ನೀತಿ ಸಂಹಿತೆ: ಪಿಡಿಒಗಳ ನೇಮಕಾತಿಗೆ ತಾತ್ಕಾಲಿಕ ತಡೆ
ಬೆಂಗಳೂರು, ಏಪ್ರಿಲ್ 09: ಇನ್ನೇನು ಹುದ್ದೆಗಳನ್ನು ವಹಿಸಿಕೊಂಡು ಸೇವೆಗೆ ಅಣಿಯಾಗಬೇಕು ಅಂದುಕೊಂಡಿದ್ದ ಪಿಡಿಒ ಮತ್ತು ಪಂಚಾಯಿತಿ ಕಾರ್ಯದರ್ಶಿಗಳ ಆಸೆಗೆ ತಾತ್ಕಾಲಿಕ ತಡೆ ಬಿದ್ದಿದೆ.ಚುನಾವಣಾ ನೀತಿ ಸಂಹಿತೆಯ ಬಿಸಿ ಪಿಡಿಓ ಹಾಗೂ ಗ್ರಾಮಪಂಚಾಯ್ತಿ ಕಾರ್ಯದರ್ಶಿಗಳ ನೇಮಕಾತಿಗೂ ತಟ್ಟಿದೆ.
ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ, ಪಿಡಿಒ ನೇಮಕಾತಿ ವಿವರ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಕ್ತಾಯಗೊಳ್ಳುವವರೆಗೆ ನೇಮಕಾತಿ ಕ್ರಮ ಕೈಗೊಳ್ಳದಂತೆ ಎಲ್ಲ ಜಿಲ್ಲಾ ಪಂಚಾಯ್ತಿಗಳ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ತುರ್ತು ಸುತ್ತೋಲೆ ರವಾನಿಸಿದ್ದು, ಆಯ್ಕೆಯಾದ 1,624 ಅಭ್ಯರ್ಥಿಗಳು ಹುದ್ದೆ ವಹಿಸಿಕೊಳ್ಳಲು ಇನ್ನೂ ಒಂದು ತಿಂಗಳು ಕಾಯಬೇಕಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 815 ಪಿಡಿಒ 809 ಕಾರ್ಯದರ್ಶಿ ಸೇರಿ ನೇಮಕಗೊಂಡಿದ್ದ ಒಟ್ಟು 1,624 ನೌಕರರಿಗೆ ಮಾ.5ರಂದು ಸಚಿವರು ಸೇವಾ ಸಂಕಲ್ಪ ವಿಜ್ಞಾನ ವಿಧಿ ಬೋಧಿಸಿದ್ದರು. ಅದರ ಬೆನ್ನಲ್ಲೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಗದಿಪಡಿಸಿ ನೇಮಕಾತಿ ಆದೇಶ ನೀಡುವಂತೆ ಎಲ್ಲ ಜಿಲ್ಲಾ ಪಂಚಾಯ್ತಿಗಳ ಸಿಇಒಗಳಿಗೆ ಆದೇಶ ಸಹ ನೀಡಲಾಗಿತ್ತು.
ಹುದ್ದೆ ವಹಿಸಿಕೊಂಡ ಬಳಿಕ ಈ ಪಿಡಿಒ ಮತ್ತು ಕಾರ್ಯದರ್ಶಿಗಳ ಎರಡು ತಿಂಗಳ ತರಬೇತಿಗೂ ಕಾರ್ಯಸೂಚಿ ಸಿದ್ಧವಾಗಿತ್ತು. ಆದರೆ, ನೀತಿ ಸಂಹಿತೆ ಕಾರಣದಿಂದಾಗಿ ಅದೆಲ್ಲವೂ ಮುಂದಕ್ಕೆ ಹೋಗಿದೆ. ಪಿಡಿಒ ಮತ್ತು ಕಾರ್ಯದರ್ಶಿಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2017ರ ಜನವರಿಯಲ್ಲಿ ಪರೀಕ್ಷೆ ನಡೆದಿತ್ತು. ಫಲಿತಾಂಶ ಸಾಕಷ್ಟು ವಿಳಂಬವಾಗಿತ್ತು. ಪಟ್ಟಿ ಪ್ರಕಟವಾದ ಮೇಲೆ ಹೆಚ್ಚುವರಿ ಅಂಕಗಳ ವಿಚಾರದಲ್ಲಿ ಗೊಂದಲ ಉಂಟಾಗಿದ್ದರಿಂದ ಪ್ರಕರಣ ಕರ್ನಾಟಕ ಆಡಳಿತ ಮಂಡಳಿ ಮೆಟ್ಟಿಲೇರಿತ್ತು.