ವಿದ್ಯಾರ್ಥಿಗಳ ಕಲಾಸ್ಪರ್ಶದ 'ಮರುಹುಟ್ಟು ಗಣೇಶ'
ಬೆಂಗಳೂರು, ಆಗಸ್ಟ್, 31: ಈತನನ್ನು ಮರುಹುಟ್ಟು ಗಣೇಶ ಎಂದು ಕರೆಯಬಹುದು. ಪೂಜೆ ನಂತರ ಈ ಗಣೇಶನನ್ನು ವಿಸರ್ಜನೆ ಮಾಡಿದರೆ ಹೊಸ ಜೀವದ ಜನ್ಮಕ್ಕೆ ಮೂರ್ತಿ ನಾಂದಿ ಹಾಡುತ್ತದೆ.
ಪರಿಸರ ಸ್ನೇಹಿ ಗಣೇಶ ಎಂದರೆ ಹೇಗಿರಬೇಕು ಎಂಬುದಕ್ಕೆ ಈ ಗಣೇಶ ಸ್ಪಷ್ಟ ನಿದರ್ಶನ. ಬೆಂಗಳೂರಿನ ಸರ್ಕಾರಿ ಶಾಲಾ ಮಕ್ಕಳ ಗುಂಪು ಬರ್ಥ್ ಅಫ್ ನ್ಯೂ ಲೈಫ್(ಹೊಸ ಜೀವನಕ್ಕೆ ಜನ್ಮ)' ಗಣೇಶನ ಮೂರ್ತಿಗಳನ್ನು ಅನ್ವೇಷಿಸಿದ್ದಾರೆ.[ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ...]
ಮಾಗಡಿ ರಸ್ತೆ, ಪೊಲೀಸ್ ಕಾಲೊನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆರ್ಟ್ ಆಫ್ ಗಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ತಯಾರಾದ ಗಣೇಶನನನ್ನು ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಪರಿಸರ ಪ್ರೇಮಿ ಗಣೇಶನ ಸುತ್ತ ನಾವು ಒಂದು ಪ್ರದಕ್ಷಿಣೆ ಹಾಕಿಕೊಂಡು ಬರೋಣ...[ಪಿಓಪಿ ಗಣೇಶನ ಕೊಂಡರೆ ಜೈಲಲ್ಲೇ ಕರಿಗಡಬು, ಮೋದಕ!]
ಹೊಸ ಸಸ್ಯಸಂಪತ್ತಿಗೆ ಕಾರಣ
ಮಣ್ಣಿನ ಗಣಪನಲ್ಲಿ ಸಸ್ಯದ ಬೀಜಗಳನ್ನು ಇರಿಸಲಾಗುತ್ತದೆ. ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿದ ನಂತರ ಅವುಗಳಲ್ಲಿರುವ ಬೀಜಗಳು ಮೊಳಕೆಯೊಡೆದು ಹೊಸ ಸಸ್ಯವಾಗಿ ಬೆಳೆಯುತ್ತವೆ. ಅಂದರೆ ಶೂನ್ಯ ಪರಿಸರ ಮಾಲಿನ್ಯ ಮಾಲಿನ್ಯದ ಜತೆಗೆ ಪರಿಸರ ರಕ್ಷಣೆ.
ಮಾಲಿನ್ಯ ಮುಕ್ತ ಹಬ್ಬ
10ನೇ ತರಗತಿ ಎ ವಿಭಾಗದ ವಿದ್ಯಾರ್ಥಿನಿ ಕೌಸಲ್ಯ ಎಂ. ಮಾತನಾಡಿ ನಮ್ಮ ಹಬ್ಬಗಳು ಮಾಲಿನ್ಯದೊಂದಿಗೆ ತಳಕು ಹಾಕಿಕೊಂಡಿವೆ. ಗಣೇಶನ ಉತ್ಸವ ಜಲಮಾಲಿನ್ಯಕ್ಕೆ ಕಾರಣವಾಗುತ್ತಿದ್ದರೆ ದೀಪಾವಳಿಯಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಮಾಲಿನ್ಯರಹಿತವಾಗಿ ನಮ್ಮ ಹಬ್ಬಗಳನ್ನು ಆಚರಿಸುವುದು ಹೇಗೆಂದು ನಾವು ಆಲೋಚಿಸುತ್ತಿದ್ದಾಗ ಈ ಆಲೋಚನೆ ಬಂದಿತು ಎಂದು ಹೇಳುತ್ತಾರೆ.
ಜನರಿಗೆ ಸಕಾರಣ ಸಿಗಬೇಕು
ಜನರು ಅಗ್ಗವಾದ ಆಕರ್ಷಕವಾದ ವಿಗ್ರಹಗಳನ್ನು ಮಾತ್ರ ಕೊಳ್ಳಲು ಇಷ್ಟಪಡುತ್ತಾರೆ. ಅಂದರೆ ಜನರಿಗೆ ಪರಿಸರ ಸ್ನೇಹಿ ವಿಗ್ರಹಗಳನ್ನು ಬಳಸಲು ಸಕಾರಣ ದೊರೆಯಬೇಕು. ಈಗ ಪರಿಸರ ಸ್ನೇಹಿ ಉಪಕ್ರಮಗಳನ್ನು ಉತ್ತೇಜಿಸುತ್ತಿರುವ ಕೆಐಐಟಿ ಮತ್ತು ಕೆಐಎಸ್ಎಸ್ ಸಂಸ್ಥಾಪಕ ಡಾ.ಅಚ್ಯುತ ಸಮಂತ ಅವರಿಂದ ಸ್ಫೂರ್ತಿ ಪಡೆದು ಈ ಮೂರ್ತಿ ಅನ್ವೇಷಣೆ ಮಾಡಿದೆವು ಎಂದು ವಿದ್ಯಾರ್ಥಿಗಳು ತಿಳಿಸುತ್ತಾರೆ.
ಪರಿಸರ ಪ್ರೇಮ
ನಾವು ಮಣ್ಣು ಮತ್ತು ನಿಸರ್ಗ ಸಹಜ ವಸ್ತುಗಳನ್ನು ಮಾತ್ರ ಬಳಸುತ್ತೇವೆ. ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸುವಾಗ ರಾಗಿ ಅಥವಾ ಹೂವಿನ ಬೀಜಗಳನ್ನು ಅದರಲ್ಲಿ ಇರಿಸುತ್ತೇವೆ. ನೈಸರ್ಗಿಕ ವಸ್ತುಗಳನ್ನು ಬಳಸಿದರೆ ಗಣೇಶ ವಿಗ್ರಹ ಸುಲಭವಾಗಿ ಕರಗಲು ಸಾಧ್ಯವಾಗುತ್ತದೆ. ಅಲ್ಲದೆ ಅದರೊಳಗಿನ ಬೀಜಗಳು ಮೊಳಕೆಯೊಡೆಯುತ್ತವೆ ಎಂಬ ವಿವರಣೆಯನ್ನು ವಿದ್ಯಾರ್ಥಿಗಳು ನೀಡುತ್ತಾರೆ.
ಆರ್ಟ್ ಆಫ್ ಗಿವಿಂಗ್ ಮುಂದಾಳತ್ವ
ಆರ್ಟ್ ಆಫ್ ಗಿವಿಂಗ್ ಸಂಸ್ಥೆ ಬೆಂಗಳೂರಿನಲ್ಲಿ ಪರಿಸರ ರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಲ್ಲಿಯವರೆಗೂ ಹಲವಾರು ತ್ಯಾಜ್ಯದಿಂದ ಸಂಪತ್ತು' ಸೃಷ್ಟಿಸುವ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೇಗೆ ತ್ಯಾಜ್ಯ ಕಡಿಮೆ ಮಾಡಿ ಕಸವನ್ನು ಸುಂದರ ವಸ್ತುಗಳನ್ನಾಗಿ ಪರಿವರ್ತಿಸಬೇಕೆಂದು ತರಬೇತಿ ನೀಡಿದೆ.
ಮಾದರಿ ಕಾರ್ಯಕ್ರಮ
ಜನರಲ್ಲಿ ಪರಿಸರ ಪ್ರೇಮದ ಜಾಗೃತಿ ಸಾರುವುದರೊಂದಿಗೆ ಈ ನೂತನ ಆವಿಷ್ಕಾರ ಜನ ಮನ್ನಣೆಯನ್ನು ಪಡೆದುಕೊಳದಳುವುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳ ಸಾಧನೆಗೆ, ಹೊಸ ಆಲೋಚನೆಗೆ ನೀವು ಒಂದು ಅಭಿನಂದನೆ ಸಲ್ಲಿಸಿ.