ಕನ್ನಡ ಚಿತ್ರರಂಗದ ಮೇಲೆ ನೋಟು ನಿಷೇಧದ ಪರಿಣಾಮ
ನರೇಂದ್ರ ಮೋದಿ ಅವರ ಅಪನಗದೀಕರಣದ ಪರಿಣಾಮ ಕನ್ನಡ ಚಿತ್ರರಂಗದ ಮೇಲೆಯೂ ಉಂಟಾಗಿದೆ. ಈ ಸಮಸ್ಯೆಯಿಂದ ಕಾರ್ಮಿಕರಿಗೆ ತೊಂದರೆ ಉಂಟಾಗದಂತೆ ದಾರಿ ಕಂಡುಕೊಳ್ಳಲು ಡಿ.5ರಂದು ಬೆಂಗಳೂರಿನಲ್ಲಿ ಸಂವಾದವನ್ನು ಏರ್ಪಡಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 3 : ಕನ್ನಡ ಚಿತ್ರರಂಗದ ಮೇಲೆ ನೋಟು ಅಪಮೌಲೀಕರಣ ಮತ್ತು ಏಕರೂಪ ತೆರಿಗೆ ಪರಿಣಾಮ ಕುರಿತು ಸಂವಾದ ಕಾರ್ಯಕ್ರಮವನ್ನು ಡಿಸೆಂಬರ್ 5ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಒಟ್ಟು 22 ಅಸಂಘಟಿತ ವಲಯಗಳಿದ್ದು, ಇಲ್ಲೆಲ್ಲಾ ನಗದು ಬಳಕೆ ಅನಿವಾರ್ಯವಾಗಿದೆ ಮತ್ತು ದಿನಗೂಲಿಯಾಗಿ ಕೆಲಸ ಮಾಡುವ ಕಾರ್ಮಿಕರ ಜೀವನ ಸಮಸ್ಯೆಗೆ ಸಿಲುಕಿದೆ. ಚಲನಚಿತ್ರ ನಿರ್ಮಾಣದ ಹಣದ ಹರಿವಿನ ಸ್ವರೂಪ ಸಂಕೀರ್ಣವಾಗಿದ್ದು ಉದ್ಯಮದ ಚೌಕಟ್ಟಿಗೆ ಒಳ ಪಟ್ಟಿದ್ದರೂ ಇಲ್ಲಿ ತೆರಿಗೆಯ ಕುರಿತು ಖಚಿತತೆ ಇಲ್ಲ.
ಈಗ ಬರುತ್ತಿರುವ ಏಕರೂಪ ತೆರಿಗೆ ಕುರಿತು ಹಾಗೂ ನೋಟು ಅಪನಗದೀಕರಣದ ಪರಿಣಾಮಗಳ ಕುರಿತು ಚಿತ್ರರಂಗಕ್ಕಿರುವ ಸಂಶಯಗಳಿಗೆ ದಾರಿ ಕಂಡುಕೊಳ್ಳುವುದು ಈ ಸಂವಾದದ ಮುಖ್ಯ ಉದ್ಧೇಶವಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಈ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. [ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್ -ಡೆಬಿಟ್ ಕಾರ್ಡ್ ಬಳಕೆಗೆ ಸಿದ್ಧರಾಗಿ]

ಸಂವಾದದಲ್ಲಿ ನ್ಯಾಯವಾದಿ ಹಾಗೂ ತೆರಿಗೆ ಸಮಾಲೋಚಕರಾದ ಕೆ. ವೈಥೀಶ್ವರನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಕೆ.ವಿ. ಚಂದ್ರಶೇಖರ್, ಚಾರ್ಟ್ರ್ಡ್ ಅಕೌಂಟೆಂಟ್ - ಸಿಪಿಯು (ಯುಎಸ್ಎ) ವಿವೇಕ್ ಮಲ್ಯ, ನಿರ್ಮಾಪಕ ಹಾಗೂ ವಿತರಕರಾದ ಕೆ.ಸಿ.ಎನ್. ಕುಮಾರ್, ಜಯಣ್ಣ, ವಕೀಲ ಹಾಗು ಬೆಂಗಳೂರು ಅಂತಾರಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಉಪಸ್ಥಿತರಿರುವರು.
ಸರ್ಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸುವರು. ಸುಧಾ ವಾರಪತ್ರಿಕೆಯ ಕಾರ್ಯಕಾರಿ ನಿರ್ವಾಹಕ ಸಂಪಾದಕ ಬಿ.ಎಂ. ಹನೀಫ್ ಅವರು ವಿಷಯ ಸಂಯೋಜಕರಾಗಿರುತ್ತಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications