Election Result: ಹಳೇ ಮೈಸೂರು ಭಾಗದಲ್ಲಿ JDS ಭವಿಷ್ಯಕ್ಕೆ ಕಂಟಕ?
ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಜೆಡಿಎಸ್ ನಾಯಕರಿಗೆ ದೊಡ್ಡ ಆಘಾತ ನೀಡಿದೆ. ಅದ್ರಲ್ಲೂ ಇಷ್ಟುದಿನ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಹಳೇ ಮೈಸೂರು ಭಾಗದಲ್ಲೇ JDSಗೆ ಶಾಕ್ ಸಿಕ್ಕಿದೆ. ಹಾಗಾದ್ರೆ ಮಂಡ್ಯ, ಹಾಸನ, ರಾಮನಗರದಲ್ಲಿ JDS ಭವಿಷ್ಯವೇನು? ತನ್ನ ಭದ್ರಕೋಟೆಯನ್ನೇ ಜೆಡಿಎಸ್ ಪಡೆ ಕಾಂಗ್ರೆಸ್ ಕೈಗೆ ಒಪ್ಪಿಸಿದ್ದು ಯಾವ ತಪ್ಪಿನಿಂದ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಜೆಡಿಎಸ್ ಹಾಕಿದ್ದೇ ಒಂದು ಲೆಕ್ಕ, ಸಿಕ್ಕಿದ್ದೇ ಇನ್ನೊಂದು ರೀತಿ ಫಲಿತಾಂಶ. ಅದ್ರಲ್ಲೂ JDS ಹಳೇ ಮೈಸೂರು ಭಾಗದ ತನ್ನ ಹಿಡಿತವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೇ ಒಪ್ಪಿಸಿದಂತೆ ಕಾಣುತ್ತಿದೆ. ಹೀಗಾಗಿ ಜೆಡಿಎಸ್ ನಾಯಕರು 2023ರ ವಿಧಾನಸಭಾ ಫಲಿತಾಂಶದಿಂದ ಶಾಕ್ಗೆ ಒಳಗಾಗಿದ್ದಾರೆ. ಕಳೆದ ಚುನಾವಣೆ ವೇಳೆ ಗೆದ್ದಿದ್ದ ಸ್ಥಾನಗಳನ್ನೂ ಈ ಬಾರಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಂಡ್ಯ, ಹಾಸನ, ರಾಮನಗರ ಕ್ಷೇತ್ರಗಳಲ್ಲಂತೂ ಭೀಕರ ಪ್ರದರ್ಶನ ನೀಡಿರುವುದು ಜೆಡಿಎಸ್ ಭವಿಷ್ಯವನ್ನ ಮಂಕಾಗಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಆಘಾತ
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ 5 ಕಾಂಗ್ರೆಸ್ ವಶವಾಗಿದ್ದರೆ, 1 ಸರ್ವೋದಯ ಕರ್ನಾಟಕ ಪಕ್ಷದ ಪಾಲಾಗಿದೆ. ಈ ಬಾರಿ JDS ಕೇವಲ ಒಂದೇ ಒಂದು ಸ್ಥಾನವನ್ನ ಮಂಡ್ಯ ಜಿಲ್ಲೆಯಲ್ಲಿ ಗೆಲ್ಲುವ ಮೂಲಕ ದೊಡ್ಡ ಆಘಾತ ಎದುರಿಸಿದೆ. 2018ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನ ಗೆದ್ದು ಬೀಗಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಾದ್ರೆ ಮಂಡ್ಯದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ? ನೋಡೋಣ ಬನ್ನಿ.
ಭದ್ರಕೋಟೆ ಒಳಗೇ ಹೀನಾಯ ಸೋಲು!
ಮಂಡ್ಯ ಕ್ಷೇತ್ರದಲ್ಲಿ ಗಣಿಗ ರವಿಕುಮಾರ್ ಕಾಂಗ್ರೆಸ್ನಿಂದ ಗೆದ್ದಿದ್ದಾರೆ. ಮದ್ದೂರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್, ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ. ನರೇಂದ್ರಸ್ವಾಮಿ ಮತ್ತು ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ನ ರಮೇಶ್ಬಾಬು ಬಂಡಿಸಿದ್ಧೇಗೌಡ, ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕದ ದರ್ಶನ್ ಪುಟ್ಟಣ್ಣಯ್ಯ, ನಾಗಮಂಗಲದಿಂದ ಕಾಂಗ್ರೆಸ್ನ ಚಲುವರಾಯಸ್ವಾಮಿ, ಕಡೆಯದಾಗಿ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ನ ಹೆಚ್.ಟಿ. ಮಂಜು ಮಾತ್ರ ಗೆದ್ದಿದ್ದಾರೆ. ಹೀಗೆ JDSಗೆ ಭದ್ರಕೋಟೆ ಒಳಗೆ ಶಾಕ್ ಸಿಕ್ಕಿದೆ.
ರಾಮನಗರ ಜಿಲ್ಲೆಯಲ್ಲೂ ಕುಸಿದ ಜೆಡಿಎಸ್
ಅಂದಹಾಗೆ ಈ ಬಾರಿ ಡಿ.ಕೆ.ಶಿವಕುಮಾರ್ ರೂಪಿಸಿದ್ದ ರಣತಂತ್ರ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿ, ಜೆಡಿಎಸ್ ನಾಯಕರಿಗೆ ಆಘಾತ ನೀಡಿದೆ. ಕಾಂಗ್ರೆಸ್ನ ಒಗ್ಗಟ್ಟಿನ ಪ್ರದರ್ಶನದಿಂದಾಗಿ ಜೆಡಿಎಸ್ ಭದ್ರಕೋಟೆ ಛಿದ್ರವಾಗಿದ್ದು, ತವರು ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಕೈ ಮೇಲಾಗಿದೆ. ಒಕ್ಕಲಿಗ ಪ್ರಾಬಲ್ಯ ಇರುವ ಜಿಲ್ಲೆಯಲ್ಲಿ ಜೆಡಿಎಸ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಕಳೆದ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ 3ರಲ್ಲಿ ಗೆದ್ದು ಬೀಗಿತ್ತು JDS. ಇದೀಗ ಆ ಫಲಿತಾಂಶ ತಲೆಕೆಳಗಾಗಿದ್ದು, ತನ್ನ ಭದ್ರಕೋಟೆ ಒಳಗೆ ಜೆಡಿಎಸ್ ಸೋತು ಸುಣ್ಣವಾಗಿದೆ.

ಜೆಡಿಎಸ್ ಪಾಳಯದಲ್ಲಿ ಚಿಂತೆ ಶುರು
ಅಷ್ಟಕ್ಕೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಮನಗರ ಜಿಲ್ಲೆಯಾಗಿತ್ತು. ಹೀಗಾಗಿ ಅಲ್ಲಿ ಬಲವಾಗಿ ಬೇರೂರಿತ್ತು ಜೆಡಿಎಸ್, ಕಳೆದ 30 ವರ್ಷದಿಂದ ಜೆಡಿಎಸ್ ನಾಯಕರ ಕುಟುಂಬ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಈಗ ಕಾಂಗ್ರೆಸ್ ವಶವಾಗಿದೆ. ನಿಖಿಲ್ ಕುಮಾರಸ್ವಾಮಿ ಸೋಲನ್ನು ಜೆಡಿಎಸ್ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುತ್ರನಿಗಾಗಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರವನ್ನು ತ್ಯಾಗ ಮಾಡಿದ್ದರೂ ಈಗ ಅದು ಕಾಂಗ್ರೆಸ್ ವಶವಾಗಿದೆ. ಹಾಗಾದ್ರೆ ರಾಮನಗರದಲ್ಲಿ ಜೆಡಿಎಸ್ಗೆ ಕೈಕೊಟ್ಟ ಅಂಶ ಏನು? ಮುಂದೆ ಓದಿ.
ಅತಿಯಾದ ಆತ್ಮವಿಶ್ವಾಸದಿಂದ ಪೆಟ್ಟು?
ಅಂದಹಾಗೆ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಹೀನಾಯ ಪ್ರದರ್ಶನ ನೀಡಲು ಹಲವು ಕಾರಣಗಳಿಗೆ. ಆ ಪೈಕಿ ಪ್ರಮುಖ ಕಾರಣ 2ನೇ ಹಂತದ ನಾಯಕರ ಕೊರತೆ. ಹೌದು, ರಾಮನಗರದಲ್ಲಿ ದೊಡ್ಡ ದೊಡ್ಡ ನಾಯಕರನ್ನ ಬಿಟ್ಟರೆ ಅವರ ಕೆಳಗೆ ಕ್ಷೇತ್ರದಲ್ಲಿ ಪ್ರಭಾವ ಬೀರಲು 2ನೇ ಹಂತದ ನಾಯಕರ ಕೊರತೆ ತೀವ್ರವಾಗಿತ್ತು ಎನ್ನುವ ಮಾತುಗಳು ಕೇಳಿಬಂದಿವೆ. ಮತ್ತೊಂದ್ಕಡೆ ಅತಿಯಾದ ಆತ್ಮವಿಶ್ವಾಸ ಕೂಡ ಜೆಡಿಎಸ್ಗೆ ಅರಗಿಸಿಕೊಳ್ಳಲಾಗದ ಪೆಟ್ಟು ನೀಡಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಅಭ್ಯರ್ಥಿಗಳಿಗೂ ಹೀನಾಯ ಸೋಲು
ರಾಮನಗರದಲ್ಲಿ ಈ ಬಾರಿ ಜೆಡಿಎಸ್ ಮಾತ್ರವಲ್ಲ ಬಿಜೆಪಿ ಅಭ್ಯರ್ಥಿಗಳಿಗೂ ಹೀನಾಯ ಸೋಲು ಎದುರಾಗಿದೆ. ಚನ್ನಪಟ್ಟಣ ಕ್ಷೇತ್ರ ಬಿಟ್ಟರೆ ಉಳಿದ 3 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪಡೆದ ಮತ 20 ಸಾವಿರ ದಾಟಿಲ್ಲ. ಇನ್ನು ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಜಿಲ್ಲೆಯಲ್ಲಿ 59 ಮಂದಿ ಕಣದಲ್ಲಿದ್ದರು. ಆದ್ರೆ 52 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿಯ ಆರ್. ಅಶೋಕ, ಗೌತಮ್ ಗೌಡ, ಪ್ರಸಾದ್ ಗೌಡ ಸಹ ಠೇವಣಿ ಉಳಿಸಿಕೊಳ್ಳಲು ಆಗಿಲ್ಲ.

ಜೆಡಿಎಸ್ ನಾಯಕರ ತವರಲ್ಲೂ ಶಾಖ್!
ಹಾಸನ ಜಿಲ್ಲೆ ಅಂದ್ರೆ ಜೆಡಿಎಸ್, JDS ಅಂದ್ರೆ ಹಾಸನ ಎನ್ನುವಷ್ಟರಮಟ್ಟಿಗೆ ಪ್ರಾಬಲ್ಯ ಕಾಯ್ದುಕೊಂಡಿದ್ದರು ಜೆಡಿಎಸ್ ನಾಯಕರು. ಆದರೆ 2023ರ ಚುನಾವಣೆ ಅತ್ಯಂತ ಹೀನಾಯವಾಗಿತ್ತು. ಹೀಗಾಗಿ ಹಾಸನದಲ್ಲಿ JDS ಈ ಬಾರಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರ ಮತ್ತು ಹಾಸನದ ಪ್ರಭಾವಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರೇ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಶ್ರೇಯಸ್ ಪಟೇಲ್ ವಿರುದ್ಧ ಕೇವಲ 3152 ಮತಗಳ ಅಂತರದಿಂದ ಗೆದ್ದು ನಿಟ್ಟುಸಿರುಬಿಟ್ಟರು.
1 ವಾಪಸ್ ಬಂತು, 2 ಎಸ್ಕೇಪ್ ಆದವು!
2018ರ ಚುನಾವಣೆಯಲ್ಲಿ ಜೆಡಿಎಸ್ ಕಳೆದುಕೊಂಡಿದ್ದ ಹಾಸನ ಕ್ಷೇತ್ರವನ್ನ ಮರಳಿ ಪಡೆದುಕೊಂಡಿದೆ. ಆದ್ರೂ ಸಕಲೇಶಪುರ ಮತ್ತು ಬೇಲೂರು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಕಳೆದ ಬಾರಿ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು ಹಾಗೇ ಈ ಬಾರಿ ಹಾಸನ ಕಳೆದುಕೊಂಡರೂ ಸಕಲೇಶಪುರ ಮತ್ತು ಬೇಲೂರು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಈ ಮೂಲಕ ಜೆಡಿಎಸ್ ವರಿಷ್ಠರಿಗೆ ತವರಲ್ಲೇ ಆಘಾತಕಾರಿ ರಿಸಲ್ಟ್ ಸಿಕ್ಕಿದೆ. ಅರಕಲಗೂಡು & ಹೊಳೆನರಸೀಪುರ ಮತ್ತು ಶ್ರವಣಬೆಳಗೊಳ ಕ್ಷೇತ್ರಗಳನ್ನು ಜೆಡಿಎಸ್ ಉಳಿಸಿಕೊಂಡಿದೆ. ಆದರೆ ಇತ್ತ ಅರಸೀಕೆರೆ ಕ್ಷೇತ್ರವನ್ನು ಕಾಂಗ್ರೆಸ್ ಕಿತ್ತುಕೊಂಡಿದೆ.

ಒಟ್ನಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಈ ಬಾರಿ ಪಡೆದಿರುವ ರಿಸಲ್ಟ್ ಎಚ್ಚರಿಕೆಯ ಗಂಟೆ. ಈಗಲೇ ಜೆಡಿಎಸ್ ನಾಯಕರು ಎಚ್ಚೆತ್ತುಕೊಂಡು, ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಂಡು ಮುನ್ನುಗ್ಗಬೇಕಿದೆ. ಇಲ್ಲ ಅಂದರೆ ಮುಂಬರುವ ದಿನಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಿಡಿತ ಮತ್ತಷ್ಟು ತಪ್ಪುವ ಆತಂಕ ಶುರುವಾಗಿದೆ. ಹೀಗಾಗಿ ಇದು ದಳಪತಿಗಳಿಗೆ ಸೋಲನ್ನು ಅವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.












Click it and Unblock the Notifications