ಬೆಂಗಳೂರು: ಮಳೆಗಾಲ ಎದುರಿಸಲು ಸಜ್ಜಾಯ್ತು ನಗರಾಭಿವೃದ್ಧಿ ಇಲಾಖೆ: ರಾಕೇಶ್ ಸಿಂಗ್ ಸಭೆ
ಬೆಂಗಳೂರು, ಜೂನ್ 15: ಬೆಂಗಳೂರಿನಲ್ಲಿ ಮಳೆಗಾಲದ ವೇಳೆ ಬಿಬಿಎಂಪಿ, ಜಲಮಂಡಳಿ, ಪೊಲೀಸ್, ಬೆಸ್ಕಾಂ, ಅಗ್ನಿ ಶಾಮಕ ದಳ ಹಾಗೂ SDRF ಇಲಾಖೆಯು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ನಗರದಲ್ಲಿ ಎಲ್ಲಿಯೂ ಯಾವೊಂದು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ ಮುಂಗಾರು ಆಗಮನವಾಗಿದೆ. ಇತ್ತ ಬಿಬಿಎಂಪಿ ಅಗತ್ಯ ಸಭೆ ನಡೆಸಿ ಮಳೆ ಹಾನಿ ಸಂಭವಿಸದಂತೆ ಕ್ರಮ ಕೈಗೊಳ್ಳುತ್ತಿದೆ. ಇತ್ತ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯು ಮುಂಗಾರು ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಜೊತೆ ನಡೆದ ಸಮನ್ವಯ ಸಭೆ ನಡೆಸಿತು.

ಈ ವೇಳೆ ಮಾತನಾಡಿದ ರಾಕೇಶ್ ಸಿಂಗ್ ಅವರು, ಮಳೆಗಾಲದಲ್ಲಿ ಎಲ್ಲಿಯೂ ಜಲಾವೃತವಾಗದಂತೆ ರಾಜಕಾಲುವೆ, ಚರಂಡಿಗಳಲ್ಲಿ ಹೂಳನ್ನು ತೆರವುಗೊಳಿಸಬೇಕು. ಹೂಳೆತ್ತಿರುವ ಬಗ್ಗೆ ಲೊಕೇಷನ್ ಸಹಿತ ಛಾಯಾಚಿತ್ರಗಳನ್ನು ತೆಗೆದು ನಿಖರವಾದ ಮಾಹಿತಿಯನ್ನು ದಾಖಲಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಮನ್ವಯದ ಸಾಧಿಸಿ ಕೆಲಸ ಮಾಡಿ
ನಗರದಲ್ಲಿ 20 ಅಗ್ನಿಶಾಮಕ ಠಾಣೆ ಹಾಗೂ 1ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಇದ್ದು, ನಗರದಲ್ಲಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಜಲಾವೃತವಾಗಿರುವ ಪ್ರದೇಶದ ಮಾಹಿತಿ ನೀಡಿದ ತಕ್ಷಣ ಅಗ್ನಿ ಶಾಮಕ ದಳ ಹಾಗೂ NDRF ತಂಡವು ತ್ವರಿತವಾಗಿ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಾದಂತಹ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಜೊತೆಗೆ ನಗರದಲ್ಲಿರುವ ಎಲ್ಲಾ ಅಗ್ನಿ ಶಾಮಕ ಠಾಣೆ ಹಾಗೂ ಕಛೇರಿ ಮುಖ್ಯಸ್ಥರ ಮಾಹಿತಿ, ದೂರವಾಣಿ ಸಂಖ್ಯೆಯನ್ನು ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ನೀಡಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ನಗರದಲ್ಲಿ ಎಲ್ಲೆಲ್ಲಿ BMRCL ವತಿಯಿಂದ ಕೆಲಸ ನಡೆಯುತ್ತಿದೆ, ಅಂತಹ ಸ್ಥಳಗಳಲ್ಲಿ ಮಳೆ ನೀರು ಹರಿಯುವಿಕೆಯ ಚರಂಡಿಗಳನ್ನು ಹಾಳುಮಾಡಿದ್ದರೆ ಅದನ್ನು ಪಟ್ಟಿ ಮಾಡಿ ಮೆಟ್ರೊ ಇಲಾಖೆಯ ಗಮನಕ್ಕೆ ತಂದು ದುರಸ್ಥಿಗೊಳಿಸಬೇಕು.
ಪ್ರವಾಹದ ಸ್ಥಳಗಳಿಗೆ ಖದ್ದು ಭೇಟಿ ನೀಡಿ ಪರಿಹಾರ ಕೈಗೊಳ್ಳಿ
ನಗರದಲ್ಲಿ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಿರಲು ಆಯಾ ವಲಯ ವ್ಯಾಪ್ತಿಯ ಪಾಲಿಕೆ ಹಿರಿಯ ಅಧಿಕಾರಿಗಳು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಇಲಾಖೆಯ ಜೊತೆಗೆ 198 ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳಿಗೆ ಜಂಟಿಯಾಗಿ ಖುದ್ದು ಭೇಟಿ ನೀಡಬೇಕು. ಆ ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ರಾಕೇಶ್ ಸಿಂಗ್ ಸಲಹೆ ನೀಡಿದರು.
ಅರಣ್ಯ ವಿಭಾಗದಿಂದ 6 ಡಿಪೋ ವ್ಯವಸ್ಥೆ
ಬಿಬಿಎಂಪಿ ವ್ಯಾಪ್ತಿಯ ಆಯ ವಲಯ ವ್ಯಾಪ್ತಿಯಲ್ಲಿ ಬಿದ್ದಂತಹ ಮರಗಳ ದಿಮ್ಮೆ ಹಾಗೂ ಸೌದೆಗಳ ಸಂಗ್ರಹಕ್ಕಾಗಿ ದಕ್ಷಿಣ ಹಾಗೂ ಆರ್.ಆರ್.ನಗರ ವಲಯಗಳನ್ನು ಹೊರತುಪಡಿಸಿ, ಉಳಿದ 6 ವಲಯಗಳಲ್ಲೂ ಡಿಪೋ ವ್ಯವಸ್ಥೆ ಮಾಡಲಾಗಿದ್ದು, ಉಳಿದೆರಡು ವಲಯದಲ್ಲೂ ತ್ವರಿತವಾಗಿ ಡಿಪೋ ತೆರೆಯಲು ಸೂಚನೆ ನೀಡಿದರು. ಜೊತೆಗೆ ಮರದ ಎಲೆ, ರೆಂಬೆ-ಕೊಂಬೆಗಳ ತೆರವಿಗಾಗಿ ಆಯಾ ವಲಯಗಳಲ್ಲಿ ಡಂಪಿಂಗ್ ಯಾರ್ಡ್ ವ್ಯವಸ್ಥೆ ಮಾಡಿಕೊಳ್ಳಲು ಉಪ ಅರಣ್ಯ ಸಂರಕ್ಷಾಧಿಕಾರಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಹವಾಮಾನದ ಮುನ್ಸೂಚನೆ ನೀಡುತ್ತದೆ. ಅದರನುಸಾರ ನಗರದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬುದನ್ನು ತಿಳಿದು ಎಲ್ಲಾ ಪಾಲಿಕೆ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸದಾ ಸನ್ನದ್ಧರಾಗಿರಬೇಕು ಎಂದು ಹೇಳಿದರು.
ಸೂಪರ್ ಸಕ್ಕಿಂಗ್ ಯಂತ್ರಗಳ ಹಸ್ತಾಂತರಕ್ಕೆ ಸೂಚನೆ
ಮಳೆಗಾಲದಲ್ಲಿ ಜಲಾವೃತವಾಗುವ ಪ್ರದೇಶಗಳಲ್ಲಿ ನೀರನ್ನು ತೆರವುಗೊಳಿಸುವ ಸಲುವಾಗಿ ಜಲಮಂಡಳಿ ಬಳಿ ಇರುವಂತಹ 6 ಸೂಪರ್ ಸಕ್ಕಿಂಗ್ ಯಂತ್ರಗಳನ್ನು ಮಳೆಗಾಲ ಮುಗಿಯುವವರೆಗೆ ಬಿಬಿಎಂಪಿಗೆ ಹಸ್ತಾಂತರಿಸಲು ಮುಖ್ಯ ಆಯುಕ್ತರು ಜಲಂಡಳಿ ಅಧಿಕಾರಿಗೆ ಸೂಚನೆ ನೀಡಿದರು.
ಕಂಟ್ರೋಲ್ ರೂಂ: ತ್ವರಿತವಾಗಿ ಸ್ಪಂದಿಸಿ
ಬಿಬಿಎಂಪಿ ವ್ಯಾಪ್ತಿ 8 ವಲಯ ಹಾಗೂ ಕೇಂದ್ರ ಕಛೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಇವೆ. 63 ಉಪ ವಿಭಾಗ ನಿಯಂತ್ರಣ ಕೊಠಡಿಗಳಿವೆ. ಪಾಲಿಕೆ ಕೇಂದ್ರ ಕಛೇರಿಯಲ್ಲಿರುವ ಸೆಂಟ್ರಲ್ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಜೊತೆಗೆ ಮೇಲ್ವಿಚಾರಣೆ ಮಾಡಲಿದೆ.
ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಹಾಗೂ ಸಹಾಯ ತಂತ್ರಾಂಶದ ಮೂಲಕ ಬರುವಂತಹ ದೂರುಗಳನ್ನು ನಿಯಂತ್ರಣ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿನ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲಿದ್ದಾರೆ.
ಸಭೆಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್, ಎಲ್ಲಾ ವಲಯ ಆಯುಕ್ತರು, ಬೆಸ್ಕಾಂ, ಜಲಮಂಡಳಿ, ಕೆ.ಪಿ.ಟಿ.ಸಿ.ಎಲ್, ಸ್ಮಾರ್ಟ್ ಸಿಟಿ, ಅಗ್ನಿಶಾಮಕ, ಎಸ್.ಡಿ.ಆರ್.ಎಫ್, ಪಾಲಿಕೆಯ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications