ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಮಣಿ 'ಸಸ್ಪೆಂಡ್'
ಬೆಂಗಳೂರು, ನವೆಂಬರ್ 13: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಎನ್ನುವ ಕೈಪಿಡಿಯನ್ನು ಹೊರ ತಂದಿದ್ದ, ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ 'ಮಣಿ' ಎಂಬುವರನ್ನು ರಾಜ್ಯ ಸರ್ಕಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಅಂಬೇಡ್ಕರ್ ಗೆ ಅಪಮಾನಗೊಳಿಸುವ ಕೈಪಿಡಿಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರಕ್ಕೂ ಇದರ ಬಿಸಿ ತಾಗಿತ್ತು. ಇದು ಕಾವೇರುವಾಗಲೇ ಎಚ್ಚೆತ್ತುಗೊಂಡ ಸರ್ಕಾರ ಶಿಕ್ಷಣ ಇಲಾಖೆಯಿಂದ 'ಮಣಿ'ಯನ್ನು ಬಿಡುಗಡೆಗೊಳಿಸಿದೆ.
"ಅಂಬೇಡ್ಕರ್ ಸಂವಿಧಾನ ರಚಿಸಿಲ್ಲ ಅನ್ನುವ ಕೈಪಿಡಿಯನ್ನು ಸರ್ಕಾರದ ಗಮನಕ್ಕೆ ತರದೇ ಈ ಅಧಿಕಾರಿ ಆನ್ಲೈನ್ನಲ್ಲೂ ಅಪ್ಲೋಡ್ ಮಾಡುವ ಕುರಿತು ಸುತ್ತೋಲೆ ಹೊರಡಿಸಿದ್ದರು. ನಮ್ಮ ಗಮನಕ್ಕೆ ಬಂದ ಕೂಡಲೇ ಕೈಪಿಡಿಯನ್ನು ವಾಪಸ್ ಪಡೆದಿದ್ದು, ಇದು ಸರ್ಕಾರ ಅಥವಾ ಶಿಕ್ಷಣ ಇಲಾಖೆಯ ನಿಲುವಲ್ಲ" ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಸುತ್ತೋಲೆ ಪತ್ರವನ್ನು ನೋಡಿದಾಗ ಬಹುಶಃ ಶಿಕ್ಷಣ ಇಲಾಖೆ ನಿರ್ದೇಶಕ 'ಮಣಿ'ಯವರಿಗೆ ಸಂವಿಧಾನದ ಚಾರಿತ್ರಿಕ ಹಿನ್ನೆಲೆಯ ಅರಿವಿಲ್ಲ ಎಂದು ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದರು.

ಅಷ್ಟಕ್ಕೂ ಆಗಿದ್ದೇನು..? ಯಾರು ಈ ಮಣಿ..?
ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಕಚೇರಿಯ ಪ್ರೌಢ ಶಿಕ್ಷಣ ನಿರ್ದೇಶಕ ಇವರು ದಿನಾಂಕ:೨೮-೧೦-೨೦೧೯ ರಂದು ಸುತ್ತೋಲೆ ಹೊರಡಿಸಿ ನವೆಂಬರ್ ೨೬ ರಂದು 'ಸಂವಿಧಾನ ದಿನ'ವನ್ನಾಗಿ ಆಚರಿಸಲು ಸೂಚಿಸಿದ್ದಾರೆ. ಆ ಆದೇಶ ಪುಟ ೫ರಲ್ಲಿ "ಸಂವಿಧಾನವನ್ನು (ಡಾ.ಬಿ.ಆರ್. ಅಂಬೇಡ್ಕರ್) ಅವರೊಬ್ಬರೇ ಬರೆದಿರುವುದಿಲ್ಲ" ಎಂದು ನಮೂದಿಸಿದ್ದಾರೆ. ಈ ಸುತ್ತೋಲೆ ಪತ್ರವನ್ನು ನೋಡಿದಾಗ ಬಹುಶಃ ಶಿಕ್ಷಣ ಇಲಾಖೆ ನಿರ್ದೇಶಕ 'ಮಣಿ'ಯವರಿಗೆ ಸಂವಿಧಾನದ ಚಾರಿತ್ರಿಕ ಹಿನ್ನೆಲೆಯ ಅರಿವಿಲ್ಲ ಎಂದು ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ. ಇದರಿಂದ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಗೊಂದಲಮಯವಾಗಿತ್ತು. ಆ ಒಂದು ಹೇಳಿಕೆಯಿಂದ ಇಡೀ ಸರ್ಕಾರವೇ ತಲೆ ತಗ್ಗಿಸುವ ವಾತಾವರಣ ನಿರ್ಮಾಣವಾಗಿತ್ತು. ಈಗ ಶಿಕ್ಷಣ ಇಲಾಖೆ ನಿರ್ದೇಶಕ 'ಮಣಿ'ಯನ್ನು ಸಸ್ಪೆಂಡ್ ಮಾಡಿದ್ದು ಮತ್ತು ಆ ವಿವಾದಿತ ಕೈಪಿಡಿಯನ್ನು ವಾಪಸ್ ಪಡೆದಿದ್ದು ಆಗಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.












Click it and Unblock the Notifications