ಸಂಜನಾ ಆರೋಗ್ಯ ವಿಚಾರಿಸಿದ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು, ಅಕ್ಟೋಬರ್ 19 : ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಈಜಿಪುರ ಕಟ್ಟಡ ದುರಂತದಲ್ಲಿ ಗಾಯ ಗೊಂಡವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅವಶೇಷಗಳಡಿ ಸಿಲುಕಿದ್ದ 3 ವರ್ಷದ ಸಂಜನಾ ಸೇರಿದಂತೆ ಹಲವರನ್ನು ರಕ್ಷಣೆ ಮಾಡಲಾಗಿತ್ತು.
ಗುರುವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸಂಜನಾ ಪೋಷಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ವೈದ್ಯರ ಜೊತೆ ಸಂಜನಾ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.

ಆಕ್ಟೋಬರ್ 16ರ ಮುಂಜಾನೆ ಬೆಂಗಳೂರಿನ ಈಜಿಪುರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಈ ದುರಂತದಲ್ಲಿ 7 ಜನರು ಮೃತಪಟ್ಟಿದ್ದರು. ಅಶೇಷಗಳಡಿ ಸಿಲುಕಿದ್ದ ಹಲವರನ್ನು ರಕ್ಷಣೆ ಮಾಡಲಾಗಿತ್ತು. ದುರಂತದಲ್ಲಿ ಅಶ್ವಿನಿ ಮತ್ತು ಶರವಣ ದಂಪತಿಯ 3 ವರ್ಷದ ಮಗು ಸಂಜನಾಳನ್ನು ರಕ್ಷಣೆ ಮಾಡಲಾಗಿತ್ತು.
ಸುಟ್ಟ ಗಾಯಗಳಾಗಿರುವ ಸಂಜನಾಗೆ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಆಕೆಯನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ರಾಮಲಿಂಗಾ ರೆಡ್ಡಿ ಅವರು ಸಂಜನಾ ಪೋಷಕರನ್ನು ಭೇಟಿ ಮಾಡಿದರು.

ಸೋಮವಾರ ನಡೆದ ಕಟ್ಟಡ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ5 ಲಕ್ಷ ರೂ. ಪರಿಹಾರ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಘೋಷಣೆ ಮಾಡಿದ್ದಾರೆ.












Click it and Unblock the Notifications