ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಅಪಘಾತಕ್ಕೆ ಚಾಲಕನ ಅಜಾಗರೂಕತೆ ಕಾರಣ: ಜಂಟಿ ಪೊಲೀಸ್ ಆಯುಕ್ತ!
ಬೆಂಗಳೂರು ಸೆ. 15: ಇಬ್ಬರು ಮುಗ್ಧ ಜೀವಗಳನ್ನು ಬಲಿ ಪಡೆದ ಎಲೆಕ್ಟ್ರಾನಿಕ್ ಸಿಟ ಫ್ಲೇ ಓವರ್ ಅಪಘಾತ ಪ್ರಕರಣಕ್ಕೆ ಕಾರಿನ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಕಾರಣ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮರಾ ವಿಡಿಯೋ ಕೂಡ ಬಿಡುಗಡೆ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
Recommended Video
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಂಟಿ ಪೊಲೀಸ್ ಆಯುಕ್ತರು, ಸೆ. 14 ರಂದು ರಾತ್ರಿ 9.20 ರ ಸುಮಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಲ್ವೇಟೆಡ್ ಮೇಲ್ಸೇತುವೆ ಮೇಲೆ ನಿಂತಿದ್ದ ಬುಲೆಟ್ ವಾಹನಕ್ಕೆ ಅತಿವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ವ್ಯಕ್ತಿಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದರು.
ನಿರ್ಲಕ್ಷ ಚಾಲನೆ ಮಾಡಿದ ಕಾರು ಚಾಲಕ ನಿತಿನ್ , ಬೊಮ್ಮಸಂದ್ರದ ತಿರುಪಾಳ್ಯದ ನಿವಾಸಿಯಾಗಿದ್ದು ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಮೃತರು ತಮಿಳುನಾಡು ಮೂಲದವರು
ತಮಿಳುನಾಡು ಮೂಲದ, ಜೆಪಿ ನಗರದ ನಿವಾಸಿ ಪ್ರೀತಂ ಕುಮಾರ್ (30) ಹಾಗೂ ಚೆನ್ನೈ ಮೂಲದ ಕೃತಿಕಾ ರಾಮನ್ (28)ಮೃತಪಟ್ಟವರು. ಜೆಪಿನಗರದ ನಿವಾಸಿ ಪ್ರೀತಂ ಕುಮಾರ್ ಸರ್ಜಾಪುರ ರಸ್ತೆಯಲ್ಲಿರುವ ನೊವೋಪೇ ಎಂಬ ಕಂಪನಿಯಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೃತಿಕಾ ರಾಮನ್ ಮಹದೇವಪುರದಲ್ಲಿರುವ ಕಾಯಿನ್ ಸ್ವಿಚ್ ಎಂಬ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಂಗಸಂದ್ರ ಲೇ. ಬೇ. ಸಮೀಪ ನಡೆದ ಘಟನೆ
ಐದು ವರ್ಷದಿಂದ ಸ್ನೇಹಿತರಾಗಿದ್ದ ಪ್ರೀತಂಕುಮಾರ್ ಮತ್ತು ಕೃತಿಕಾ ರಾಮನ್ ಕೆಲಸದ ನಿಮಿತ್ತ ಅತ್ತಿಬೆಲೆ ಕಡೆ ತೆರಳಿದ್ದರು. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಮೇಲ್ಸೇತುವೆ ಮಾರ್ಗವಾಗಿ ಬುಲೆಟ್ ವಾಹನದಲ್ಲಿ ತೆರಳುತ್ತಿದ್ದ ಇವರು ಸಿಂಗಸಂದ್ರ ಲೇ. ಬೇ. ಸಮೀಪ ನಿಲ್ಲಿಸಿಕೊಂಡಿದ್ದರು. ಬಲೆನೋ ಕಾರಿನಲ್ಲಿ ಅತಿವೇಗವಾಗಿ ಬಂದ ನಿತಿನ್ ನಿಂತಿದ್ದ ಬುಲೆಟ್ ಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಮೇಲೆ ಕೂತಿದ್ದ ಕೃತಿಕಾ ರಾಮನ್ ಮತ್ತು ಪ್ರೀತಂಕುಮಾರ್ ಇಬ್ಬರು ಮೇಲ್ಸೇತುವೆಯಿಂದ ಹಾರಿ ಸರ್ವೀಸ್ ರಸ್ತೆಗೆ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಕಾರು ಚಾಲಕ ನಿತಿನ್ಗೂ ಗಂಭೀರ ಗಾಯಗಳಾಗಿದ್ದು ಆತನನ್ನು ಸಮೀಪದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಜಾಗರೂಕ ಚಾಲನೆಯಿಂದ ಅವಘಡ
ಅಜಾಗರೂಕ ಚಾಲನೆಯಿಂದ ಅವಘಡ: ಸಿಂಗಸಂದ್ರದ ಲೇ ಬೇ ಮೇಲ್ಸೇತುವೆ ಬಳಿ ನಿಂತಿದ್ದ ಬುಲೆಟ್ ಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ನಿತಿನ್ ಅಜಾಗರೂಕತೆ ಮತ್ತು ಅತಿವೇಗವಾಗಿ ಕಾರು ಚಲಾವಣೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ತಿಳಿಸಿದ್ದಾರೆ. ಇಬ್ಬರ ಸಾವಿಗೆ ಕಾರಣವಾದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ವಹಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಚ್ಚಿ ಬೀಳಿಸಿದ ಅವಘಡ
ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲ್ಸೇತುವೆ ಮೇಲೆ ಬೈಕ್ನಲ್ಲಿ ಕೂತಿದ್ದ ಇಬ್ಬರು ವ್ಯಕ್ತಿಗಳು ಹಾರಿ ಸರ್ವೀಸ್ ರಸ್ತೆ ಮೇಲೆ ಬಿದ್ದಿರುವ ದೃಶ್ಯ ನೋಡಿ ಸಾರ್ವಜನಿಕರೇ ಭಯಭೀತರಾಗಿದ್ದಾರೆ. ಸುಮಾರು ಐವತ್ತು ಅಡಿ ಎತ್ತರಿಂದ ಹಾರಿ ಬಿದ್ದು ತಲೆಗೆ ಹಾಗೂ ದೇಹಕ್ಕೆ ತೀವ್ರತರ ಪೆಟ್ಟಾಗಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಅಪಘಾತ ಪ್ರಕರಣ ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದೆ. ಡಿಕ್ಕಿ ಹೊಡೆದ ರಬಸಕ್ಕೆ ಕಾರು ಕೂದಲು ಎಳೆಯಿಂದ ಪಾರಾಗಿದ್ದು, ಕಾರು ಕೆಳಗೆ ಬಿದ್ದಿದ್ದಲ್ಲಿ ಇನ್ನೂ ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೋರಮಂಗಲದಲ್ಲಿ ಏಳು ಮಂದಿಯನ್ನು ಬಲಿ ಪಡೆದ ಆಡಿ ಕಾರು ಅಪಘಾತ ಪ್ರಕರಣ ಮಾಸುವ ಮುನ್ನವೇ ಈ ಅವಘಡ ನಡೆದಿದೆ. ಕೋರಮಂಗಲ ಪ್ರಕರಣಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿದ್ದು, ಯುವಕ ಹಾಗೂ ಯುವತಿ ಮೇಲಿನಿಂದ ಕೆಳಗೆ ಹಾರಿ ಬಿದ್ದು ಮೃತಪಟ್ಟಿದ್ದಾರೆ. ಅತಿವೇಗ ಚಾಲನೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಕಾರು ಚಾಲಕ ಮಾಡಿದ ತಪ್ಪಿಗೆ ಎರಡು ಮುಗ್ಧ ಜೀವಗಳು ಬಲಿಯಾಗಿವೆ.












Click it and Unblock the Notifications