Breaking: ಬ್ಯಾಂಕ್ ವಂಚನೆ ಪ್ರಕರಣ: 244 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ
ಬೆಂಗಳೂರು, ಏಪ್ರಿಲ್ 01: ಅಮನಾಥ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬೆಂಗಳೂರು ಮೂಲದ ಸಹಕಾರಿ ಬ್ಯಾಂಕ್ನ ಮಾಜಿ ಅಧಿಕಾರಿಗಳಿಗೆ ಸೇರಿದ 243.93 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಅಮನಾಥ್ ಬ್ಯಾಂಕ್ ವಂಚನೆ ಪ್ರಕರಣವು ಸುಮಾರು 68.43 ಕೋಟಿ ರೂಪಾಯಿ ದುರುಪಯೋಗದ ಆರೋಪವನ್ನು ಹೊಂದಿರುವ ವಂಚನೆ ಪ್ರಕರಣವಾಗಿದೆ. ಏಜೆನ್ಸಿಯ ಪ್ರಕಾರ ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ನ ಮಾಜಿ ಪ್ರಧಾನ ವ್ಯವಸ್ಥಾಪಕ ಮೊಹಮದ್ ಅಸಾದುಲ್ಲಾ, ಮಾಜಿ ಶಾಖಾ ವ್ಯವಸ್ಥಾಪಕ ಎ ಶಫಿವುಲ್ಲಾ, ಬ್ಯಾಂಕ್ನಲ್ಲಿ ಮಾಜಿ ಅಕೌಂಟೆಂಟ್ ಆಗಿದ್ದ ಕೆ ಹಿದಾಯತುಲ್ಲಾ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. '
ಈ ಮೂವರು 1997 ಮತ್ತು 2002 ರ ನಡುವೆ ತಮ್ಮ ಮತ್ತು ತಮ್ಮ ಸಂಬಂಧಿಕರ ಹೆಸರಿನಲ್ಲಿ 50 ಕಾಲ್ಪನಿಕ ಓವರ್ಡ್ರಾಫ್ಟ್ ಖಾತೆಗಳನ್ನು ತೆರೆದು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಎಂದು ಆರೋಪ ಮಾಡಲಾಗಿದೆ. 50 ಕಾಲ್ಪನಿಕ ಖಾತೆಗಳ ಬಾಕಿ ಮೊತ್ತವನ್ನು ಸರಿಹೊಂದಿಸಲು ಅವರು ಎಂಟು ರಿಯಲ್ ಎಸ್ಟೇಟ್ ಖಾತೆಗಳು ಮತ್ತು 165 ಗೃಹ ಸಾಲ ಖಾತೆಗಳನ್ನು ತೆರೆದಿದ್ದಾರೆ ಮತ್ತು ಆ ಮೂಲಕ 40 ಕಾಲ್ಪನಿಕ ಖಾತೆಗಳನ್ನು ಮುಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
ಮೂವರು ಕೂಡಾ ಅಕ್ರಮವಾಗಿ ಪಡೆದ ಸಾಲವನ್ನು ಭೂಮಿ ಮತ್ತು ಸ್ಥಿರ ಆಸ್ತಿಗಳನ್ನು ಖರೀದಿಸಲು ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಎನ್ ಎಸ್ ಪಾಳ್ಯ, ಬೇಗೂರು ಹೋಬಳಿ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ಅಸಾದುಲ್ಲಾ, ಶಫಿವುಲ್ಲಾ ಮತ್ತು ಅವರ ಸಂಬಂಧಿಕರ ಹೆಸರಿನಲ್ಲಿ ಎಂಟು ಎಕರೆ ವಿಸ್ತೀರ್ಣದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 ರ ಅಡಿಯಲ್ಲಿ ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ.
ಈ ಎಲ್ಲಾ ರಿಯಲ್ ಎಸ್ಟೇಟ್ ಖಾತೆಗಳು, ಗೃಹ ಸಾಲ ಖಾತೆಗಳು ಮತ್ತು 10 ಓವರ್ಡ್ರಾಫ್ಟ್ ಖಾತೆಗಳು ಇನ್ನೂ ಬಾಕಿ ಉಳಿದಿವೆ ಎಂದು ವರದಿಯಾಗಿದೆ. ಈ ಖಾತೆಗಳ ಒಟ್ಟು ಸಾಲದ ಆದಾಯವನ್ನು ಅನುತ್ಪಾದಕ ಆಸ್ತಿಗಳೆಂದು ಘೋಷಿಸಲ್ಪಡಲಾಗಿದೆ.
Recommended Video
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಪರಾಧ ತನಿಖಾ ವಿಭಾಗವು ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಮೇ 5, 2006 ರಂದು ಸಲ್ಲಿಸಿದ ಆರೋಪಪಟ್ಟಿಯನ್ನು ಆಧರಿಸಿ ಸಂಸ್ಥೆಯು ಹಣ-ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿದೆ.