿ ತನಿಖೆಯ ಬಿಸಿ ಎದುರಾಗಿದೆ.
Recommended Video
ಇಡಿ ವಿಚಾರಣೆ ಹೇಗೆ ನಡೆಯಲಿದೆ?
ಕೆಜಿಎಫ್ ಬಾಬು ಮನೆಯಲ್ಲಿ ಸಿಕ್ಕ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಇಡಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಕೆಲವು ಮಹತ್ವದ ದಾಖಲೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಏಳು ದಿನಗಳಲ್ಲಿ ವಿಚಾರಣೆಗೆ ಹಾಜರಾಬೇಕು ಎಂದು ನೋಟೀಸ್ ಕೊಟ್ಟದ್ದಾರೆ. ಹೀಗಾಗಿ ಕೆಜಿಎಫ್ ಬಾಬು ಏಳುದಿನಗಳಲ್ಲಿ ಇಡಿ ಅಧಿಕಾರಿಗಳ ಎದುರು ತನಿಖೆಗೆ ಹಾಜರಾಗಬೇಕು. ಇಡಿ ಅಧಿಕಾರಿಗಳು ಕೇಳಿರುವ ಕೆಲವು ದಾಖಲೆ ಹಣದ ಮೂಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು. ಕೆಜಿಎಫ್ ಬಾಬು ಇಡಿ ಅಧಿಕಾರಿಗಳನ್ನು ಭೇಟಿಯಾಗುವ ಮುನ್ನ ತಮ್ಮ ವಕೀಲರ ಸಲಹೆಯನ್ನು ಪಡೆಯಲಿದ್ದಾರೆ. ಇಡಿ ಇಕ್ಕಳದಲ್ಲಿ ಸಿಲುಕಿರೋದರಿಂದಾಗಿ ಮತ್ತಷ್ಟು ದಿನ ಕೆಜಿಎಫ್ ಬಾಬು ತನಿಖೆಯ ಬಿಸಿಯನ್ನು ಎದುರಿಸಬೇಕಾಗುತ್ತದೆ.